ಸಂಸತ್ ಬಯಸಿದರೆ ಪಾಕ್ ಆಕ್ರಮಿತ ಪ್ರದೇಶ ವಶಕ್ಕೆ ಪಡೆಯಲು ಸಿದ್ಧ: ನರವಾಣೆ
ನವದೆಹಲಿ, ಜನವರಿ 11: ಸರ್ಕಾರ ಆದೇಶ ನೀಡಿದರೆ ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಕ್ಕೆ ಪಡೆಯಲು ನಾವು ಸಿದ್ಧ ಎಂದು ಸೇನಾ ಮುಖ್ಯಸ್ಥ ಮುಕುಂದ್ ನರವಾಣೆ ತಿಳಿಸಿದ್ದಾರೆ.
ಪಿಒಕೆಯನ್ನು ವಶಪಡಿಸಿಕೊಳ್ಳಲು ಭಾರತೀಯ ಸೇನೆ ಸಿದ್ಧವಿದೆ. ಆದರೆ, ಸರ್ಕಾರದ ಆದೇಶ ಅಗತ್ಯ ಎಂದು ಇತ್ತೀಚಿನ ಸಂದರ್ಶನವೊಂದರಲ್ಲೂ ನರವಾಣೆ ಹೇಳಿದ್ದರು. ಪೂರ್ಣ ಜಮ್ಮು-ಕಶ್ಮೀರ ಭಾರತದ ಅಂಗ ಎಂಬ ಬಗ್ಗೆ ಸಂಸತ್ ನಿರ್ಣಯ ಇದೆ.
#WATCH Army Chief on if PoK can be part of India as stated by political leadership: There is a parliamentary resolution that entire J&K is part of India.If Parliament wants it,then,PoK also should belong to us. When we get orders to that effect, we'll take appropriate action pic.twitter.com/P8Rbfwpr2x
— ANI (@ANI) January 11, 2020
ಸಂಸತ್ ಅದನ್ನು ಬಯಸಿದರೆ ಪಿಒಕೆಯೂ ನಮಗೆ ಸೇರಬೇಕು. ಈ ನಿಟ್ಟಿನಲ್ಲಿ ಆದೇಶ ಬಂದರೆ ಕ್ರಮ ಕೈಗೊಳ್ಳಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
ರಕ್ಷಣಾ ಪಡೆಯ ಮುಖ್ಯಸ್ಥರ ಹುದ್ದೆ ರಚನೆಯು ಭಾರತೀಯ ಸೇನೆಯ ಮೂರೂ ಪಡೆಗಳ ಸಂಯೋಜನೆಗೆ ಬಹಳ ದೊಡ್ಡ ಹೆಜ್ಜೆಯಾಗಿದ್ದು ಇದರಿಂದ ಭಾರತೀಯ ಸೇನೆ ಯಶಸ್ಸಿನತ್ತ ಮುನ್ನಡೆಯಲಿದೆ ಎಂದು ಕೂಡ ಹೇಳಿದರು.
ಜಮ್ಮು-ಕಾಶ್ಮೀರದ ಗಡಿಯಲ್ಲಿ ಮತ್ತೊಮ್ಮೆ ಬಾಲ ಬಿಚ್ಚಿದ ಪಾಕಿಸ್ತಾನ
ರಕ್ಷಣಾ ಪಡೆ ಮುಖ್ಯಸ್ಥರ ಹುದ್ದೆ ರಚನೆ ಮತ್ತು ಮಿಲಿಟರಿ ವ್ಯವಹಾರಗಳ ಇಲಾಖೆಗಳನ್ನು ಸ್ಥಾಪಿಸಿರುವುದು ಭಾರತೀಯ ಸೇನೆಯೊಳಗೆ ಸಮನ್ವಯತೆ ವಿಚಾರದಲ್ಲಿ ಬಹಳ ದೊಡ್ಡ ಹೆಜ್ಜೆಯಾಗಿದೆ. ಸೇನೆಯೊಳಗೆ ಸಮನ್ವಯತೆ ಮತ್ತು ಸಂಯೋಜಿತ ಸಮರ ಪಡೆ ಅದಕ್ಕೊಂದು ಉದಾಹರಣೆಯಷ್ಟೆ. ಈ ಸಮನ್ವಯತೆ ಅಥವಾ ಸಂಯೋಜನೆ ಪ್ರಕ್ರಿಯೆಯಲ್ಲಿ ನಾವು ಪ್ರತಿಯೊಬ್ಬರನ್ನೂ ಕರೆದುಕೊಂಡು ಮುಂದೆ ಹೋಗುತ್ತೇವೆ. ಯಾರನ್ನೂ ಹಿಂದೆ ಬಿಡುವುದಿಲ್ಲ ಎಂದರು.
ಸಂವಿಧಾನ ನಿಷ್ಠೆಯು ನಮಗೆ ಎಲ್ಲಾ ಸಮಯದಲ್ಲಿಯೂ ಮಾರ್ಗದರ್ಶನ ನೀಡಬೇಕು. ಸಂವಿಧಾನದಲ್ಲಿ ಸ್ಥಾಪಿತವಾಗಿರುವ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳು ನಮಗೆ ಜೀವನದಲ್ಲಿ ಮಾರ್ಗದರ್ಶನವಾಗಬೇಕು ಎಂದರು.
ಭವಿಷ್ಯದಲ್ಲಿ ಯುದ್ಧಗಳಿಗೆ ಸೇನೆಯನ್ನು ತಯಾರು ಮಾಡುವುದು ನಮ್ಮ ತರಬೇತಿಯ ಮುಖ್ಯ ಗುರಿಯಾಗಿದ್ದು, ಉತ್ತರದ ಗಡಿಭಾಗದಲ್ಲಿ ಸವಾಲುಗಳನ್ನು ಎದುರಿಸಲು ನಾವು ಸನ್ನದ್ಧವಾಗಿದ್ದೇವೆ ಎಂದು ಚೀನಾ ದೇಶ ಮಿಲಿಟರಿ ಮೂಲಭೂತ ಸೌಕರ್ಯಗಳನ್ನು ವಿಸ್ತರಿಸುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದರು.