ಕೊರೊನಾ ವಾರಿಯರ್ಸ್ಗೆ ತಲೆ ಬಾಗಿದ ದೇಶದ ಖಾಯಂ ವಾರಿಯರ್ಸ್
ನವದೆಹಲಿ, ಮೇ 1: ದೇಶದಲ್ಲಿ ಕೊರೊನಾ ಹಾವಳಿಯನ್ನು ತಡೆಗಟ್ಟಲು ಅಥವಾ ಕೊರೊನಾ ಅಟ್ಟಹಾಸ ತಡೆಯಲು ಭಾರತ ಒಂದು ಮಟ್ಟಿಗೆ ಯಶಸ್ವಿಯಾಗಿದೆ ಎಂಬ ವಿಶ್ಲೇಷಣೆಗಳು ಕೇಳಿ ಬರುತ್ತಿವೆ.
ಸೂಕ್ತ ಸಂದರ್ಭದಲ್ಲಿ ಲಾಕ್ಡೌನ್ ತೀರ್ಮಾನ ತೆಗೆದುಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಸರಿಯಾದದ್ದನ್ನೇ ಮಾಡಿದರು ಎನ್ನಲಾಗುತ್ತಿದೆ. ಆದರೆ, ಕೊರೊನಾ ಮಟ್ಟಹಾಕಲು ದೇಶದ ವೈದ್ಯರು, ಪೊಲೀಸರು, ವೈದ್ಯಕೀಯ ಸಿಬ್ಬಂದಿ, ಸಫಾಯಿ ಕರ್ಮಚಾರಿಗಳು, ಮಾಧ್ಯಮದವರು ಹಗಲು ರಾತ್ರಿ ಕೆಲಸ ಮಾಡಿ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಇವರನ್ನೆಲ್ಲ ಕೊರೊನಾ ವಾರಿಯರ್ಸ್ ಎಂದು ಜನ ಅಭಿಮಾನದಿಂದ ಕರೆದರು.
ಬ್ರೇಕಿಂಗ್ ನ್ಯೂಸ್; ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ
ದೇಶಕ್ಕೆ ಬಾಹ್ಯ ಶಕ್ತಿಗಳು ಆಕ್ರಮಣ ಮಾಡಿದಾಗ ಯಾವ ರೀತಿ ನಮ್ಮ ಸೇನಾಶಕ್ತಿಗಳು ಪ್ರಾಣದ ಹಂಗು ತೊರೆದು ಹೋರಾಡುತ್ತವೋ ಅದೇ ರೀತಿ ಕೊರೊನಾ ವಾರಿಯರ್ಸ್ ಕೂಡ ತಮ್ಮ ಪ್ರಾಣದ ಹಂಗು ತೊರೆದು ಕಣ್ಣಿಗೆ ಕಾಣದ ಹುಳು (ಕೊರೊನಾ) ವಿರುದ್ಧ ಹೋರಾಡುತ್ತಿದ್ದಾರೆ. ಹೀಗಾಗಿ ಖಾಯಂ ವಾರಿಯರ್ಸ್ ಆ್ ಭಾರತೀಯ ಮೂರೂ ಸೇನಾ ಶಕ್ತಿಗಳು ಕೊರೊನಾ ವಾರಿಯರ್ಸ್ ಗೆ ತಲೆಬಾಗಿ ಅವರಿಗೆ ವಿಶೇಷ ಗೌರವ ಸಲ್ಲಿಸಲು ಮುಂದಾಗಿದೆ.
ವಿಶೇಷ ಸುದ್ದಿಗೋಷ್ಠಿ
ಇಂದು ಭಾರತೀಯ ಸೇನಾ ಇತಿಹಾಸದಲ್ಲಿ ವಿಶಿಷ್ಟ ದಿನವಾಗಿ ದಾಖಲಾಯಿತು. ಭಾರತೀಯ ಸೇನಾ ಸಿಬ್ಬಂದಿ ಮುಖ್ಯಸ್ಥ (CDS) ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಮನೋಜ್ ನರವಾನೆ, ನೌಕಾ ಸೇನಾ ಮುಖ್ಯಸ್ಥ ಕರಂಬೀರ್ ಸಿಂಗ್ ಹಾಗೂ ವಾಯುಸೇನಾ ಮುಖ್ಯಸ್ಥ ಆರ್ ಕೆ ಎಸ್ ಬಡೌರಿಯಾ ಅವರು ಇಂದು ಸಂಜೆ ಒಟ್ಟಿಗೆ ಸುದ್ದಿಗೋಷ್ಟಿ ನಡೆಸಿ, ಕೊರೊನಾ ವಾರಿಯರ್ಸ್ ಗೆ ನಮ್ಮದೊಂದು ಸಲಾಂ ಎಂದರು.
