ವೇತನ ಕಡಿತ ವಿಚಾರ: ವಿಮಾನಯಾನ ಸಚಿವರ ಮಧ್ಯ ಪ್ರವೇಶಕ್ಕೆ ಏರ್ಇಂಡಿಯಾ ಪೈಲಟ್ಗಳ ಆಗ್ರಹ
ನವದೆಹಲಿ, ಡಿಸೆಂಬರ್ 01: ಏರ್ ಇಂಡಿಯಾ ಪೈಲಟ್ಗಳ ವೇತನ ಕಡಿತಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಸಚಿವರು ಮಧ್ಯ ಪ್ರವೇಶಿಸಬೇಕೆಂದು ಪೈಲಟ್ಗಳ ಸಂಘಟನೆಗಳಾದ ಐಪಿಜಿ ಮತ್ತು ಐಸಿಪಿಎ ಸೋಮವಾರ ಆಗ್ರಹಿಸಿವೆ.
ವೇತನ ಕಡಿತದ ಜೊತೆಗೆ ಹಲವಾರು ಇತರೆ ವಿಷಯಗಳ ಕುರಿತು ಚರ್ಚಿಸಲು ಅವರೊಂದಿಗೆ ತುರ್ತು ಸಭೆ ನಡೆಸಬೇಕೆಂದು ಕೋರಿದೆ.
ಸಿಲಿಕಾನ್ ವ್ಯಾಲಿ-ಸಿಲಿಕಾನ್ ಸಿಟಿ ನಡುವೆ ನೇರ ವಿಮಾನ
''ಸೆಪ್ಟೆಂಬರ್ನಲ್ಲಿ ನಡೆದ ಸಭೆಯಲ್ಲಿ ನಮ್ಮ ಕುಂದುಕೊರತೆಗಳನ್ನು ಆಲಿಸಿ, ಸಕಾರಾತ್ಮಕವಾಗಿ ಪರಿಹಾರ ಒದಗಿಸುವ ಭರವಸೆಯನ್ನು ನೀಡಿದ್ದೀರಿ. ಆದರೆ ಇತರೆ ವಿಮಾನಯಾನ ಸಂಸ್ಥೆಗಳು ಕಠಿಣ ವೇತನ ಕಡಿತವನ್ನು ಹಿಂಪಡೆಯುತ್ತಿದ್ದರೆ, ಏರ್ ಇಂಡಿಯಾ ಪೈಲಟ್ಗಳಿಗೆ ವೇತನ ಕಡಿತವು ಅಕ್ಟೋಬರ್ನಲ್ಲಿ ಮತ್ತಷ್ಟು ಹೆಚ್ಚಾಗಿದೆ'' ಎಂದು ಅಳಲು ತೋಡಿಕೊಂಡಿವೆ.
ಹೀಗಾಗಿ ವೇತನ ಕಡಿತ ವಿಷಯಕ್ಕೆ ಸಂಬಂಧಪಟ್ಟಂತೆ ವಿಮಾನಯಾನ ಸಚಿವರು ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸುತ್ತೇವೆ ಎಂದು ಪೈಲಟ್ಗಳ ಸಂಘಟನೆಗಳು ಕೋರಿವೆ.
''ಇದು ಮಾರುಕಟ್ಟೆ ವಾಸ್ತವದಿಂದ ಸಂಪೂರ್ಣ ವಿಭಿನ್ನವಾಗಿದೆ ಮತ್ತು ಏರ್ಇಂಡಿಯಾದ ಪೈಲಟ್ಗಳಿಗೆ ಹಾಗೂ ಅದರ ಅಂಗಸಂಸ್ಥೆಗಳಿಗೆ ಅನ್ಯಾಯವಾಗಿದೆ'' ಎಂದು ಪೈಲಟ್ ಸಂಘಟನೆಗಳು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ಸಿಂಗ್ ಪುರಿಯನ್ನು ಉದ್ದೇಶಿಸಿ ಜಂಟಿ ಪತ್ರದಲ್ಲಿ ತಿಳಿಸಿವೆ.
ಏರ್ ಇಂಡಿಯಾ ಮತ್ತು ಅದರ ಎರಡು ವಿಮಾನಯಾನ ಅಂಗಸಂಸ್ಥೆಗಳಾದ ಏರ್ ಇಂಡಿಯಾ ಎಕ್ಸ್ಪ್ರೆಸ್ ಮತ್ತು ಅಲೈಯನ್ಸ್ ಏರ್, ತಮ್ಮ ಸಾಮಾನ್ಯ ವೇತನಕ್ಕಿಂತ ಶೇಕಡಾ 70 ರಷ್ಟು ಕಡಿಮೆ ವೇತನವನ್ನು ಪಡೆಯುತ್ತಿರುವುದಾಗಿ ತಿಳಿಸಿವೆ.