ಇಲೆಕ್ಷನ್ ಸೋತ ಕಿರಣ್ ಬೇಡಿ ಸಿಡಿಸಿದ ಹೊಸ ಬಾಂಬ್
ನವದೆಹಲಿ, ಫೆ 12: ದೆಹಲಿ ಚುನಾವಣೆಯಲ್ಲಿ ಬಿಜೆಪಿಯ ಸಿಎಂ ಅಭ್ಯರ್ಥಿಯಾಗಿದ್ದ ಕಿರಣ್ ಬೇಡಿ ತನ್ನ ಸೋಲಿಗೆ ಕಾರಣ ಹುಡಕಲು ಹೋಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ತನ್ನ ಸೋಲಿಗೆ 'ಫತ್ವಾ' ಹೊರಡಿಸಿದ್ದೇ ಕಾರಣ, ಚುನಾವಣಾ ಆಯೋಗ ಈ ಸಂಬಂಧ ವಿಚಾರಣೆ ನಡೆಸುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಮತದಾರರಿಗೆ ಅವರದ್ದೇ ಆದ ಆಯ್ಕೆಗಳು ಇರುತ್ತವೆ, ಅದು ಯಾವುದೇ ಅಭ್ಯರ್ಥಿ ಅಥವಾ ಪಕ್ಷಗಳಾಗಿರಲಿ. ಇದೇ ಪಕ್ಷಕ್ಕೆ ಮತ ನೀಡಬೇಕೆಂದು ಫತ್ವಾ ಹೊರಡಿಸುವುದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಿಯಲ್ಲ ಎನ್ನುವುದು ನನ್ನ ಭಾವನೆ ಎಂದು ಬೇಡಿ ಬೇಸರ ವ್ಯಕ್ತ ಪಡಿಸಿದ್ದಾರೆ.
ನಾನು ಸ್ಪರ್ಧಿಸಿದ್ದ ಕೃಷ್ಣಾನಗರ ಕ್ಷೇತ್ರದ ಮತಎಣಿಕೆಯಲ್ಲಿ ನಾನು ಆಪ್ ಅಭ್ಯರ್ಥಿಗಿಂತ ಮುನ್ನಡೆ ಸಾಧಿಸುತ್ತಾ ಬಂದೆ. ಆದರೆ ಈ ಕ್ಷೇತ್ರದಲ್ಲಿ ಮುಸ್ಲಿಮರ ಪ್ರಾಭಲ್ಯವಿರುವ ಪ್ರದೇಶದ ಮತಎಣಿಕೆ ಬಂದಾಗ ನನಗೆ ಹಿನ್ನಡೆಯಾಯಿತು. ಇದು ಫತ್ವಾ ಹೊರಡಿಸಿದ ಪ್ರಭಾವ ಎಂದು ಕಿರಣ್ ಬೇಡಿ ಖಡಕ್ಕಾಗಿ ಪ್ರತಿಕ್ರಿಯಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಪರವಾಗಿ ಮತ ಚಲಾಯಿಸುವಂತೆ ದೆಹಲಿ ಜಾಮಾ ಮಸೀದಿಯ ಶಾಹಿ ಇಮಾಮ್ ಸಯ್ಯದ್ ಅಹ್ಮದ್ ಬುಖಾರಿ ಚುನಾವಣೆಗೆ ಒಂದು ದಿನ ಮುಂದೆ ಫತ್ವಾ ಹೊರಡಿಸಿದ್ದರು, ಇದನ್ನು ಆಪ್ ತಿರಸ್ಕರಿಸಿತ್ತು ಕೂಡಾ.
ಆದರೂ, ಅಹ್ಮದ್ ಬುಖಾರಿ ಫತ್ವಾಕ್ಕೆ ಮುಸ್ಲಿಂ ಸಮುದಾಯದವರು ಸ್ಪಂದಿಸಿದರು, ಇದೇ ನನ್ನ ಸೋಲಿಗೆ ಕಾರಣ ಎಂದು ಎಂದು ಬಿಜೆಪಿಯ ಸಿಎಂ ಅಭ್ಯರ್ಥಿ ಕಿರಣ ಬೇಡಿ ಬಾಂಬ್ ಸಿಡಿಸಿದ್ದಾರೆ. ಮುಂದೆ ಓದಿ..
