ಫಲಿತಾಂಶದ ದಿನ ಇತಿಹಾಸ ನಿರ್ಮಾಣವಾಗಲಿದೆ: ಮೋದಿ
ನವದೆಹಲಿ, ಮೇ 17: ಪ್ರಧಾನಿಯಾಗಿ ಐದು ವರ್ಷ ಪೂರೈಸಿದ ಮೋದಿ ತಮ್ಮ ಅಧಿಕಾರಾವಧಿಯಲ್ಲಿ ಇಂದು ಮೊದಲ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದರು. ಆದರೆ ಅಲ್ಲಿಯೂ ಸಹ ಒಂದೂ ಪ್ರಶ್ನೆಯನ್ನು ಮೋದಿ ಸ್ವೀಕರಿಸಲಿಲ್ಲ. ಅವರ ಬದಲಿಗೆ ಪತ್ರಕರ್ತರ ಎಲ್ಲ ಪ್ರಶ್ನೆಗಳಿಗೆ ಅಮಿತ್ ಶಾ ಅವರೇ ಉತ್ತರ ನೀಡಿದರು.
ದೆಹಲಿಯ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋದಿ, ಬಹಳ ವಿಸ್ತೃತವಾದ, ಅಭಿವೃದ್ಧಿ ಮುಖ್ಯನೆಲೆಯಲ್ಲಿನ ಚುನಾವಣಾ ಪ್ರಚಾರವನ್ನು ಉತ್ಸಾಹದಿಂದ ಮುಗಿಸಿದ್ದೇವೆ, ಮತ್ತೊಮ್ಮೆ ನಾವೇ ಸರ್ಕಾರ ರಚಿಸುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮೌನ: ಮೋದಿಯನ್ನು ಅಣಕಿಸಿದ ಕಾಂಗ್ರೆಸ್
ಈ ಮೊದಲು ಚುನಾವಣೆ ನಡೆದರೆ ಐಪಿಎಲ್ ಅನ್ನು ದೇಶದಿಂದ ಹೊರಕ್ಕೆ ತೆಗೆದುಕೊಂಡು ಹೋಗುತ್ತಿದ್ದರು, ಆದರೆ ಈ ಬಾರಿ ನಮ್ಮ ಅವಧಿಯಲ್ಲಿ ಹಾಗಾಗಲಿಲ್ಲ, ಐಪಿಎಲ್, ಮಕ್ಕಳ ಪರೀಕ್ಷೆ, ರಂಜಾನ್, ಹನುಮ ಜಯಂತಿ ಎಲ್ಲವೂ ಒಟ್ಟಿಗೆ ಮಾಡಿದೆವು, ಇದು ಭಾರತದ ಶಕ್ತಿ ಎಂದು ಮೋದಿ ಹೇಳಿದರು.
ಈಗಾಗಲೇ ಐದು ವರ್ಷ ಪೂರೈಸಿರುವ ಸರ್ಕಾರವೊಂದು ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಪಡೆದು ಮತ್ತೆ ಅಧಿಕಾರ ಹಿಡಯುತ್ತಿರುವುದು ಇದು ಕೇವಲ ಎರಡನೇ ಬಾರಿಯಷ್ಟೆ. ಅದೂ ಸಹ ದಶಕಗಳ ನಂತರ ಈ ರೀತಿಯ ಅದ್ಭುತ ಘಟನೆ ಘಟಿಸಲು ಹೊರಟಿದೆ, ಇದೊಂದು ಇತಿಹಾಸವಾಗಲಿದೆ ಎಂದು ಅವರು ಹೇಳಿದರು.
