ಕೇಂದ್ರ ಬಜೆಟ್ 2021; ಮಾಜಿ ಹಣಕಾಸು ಸಚಿವ ಚಿದಂಬರಂ ಹೇಳುವುದೇನು?
ನವದೆಹಲಿ, ಫೆಬ್ರುವರಿ 01: ಬಹು ನಿರೀಕ್ಷಿತ ಕೇಂದ್ರ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಲಿದ್ದು, ಬಜೆಟ್ ಕುರಿತು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಪ್ರತಿಕ್ರಿಯಿಸಿದ್ದಾರೆ. ಆರೋಗ್ಯ ಹಾಗೂ ರಕ್ಷಣಾ ಕ್ಷೇತ್ರದ ವೆಚ್ಚ ಹೆಚ್ಚಳದ ಬಗ್ಗೆ ಗಮನ ಹರಿಸುವಂತೆ ದೇಶದ ಜನರಿಗೆ ತಿಳಿಸಿದ್ದಾರೆ.
"ಆರೋಗ್ಯ ಹಾಗೂ ರಕ್ಷಣಾ ಕ್ಷೇತ್ರಗಳೆರಡೂ ಬಹು ಮುಖ್ಯವಾದದ್ದು. ಇದರ ಬಗ್ಗೆ ಹೆಚ್ಚು ಗಮನ ನೀಡಬೇಕು. ಇದರೊಂದಿಗೆ ಕಾಂಗ್ರೆಸ್ ಪರವಾಗಿ ಬಜೆಟ್ ಕುರಿತು ಹತ್ತು ಅಂಶಗಳನ್ನು ಪಟ್ಟಿ ಮಾಡಿ ವಿವರಿಸಲಾಗಿದೆ. ಈ 2+10 ಅಂಶಗಳ ಮೇಲೆ ಬಜೆಟ್ ಗೆ ಅಂಕ ನೀಡುತ್ತೇವೆ. ಬಜೆಟ್ ನಂತರ ಇಂದು ಸಂಜೆ 4.30ಕ್ಕೆ ಮಾಧ್ಯಮ ಗೋಷ್ಠಿ ನಡೆಸಿ ವಿವರ ನೀಡಲಿದ್ದೇವೆ" ಎಂದು ಟ್ವೀಟ್ ಮಾಡಿದ್ದಾರೆ.
ಸಮೀಕ್ಷೆ ಮುದ್ರಿಸದೇ ಸರ್ಕಾರ ಒಳ್ಳೆ ಕೆಲಸ ಮಾಡಿತು; ಚಿದಂಬರಂ ಟೀಕೆ
ಕಾಂಗ್ರೆಸ್ ಪಟ್ಟಿ ಮಾಡಿರುವ ಈ ಹತ್ತು ಅಂಶಗಳಿಗೆ ಆರ್ಥಿಕ ತಜ್ಞರು ಹಾಗೂ ಸಾಮಾಜಿಕ ತಜ್ಞರು ಒಮ್ಮತ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ. ಜನವರಿ 29ರಂದು ಬಜೆಟ್ ಅಧಿವೇಶನ ಆರಂಭಗೊಂಡಿದ್ದು, ಅಂದು ಸಲ್ಲಿಸಿದ್ದ ಆರ್ಥಿಕ ಸಮೀಕ್ಷೆ ಕುರಿತು ಪಿ ಚಿದಂಬರಂ ಟೀಕಿಸಿದ್ದರು. ಕೇಂದ್ರ ಸರ್ಕಾರ ಮಂಡಿಸಿದ ಆರ್ಥಿಕ ಸಮೀಕ್ಷೆಗೆ ಉದ್ದೇಶ ಎಂಬುದೇ ಇಲ್ಲ. ಆರ್ಥಿಕ ಚೇತರಿಕೆಗೆ ದೂರದೃಷ್ಟಿ ನೀತಿ ಜಾರಿ ಎಂಬ ಸ್ವಅಭಿನಂದನೆ ಬಿಟ್ಟರೆ ಅಲ್ಲಿ ಬೇರೆ ಉದ್ದೇಶಗಳೇ ಕಾಣಿಸಿಲ್ಲ ಎಂದು ಹೇಳಿದ್ದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬಜೆಟ್ ಮಂಡನೆ ಮಾಡಲಿದ್ದು, ಕೊರೊನಾ ಸೋಂಕಿನ ಕಾರಣದಿಂದಾಗಿ ಈ ಬಾರಿ ಬಜೆಟ್ ಬಗ್ಗೆ ಸಾಕಷ್ಟು ನಿರೀಕ್ಷೆಗಳು ವ್ಯಕ್ತಗೊಂಡಿವೆ.