ಎರಡು ಸಾವಿರ ಮತದ ಇಂಪ್ಯಾಕ್ಟ್
ಕೃಷ್ಣಾನಗರ ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದೆ. ನನಗೆ ಮುಸ್ಲಿಂ ಪ್ರದೇಶದ ಎಣಿಕೆ ಶುರುವಾದಾಗ ಎರಡು ಸಾವಿರ ಮತಗಳ ಹಿನ್ನಡೆ ಆರಂಭವಾಯಿತು. ಅದು ಕೊನೆವರೆಗೂ ಮುಂದುವರಿಯಿತು. ಇದು ಫತ್ವಾದ ಇಂಪ್ಯಾಕ್ಟ್ ಎನ್ನುವುದು ನನ್ನ ಅಭಿಪ್ರಾಯ - ಕಿರಣ್ ಬೇಡಿ.
ಅತ್ಯಂತ ಸೇಫ್ ಕ್ಷೇತ್ರ
ಬಿಜೆಪಿ ತನ್ನ ಸಿಎಂ ಅಭ್ಯರ್ಥಿಗೆ ಅತ್ಯಂತ ಸೇಫ್ ಕ್ಷೇತ್ರವನ್ನೇ ನೀಡಿತ್ತು. ಕೃಷ್ಣಾನಗರ ಕ್ಷೇತ್ರದ ಶಾಸಕರಾಗಿದ್ದ ಮತ್ತು ಈಗಿನ ಸಂಸದ ಮತ್ತು ಮಾಜಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಸೋಲಿನ ರುಚಿಯನ್ನೇ ಕಂಡಿರಲಿಲ್ಲ. ವೈಯಕ್ತಿಕವಾಗಿ, ಶಾಸಕರಾಗಿ ಕ್ಷೇತ್ರದ ಮತದಾರರ ಮನಸ್ಸನ್ನು ಗೆದ್ದಿದ್ದರು. In all terms, ಬೇಡಿಗೆ ಇದು ಅತ್ಯಂತ ಪ್ರಶಸ್ತ ಕ್ಷೇತ್ರವಾಗಿತ್ತು.
ಬೇಡಿ ಹೇಳಿಕೆಗೆ ಕಾಂಗ್ರೆಸ್ ಲೇವಡಿ
ಫತ್ವಾ ಇಂಪ್ಯಾಕ್ಟ್ ಬಗ್ಗೆ ಕಾಂಗ್ರೆಸ್ ಲೇವಡಿ ಮಾಡಿದೆ. ಬೇಡಿಯವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದ ದಿನದಿಂದಲೇ ಬಿಜೆಪಿ ಹಿನ್ನಡೆ ಅನುಭವಿಸಿತ್ತು ಎಂದು ಪಕ್ಷದ ಮುಖಂಡ ಜೆ ಪಿ ಅಗರ್ವಾಲ್ ಲೇವಡಿ ಮಾಡಿದ್ದಾರೆ.
ನಾನು ಸೋತಿಲ್ಲ, ಬೇಡಿ
ನಾನು ಸೋತಿಲ್ಲ, ನನ್ನ ಶಕ್ತಿ ಮೀರಿ ಬಿಜೆಪಿಗಾಗಿ ದುಡಿದಿದ್ದೇನೆ. ನನ್ನ ಮತ್ತು ಪಕ್ಷದ ಸೋಲಿಗೆ ನಾನು ಹೊಣೆ. ಆದರೂ ಬಿಜೆಪಿ ಮುಖಂಡರು ದೆಹಲಿಯ ಸೋಲಿಗೆ ಉತ್ತರಿಸಬೇಕೆಂದು ಕಿರಣ್ ಬೇಡಿ ಹೇಳುವ ಮೂಲಕ ಚೆಂಡನ್ನು ಅಮಿತ್ ಶಾ ಅಂಗಣಕ್ಕೆ ಎಸೆದಿದ್ದಾರೆ.
ಆಪ್ ಅಭ್ಯರ್ಥಿಯ ಎದುರು ಸೋಲು
ಹಲವು ಸುತ್ತಿನ ಎಣಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಕಿರಣ್ ಬೇಡಿ ಕೊನೆಗೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಎಸ್ ಕೆ ಬಗ್ಗಾ ವಿರುದ್ದ 2,277 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.