14 ದಿನ ಐಸೊಲೇಷನ್ ನಲ್ಲಿದ್ದ ದೆಹಲಿಯ ಕೊರೊನಾ ಪೀಡಿತ ಏನೇನೆಲ್ಲಾ ಮಾಡಿದ್ದ ಗೊತ್ತಾ?
ನವದೆಹಲಿ, ಮಾರ್ಚ್ 17: ವಿಶ್ವದಾದ್ಯಂತ ಇಲ್ಲಿಯವರೆಗೂ ಒಟ್ಟು 182,723 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಅದರಲ್ಲಿ ಈಗಾಗಲೇ 7174 ಮಂದಿ ಸಾವನ್ನಪ್ಪಿದ್ದಾರೆ.
Recommended Video
ಡೆಡ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡಿ ಜಗತ್ತಿನಾದ್ಯಂತ ಈವರೆಗೂ ಒಟ್ಟು 79,883 ಮಂದಿ ಸಾವಿನ ದವಡೆಯಿಂದ ಬಚಾವ್ ಆಗಿ ಬಂದಿದ್ದಾರೆ. ಭಾರತದಲ್ಲೇ 13 ಮಂದಿ ಸಾವಿನ್ನೇ ಗೆದ್ದಿದ್ದಾರೆ. ಆ ಪೈಕಿ ಕೊರೊನಾ ಎಂಬ ಕೀಚಕನಿಂದ ತಪ್ಪಿಸಿಕೊಂಡು ಬಂದ 45 ವರ್ಷದ ದೆಹಲಿಯ ಉದ್ಯಮಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಸಾವಿನ ಮನೆಯಿಂದ ಎದ್ದು ಬಂದ ಕೊರೊನಾ ಪೀಡಿತ ಭಾರತೀಯನ ರೋಚಕ ಕಥೆ
ಅಸಲಿಗೆ, ಕೊರೊನಾ ಸೋಂಕು ದೆಹಲಿಯಲ್ಲಿ ಮೊಟ್ಟ ಮೊದಲು ದೃಢಪಟ್ಟಿದ್ದು ಈ 45 ವರ್ಷದ ದೆಹಲಿಯ ಉದ್ಯಮಿಗೆ (ಹೆಸರು ಬಹಿರಂಗ ಪಡಿಸಿಲ್ಲ). ಎರಡು ವಾರಗಳ ಕಾಲ ದೆಹಲಿಯ ಆಸ್ಪತ್ರೆಯಲ್ಲಿ ಐಸೊಲೇಷನ್ (ಪ್ರತ್ಯೇಕವಾಗಿ) ನಲ್ಲಿದ್ದ ಉದ್ಯಮಿ ಏನೇನೆಲ್ಲಾ ಮಾಡಿದ್ದರು ಗೊತ್ತಾ.? ಸಂದರ್ಶನವೊಂದರಲ್ಲಿ ಅವರೇ ಹೇಳಿಕೊಂಡಿದ್ದಾರೆ ಓದಿರಿ...
ಕತ್ತಲೆ ಕೋಣೆ ಇರಲಿಲ್ಲ
''ನನ್ನನ್ನ ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿತ್ತು. ಆ ಕೊಠಡಿಯಲ್ಲಿ ಎ.ಸಿ ಸೇರಿದಂತೆ ಎಲ್ಲಾ ಸೌಲಭ್ಯಗಳು ಇದ್ದವು. ಕಿಟಕಿಯಿಂದ ಸೂರ್ಯನ ಬೆಳಕು ಚೆನ್ನಾಗಿ ಬರುತ್ತಿತ್ತು. ಸಿನಿಮಾಗಳಲ್ಲಿ ಕರಾಳವಾಗಿ ತೋರಿಸುವ ಹಾಗೆ ಕತ್ತಲೆ ಕೋಣೆಗಳು ಅಲ್ಲಿ ಇರಲಿಲ್ಲ'' ಎಂದು ಆಸ್ಪತ್ರೆಯಲ್ಲಿನ ವ್ಯವಸ್ಥೆ ಬಗ್ಗೆ ಉದ್ಯಮಿ ಹೇಳಿದ್ದಾರೆ.