ಕೊರೊನಾ ವಾರಿಯರ್ಸ್ ಗೆ ಆಕಾಶದಿಂದ ಪುಷ್ಪ ನಮನ
ಕೊರೊನಾ ವಾರಿಯರ್ಸ್ ಗೆ ನಮನ ಸಲ್ಲಿಸುವ ಉದ್ದೇಶದಿಂದ ರಿಯಲ್ ವಾರಿಯರ್ಸ ಗಳಿಂದ ಆಕಾಶದಿಂದ ಪುಷ್ಪ ನಮನ ಸಲ್ಲಿಸಲಾಗುವುದು ಎಂದು ಬಿಪಿನ್ ರಾವತ್ ತಿಳಿಸಿದರು. ಮೇ 3 ರಂದು ಪ್ಲೈ ಪಾಸ್ಟ್ ನಡೆಸಲಾಗುವುದು, ಶ್ರೀನಗರದಿಂದ ತಿರುವನಂತಪುರಂ ವರೆಗೆ ಹಾಗೂ ಅಸ್ಸಾಂ ದಿಬ್ರುಗಡ್ ದಿಂದ ಗುಜರಾತ್ ಕಚ್ ವರೆಗೆ ಹೆಲಿಕಾಪ್ಟರ್ ನಲ್ಲಿ ಪುಷ್ಪ ವೃಷ್ಠಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಕೊರೊನಾ ವಾರಿಯರ್ಸ್ ಜೊತೆ ನಾವಿದ್ದೇವೆ
ಕೊರೊನಾ ವಿರುದ್ಧ ಹೋರಾಟದಲ್ಲಿ ನಾವು ದೇಶದೊಂದಿಗೆ ಇದ್ದೇವೆ. ಕೊರೊನಾ ವಾರಿಯರ್ಸ್ ಜೊತೆ ನಾವಿದ್ದೇವೆ. ಅವರಿಗೆ ಸ್ಪೂರ್ತಿ ತುಂಬಲು ನಾವು ಮೇ 3 ರಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನೌಕಾಸೇನೆಯಿಂದ ನೌಕಾನೆಲೆಯಲ್ಲಿ ದೀಪ ಉರಿಸುವುದು, ಸೇನೆಯಿಂದ ಮೌಂಟೇನ್ ಬ್ಯಾಂಡ್ ನುಡಿಸಲಾಗುವುದು ಎಂದು ರಾವತ್ ತಿಳಿಸಿದರು.
14 ಸೈನಿಕರಿಗೆ ಮಾತ್ರ ಕೊರೊನಾ ಸೊಂಕು
ಕೊರೊನಾ ವೈರಸ್ ಸಮಸ್ಯೆಯನ್ನು ನಿಭಾಯಿಸುವಲ್ಲಿ ಯಾವುದೇ ತೊಂದರೆಗಳಿಲ್ಲ. ಸೈನ್ಯದ ಮೊದಲ ರೋಗಿ ಗುಣಮುಖರಾಗಿದ್ದು ಮತ್ತೆ ಕರ್ತವ್ಯಕ್ಕೆ ಬಂದಿದ್ದಾರೆ. ಸೈನ್ಯವು ಇಲ್ಲಿಯವರೆಗೆ ಕೇವಲ 14 ಪ್ರಕರಣಗಳನ್ನು ಮಾತ್ರ ಹೊಂದಿದ್ದು, ಅವುಗಳಲ್ಲಿ 5 ಗುಣಮುಖವಾಗಿವೆ ಮತ್ತು ಅವರು ಕೆಲಸಕ್ಕೆ ಮರಳಿದ್ದಾರೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಎಂ ನಾರವಾನೆ ತಿಳಿಸಿದರು.