ಸುದೀರ್ಘ ಪ್ರಚಾರ ಪ್ರವಾಸ
ಈ ಲೋಕಸಭೆ ಚುನಾವಣೆಯ ನನ್ನ ಮೊದಲ ಪ್ರಚಾರ ಸಮಾವೇಶ ಉತ್ತರ ಪದೇಶದ ಮೀರಟ್ನಲ್ಲಿ ನಡೆಯಿತು, ಇಂದು ಕೊನೆಯ ಸಮಾವೇಶ ಮಧ್ಯಪ್ರದೇಶದ ಕಾರ್ಗೋನೆಯಲ್ಲಿ ನಡೆಯಿತು, ಮೊದಲ ದಿನ ಉತ್ಸಾವನ್ನೇ ಇಲ್ಲಿಯವರೆಗೆ ಕಾಯ್ದುಕೊಂಡು ಬಂದಿದ್ದೇವೆ ಎಂದು ಮೋದಿ ಹೇಳಿದರು.
ಜನರಿಗೆ ಧನ್ಯವಾದ ಅರ್ಪಿಸಿದ್ದೇನೆ: ಮೋದಿ
ಪ್ರಚಾರಕ್ಕೆ ತೆರಳುವ ಮೊದಲೇ ನಿರ್ಣಯಿಸಿದಂತೆ, ಈ ಐದು ವರ್ಷ ಜನರು ನನಗೆ ನೀಡಿದ ಬೆಂಬಲ, ಮಾಡಿದ ಆಶೀರ್ವಾದಕ್ಕೆ ಧನ್ಯವಾದ ಹೇಳಲು ಜನರ ಬಳಿಕೆ ಹೋಗಿದ್ದೆ, ಅಂತೆಯೇ ಈ ಐದು ವರ್ಷ ನನಗೆ ನೀಡಿದ ಬೆಂಬಲಕ್ಕೆ ಜನರಿಗೆ ಧನ್ಯವಾದ ಅರ್ಪಿಸಿದ್ದೇ, ಜನ ಮತ್ತೆ ನಮ್ಮನ್ನೇ ದೆಹಲಿಯಲ್ಲಿ ನೋಡಲು ಬಯಸುತ್ತಿದ್ದಾರೆ ಎಂದು ಮೋದಿ ಹೇಳಿದರು.
ಒಂದೂ ಕಾರ್ಯಕ್ರಮ ರದ್ದಾಗಲಿಲ್ಲ: ಮೋದಿ
ಸುಧೀರ್ಘ ಪ್ರಚಾರ ಸಭೆಯನ್ನು ಯೋಜಿಸಿದ, ಚುನಾವಣೆಯಲ್ಲಿ ದುಡಿದ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದ ಮೋದಿ, ಸುದೀರ್ಘ ಪ್ರಚಾರ ಪ್ರವಾಸ ಮಾಡಿದರೂ ಸಹ ನನ್ನ ಒಂದೂ ಕಾರ್ಯಕ್ರಮ ರದ್ದಾಗಲಿಲ್ಲ, ಚುನಾವಣೆ ಘೋಷಣೆ ನಂತರ ಯೋಜಿಸಿದಂತೆಯೇ ಪ್ರತಿಯೊಂದು ಸಮಾವೇಶ, ಕಾರ್ಯಕ್ರಮ ನಡೆಯಿತು ಎಂದು ಮೋದಿ ಹೇಳಿದರು.
'ವಿಶ್ವದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು'
ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು, ನಮ್ಮ ಭವ್ಯತೆಯನ್ನು, ಪ್ರಜಾಪ್ರಭುತ್ವದ ಶಕ್ತಿಯನ್ನು ವಿಶ್ವಕ್ಕೆ ಪ್ರದರ್ಶಿಸುವ ಕಾರ್ಯ ಕೇವಲ ಸರ್ಕಾರದ್ದು ಮಾತ್ರವಲ್ಲ, ನಮ್ಮೆಲ್ಲರದ್ದೂ ಆಗಿದೆ, ಎಲ್ಲರೂ ಸೇರಿ ಈ ಕಾರ್ಯವನ್ನು ಯಶಸ್ವಿಗೊಳಿಸಬೇಕಿದೆ ಎಂದು ಮೋದಿ ಹೇಳಿದರು.