ವೈದ್ಯರು ಕಾಳಜಿ ವಹಿಸಿದ್ದರು
''ಆಸ್ಪತ್ರೆಯಲ್ಲಿನ ವೈದ್ಯರು ನನ್ನ ಬಗ್ಗೆ ಕಾಳಜಿ ವಹಿಸಿದ್ದರು. ಯಾರೂ ನನಗೆ ಭಯ ಪಡಿಸಲಿಲ್ಲ. ವೈದ್ಯಕೀಯ ಸಿಬ್ಬಂದಿ ಶುಚಿತ್ವ ಕಾಪಾಡಿದರು. ಕೇಂದ್ರ ಸಚಿವರೇ ನನಗೆ ಕರೆ ಮಾಡಿ, ನನ್ನ ಆರೋಗ್ಯ ವಿಚಾರಿಸಿದರು. ನನ್ನಂತಹ ಕಾಮನ್ ಮ್ಯಾನ್ ಗೆ ಕೇಂದ್ರ ಸಚಿವರು ಕರೆ ಮಾಡಿ ಆರೋಗ್ಯ ವಿಚಾರಿಸುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ'' ಎನ್ನುತ್ತಾರೆ ಕೊರೊನಾದಿಂದ ಗುಣಮುಖರಾದ ದೆಹಲಿಯ ಉದ್ಯಮಿ.
ಕೊರೊನಾದಿಂದ 68,313 ಮಂದಿ ಗುಣಮುಖ: ಆದರೂ ಕ್ಷೀಣಿಸದ ಭಯ!
ನೆಟ್ ಫ್ಲೆಕ್ಸ್ ವಿಡಿಯೋ ನೋಡುತ್ತಿದ್ದೆ
''ಐಸೊಲೇಷನ್ ನಲ್ಲಿದ್ದಾಗ ನನಗೆ ಮೊಬೈಲ್ ಫೋನ್ ಕೊಟ್ಟಿದ್ದರು. ಹೀಗಾಗಿ ನಾನು ಆಗಾಗ ವಿಡಿಯೋ ಕಾಲ್ ಮಾಡಿ ನನ್ನ ಕುಟುಂಬಸ್ಥರಿಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತಿದ್ದೆ. ಪುಸ್ತಕಗಳನ್ನು ಓದುತ್ತಿದ್ದೆ. ನೆಟ್ ಫ್ಲೆಕ್ಸ್ ನಲ್ಲಿ ವಿಡಿಯೋಗಳನ್ನು ವೀಕ್ಷಿಸುತ್ತಿದ್ದೆ. ಹೀಗಾಗಿ ಆಸ್ಪತ್ರೆಯಲ್ಲಿ 14 ದಿನ ಇರಲು ನನಗೆ ಕಷ್ಟ ಆಗಲಿಲ್ಲ'' ಅಂತ ಆ ಉದ್ಯಮಿ ತಿಳಿಸಿದ್ದಾರೆ.
ಭಜನೆ, ಪ್ರಾಣಾಯಾಮ ಮಾಡುತ್ತಿದ್ದೆ
''ಆಸ್ಪತ್ರೆಯಲ್ಲಿ ಇದ್ದಷ್ಟು ದಿನ ಭಜನೆಗಳನ್ನು ಕೇಳುತ್ತಿದ್ದೆ. ದಿನಕ್ಕೆ ಎರಡು ಬಾರಿ ಪ್ರಾಣಾಯಾಮ ಮಾಡುತ್ತಿದ್ದೆ. ಹಾಗ್ನೋಡಿದ್ರೆ, ನಾನೀಗ ಮುಂಚೆಗಿಂತ ಹೆಚ್ಚು ಧಾರ್ಮಿಕ ವ್ಯಕ್ತಿ ಆಗಿದ್ದೇನೆ'' ಎನ್ನುತ್ತಾರೆ ಆ ಉದ್ಯಮಿ.
