ತುರ್ತು ಪರಿಸ್ಥಿತಿ ಪಠ್ಯವಾಗಬೇಕು: ಉಪರಾಷ್ಟ್ರಪತಿ ನಾಯ್ಡು
ನವದೆಹಲಿ, ಜೂನ್ 26: 'ತುರ್ತುಪರಿಸ್ಥಿ ಎಂದರೆ ಏನು? ದೇಶದಲ್ಲಿ ಯಾಕಾಗಿ ತುರ್ತುಪರಿಸ್ಥಿತಿ ಹೇರಲಾಯಿತು ಎಂಬಿತ್ಯಾದಿ ಸಂಗತಿಗಳು ಪಠ್ಯವಾಗಬೇಕು. ಇಲ್ಲವೆಂದರೆ ಇವುಗಳ ಬಗ್ಗೆ ಇಂದಿನ ಮಕ್ಕಳಿಗೆ ತಿಳಿಯುವುದಿಲ್ಲ' ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ದೇಶದಲ್ಲಿ 1975 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಆಂತರಿಕ ತುರ್ತುಪರಿಸ್ಥಿತಿ ಹೇರಿದ್ದು ಜೂನ್ 25 ಕ್ಕೆ. ಈ ಕಹಿ ಘಟನೆಗೆ ಇಂದಿಗೆ 43 ವರ್ಷ. ಈ ಕುರಿತು ಮಾತನಾಡಿದ ವೆಂಕಯ್ಯ ನಾಯ್ಡು ಆ ಕಹಿ ದಿನಗಳನ್ನು ನೆನಪಿಸಿಕೊಂಡರು.
ಒಂದು ಕುಟುಂಬದ ಅಧಿಕಾರ ದಾಹಕ್ಕೆ ದೇಶ ಜೈಲಾಯಿತು: ಮೋದಿ
ತುರ್ತುಪರಿಸ್ಥಿತಿ ಭಾರತ ಇತಿಹಾಸದಲ್ಲಿ ಕರಾಳ ಘಟನೆ. ಈ ಕುರಿತು ಇಂದಿನ ಪೀಳಿಗೆಗೆ ತಿಳಿಯಬೇಕು. ಇದನ್ನೂ ಪಠ್ಯದಲ್ಲಿ ಅಳವಡಿಸಬೇಕು ಎಂದು ಅವರು ಹೇಳಿದರು.
ನಮ್ಮ ಜನ ಪ್ರಜಾಪ್ರಭುತ್ವವನ್ನೇ ಅಪ್ಪಿಕೊಂಡಿದ್ದಾರೆ ಎಂಬುದು ತುರ್ತುಪರಿಸ್ಥಿಯ ಸಮಯದ ಹೋರಾಟದಿಂದ ಅರ್ಥವಾಗಿದೆ. ನನಗೆ ವಿಶ್ವಾಸವಿದೆ, ಇನ್ನು ಮುಂದೆ ಭಾರತದಲ್ಲಿ ಯಾವುದೇ ಸರ್ಕಾರವೂ ತುರ್ತು ಪರಿಸ್ಥಿತಿಯನ್ನು ಹೇರುವ ಸಾಹಸ ಮಾಡುವುದಿಲ್ಲ! ಜೂನ್ 25, 1975 ಭಾರತದ ಪಾಲಿಗೆ ದುರದೃಷ್ಟದ ದಿನ ಎಂದಿದ್ದಾರೆ ನಾಯ್ಡು.