ಲೋಕಸಭೆ ಚುನಾವಣೆ ಸ್ಪರ್ಧೆಗೆ ಒಲ್ಲೆ ಎಂದ ವಿರೇಂದ್ರ ಸೆಹ್ವಾಗ್
ನವದೆಹಲಿ, ಮಾರ್ಚ್ 15: ಹೊಡಿ-ಬಡಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅವರು ಈ ಬಾರಿ ಬಿಜೆಪಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು, ಆದರೆ ಅದು ಸುಳ್ಳಾಗಿದೆ.
ದೆಹಲಿ ಬಿಜೆಪಿ ನಾಯಕರು ಸೆಹ್ವಾಗ್ ಅವರಿಗೆ ತಮ್ಮ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವ ಅವಕಾಶ ನೀಡಿದ್ದರು, ಆದರೆ ಸೆಹ್ವಾಗ್ ಅವರು ಪ್ರವಾವವನ್ನು ತಿರಸ್ಕರಿಸಿದ್ದಾರೆ ಎಂದು ದೆಹಲಿ ಬಿಜೆಪಿ ಹಿರಿಯ ಮುಖಂಡರು ಹೇಳಿದ್ದಾರೆ.
ಮಾಜಿ ಕ್ರಿಕೆಟರ್ ಗಂಭೀರ್ ನಂತರ ಸೆಹ್ವಾಗ್ ರಾಜಕೀಯಕ್ಕೆ ಎಂಟ್ರಿ?
ಆದರೆ ಸೆಹ್ವಾಗ್ ಅವರ ಜೊತೆ ಆರಂಭಿಕ ಬ್ಯಾಟ್ಸ್ಮನ್ ಆಗಿದ್ದ ಗೌತಮ್ ಗಂಭೀರ್ ಅವರು ದೆಹಲಿಯಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ, ಆದರೆ ಸೆಹ್ವಾಗ್ ಅವರನ್ನು ಲೋಕಸಭೆಯಲ್ಲಿ ನೋಡುವ ಅವಕಾಶ ಕಳೆದುಕೊಂಡಂತಾಗಿದೆ.
ಸೆಹ್ವಾಗ್ ಅವರು ನಿವೃತ್ತರಾದಾಗಿನಿಂದಲೂ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಟ್ವಿಟ್ಟರ್ ಮೂಲಕ ರಾಜಕೀಯ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದ ಅವರ ಟ್ವೀಟ್ ಗಳು ಬಹುತೇಕ ಕೇಂದ್ರ ಸರ್ಕಾರದ ನಿರ್ಧಾರಗಳ ಪರವಾಗಿರುತ್ತಿದ್ದವು ಹಾಗಾಗಿ ಅವರು ಚುನಾವಣೆಗೆ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಆದರೆ ಅದು ಸುಳ್ಳಾಗಿದೆ.
ಈ ಬಗ್ಗೆ ಸ್ವತಃ ಟ್ವೀಟ್ ಮಾಡಿರುವ ಸೆಹ್ವಾಗ್, 'ಕೆಲವು ವಿಷಯಗಳು ಬದಲಾಗುವುದೇ ಇಲ್ಲ, ಇದೇ ಊಹಾಪೋಹ 2014ರಲ್ಲೂ ಹರಡಿತ್ತು, ಈಗ 2019ಕ್ಕೂ ಹರಡುತ್ತಿದೆ, ಆದರೆ ನನಗೆ ಆಗಲೂ ಆಸಕ್ತಿ ಇರಲಿಲ್ಲ, ಈಗಲೂ ಇಲ್ಲ' ಎಂದಿದ್ದಾರೆ.