ಇಟಲಿಯಿಂದ ವಾಪಸ್ ಆಗಿದ್ದ ಉದ್ಯಮಿ
ಫೆಬ್ರವರಿ 25 ರಂದು ಇಟಲಿಯಿಂದ ದೆಹಲಿಗೆ ಆಗಮಿಸಿದ್ದ ಆ ಉದ್ಯಮಿಗೆ ಜ್ವರ ಕಾಣಿಸಿಕೊಂಡಿದೆ. ತಕ್ಷಣಕ್ಕೆ ವೈದ್ಯರಿಂದ ಔಷಧಿ ಪಡೆದ ಆ ಉದ್ಯಮಿ ಫೆಬ್ರವರಿ 28 ರಂದು 12 ವರ್ಷದ ತಮ್ಮ ಪುತ್ರನ ಹುಟ್ಟುಹಬ್ಬಕ್ಕಾಗಿ ಹೋಟೆಲ್ ಒಂದರಲ್ಲಿ ಸಣ್ಣದಾಗಿ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆಗೆ ಪಾರ್ಟಿ ಮಾಡಿದ್ದರು. ಅದೃಷ್ಟವಶಾತ್ ಪಾರ್ಟಿಯಲ್ಲಿ ಭಾಗವಹಿಸಿದ ಯಾರೊಬ್ಬರಿಗೂ ಕೋವಿಡ್-19 ಪಾಸಿಟಿವ್ ಪತ್ತೆ ಆಗಿಲ್ಲ.
ದೇವರಿಗೆ 'ಧನ್ಯವಾದ'
ಪಾರ್ಟಿ ಮುಗಿದ ರಾತ್ರಿ ಉದ್ಯಮಿಗೆ ಮತ್ತೆ ಜ್ವರ ಕಾಣಿಸಿಕೊಂಡಿದೆ. ಅವರಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆ ಆದ ಬಳಿಕ ಸಫ್ದಾರ್ಜಂಗ್ ಆಸ್ಪತ್ರೆಯಲ್ಲಿನ ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಯಿತು. 14 ದಿನಗಳ ಕಾಲ ಚಿಕಿತ್ಸೆ ಪಡೆದು ಆ ಉದ್ಯಮಿ ಇದೀಗ ಗುಣಮುಖರಾಗಿದ್ದಾರೆ. ಇನ್ನೂ 14 ದಿನಗಳ ಕಾಲ ಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ಉದ್ಯಮಿಗೆ ವೈದ್ಯರು ಸೂಚಿಸಿದ್ದಾರೆ. ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿ ಮನೆಯಲ್ಲಿರುವ ಆ ಉದ್ಯಮಿ, ''ನಾನೀಗ ಪ್ರತಿ ದಿನ ದೇವರಿಗೆ ಧನ್ಯವಾದ ಅರ್ಪಿಸುತ್ತೇನೆ'' ಎನ್ನುತ್ತಾರೆ.
ನಿರ್ಲಕ್ಷ್ಯ ಮಾಡಬೇಡಿ
''ನೆಗಡಿ, ಕೆಮ್ಮು, ಜ್ವರ ಬಂದರೆ ನಿರ್ಲಕ್ಷ್ಯ ಮಾಡಬೇಡಿ. ಕೂಡಲೆ ಚಿಕಿತ್ಸೆ ಪಡೆಯಿರಿ. ಉಡಾಫೆ ಮಾಡಿದರೆ ನಿಮ್ಮ ಕುಟುಂಬದವರಿಗೆ ಸಮಸ್ಯೆ ಆಗುತ್ತದೆ'' ಅಂತ ಎಲ್ಲರಿಗೂ ಸಲಹೆ ನೀಡಿದ್ದಾರೆ ದೆಹಲಿಯ ಉದ್ಯಮಿ.