ರೈತ ಸಂಘಟನೆಗಳ ಮನಸು ಕೆಡಿಸಿದ ದೆಹಲಿ ಹಿಂಸಾಚಾರ?
ನವದೆಹಲಿ, ಜನವರಿ.27: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಸಂಬಂಧಿತ ಕಾಯ್ದೆಗಳ ವಿರುದ್ಧ ರೈತರ ಹೋರಾಟ ಹಿಂಸಾತ್ಮಕ ರೂಪ ಪಡೆದುಕೊಂಡ ಬೆನ್ನಲ್ಲೇ ಎರಡು ರೈತ ಒಕ್ಕೂಟಗಳು ಪ್ರತಿಭಟನೆಯಿಂದ ಹಿಂದೆ ಸರಿದಿವೆ.
ಮಂಗಳವಾರ 72ನೇ ಗಣರಾಜ್ಯೋತ್ಸವದ ದಿನವೇ ಕೆಂಪಕೋಟೆಗೆ ನುಗ್ಗಿ ನಡೆಸಿದ ಹಿಂಸಾಚಾರಕ್ಕೆ ರೈತ ಸಂಘಟನೆಗಳೇ ವಿರೋಧ ವ್ಯಕ್ತಪಡಿಸಿವೆ. ರಾಷ್ಟ್ರೀಯ ಕಿಸಾನ್ ಮಜದೂರ್ ಸಂಘಟನೆ ಮತ್ತು ಭಾರತೀಯ ಕಿಸಾನ್ ಯೂನಿಯನ್ ಪ್ರಸ್ತುತ ನಡೆಯುತ್ತಿರುವ ಪ್ರತಿಭಟನೆಯಿಂದ ಹಿಂದೆ ಸರಿದಿವೆ.
ದೆಹಲಿ ಹಿಂಸಾಚಾರ: ಸ್ಥಳದಲ್ಲಿ ಇದ್ದಿದ್ದನ್ನು ಒಪ್ಪಿಕೊಂಡ ದೀಪ್ ಸಿಧು, ಪರಾರಿಯಾದ ವಿಡಿಯೋ ವೈರಲ್
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿದ್ದ 63 ದಿನಗಳ ಹೋರಾಟ ಮಂಗಳವಾರ ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು.
ಮಜದೂರ್ ಸಂಘಟನೆ ನೀಡಿದ ಕಾರಣವೇನು?
"ಯಾರದ್ದೋ ನಿರ್ದೇಶನದಂತೆ ನಾವು ಹೋರಾಟ ನಡೆಸುವುದಕ್ಕೆ ಸಿದ್ಧವಾಗಿಲ್ಲ. ಹೀಗಾಗಿ ಪ್ರತಿಭಟನೆ ನಡೆಸುತ್ತಿರುವ ಅವರಿಗೆ ಶುಭಾಶಯ ಕೋರುತ್ತೇನೆ. ಆದರೆ ರಾಷ್ಟ್ರೀಯ ಕಿಸಾನ್ ಮಜದೂರ್ ಸಂಘಟನೆಯು ಈ ರೈತ ಹೋರಾಟದಲ್ಲಿ ಮುಂದುವರಿಯುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಸಂಘಟನೆಯ ರಾಷ್ಟ್ರೀಯ ವಕ್ತಾರ ವಿ.ಕೆ. ಸಿಂಗ್ ಹೇಳಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ. ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ಜಾಥಾಗೆ ನಿಗದಿಪಡಿಸಿದ ಮಾರ್ಗದಿಂದ ಬಿಕೆಯು ಸಂಘಟನೆಯ ರಾಕೇಶ್ ತಿಕೈಟ್ ಅವರು ರೈತರನ್ನು ಬೇರೆ ಕಡೆಗೆ ತಿರುಗಿಸಿದರು ಎಂದು ವಿ.ಕೆ. ಸಿಂಗ್ ಆರೋಪಿಸಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್ ಬೇಸರ
ನವದೆಹಲಿಯಲ್ಲಿ ಗಣರಾಜ್ಯೋತ್ಸವದ ದಿನ ನಡೆದ ಹಿಂಸಾಚಾರದ ಘಟನೆಯು ತುಂಬಾ ನೋವು ತರುವಂಥದ್ದಾಗಿದೆ. ರೈತರ ಹೋರಾಟವು ಹಿಂಸಾತ್ಮಕ ರೂಪಕ್ಕೆ ತಿರುಗಿದ್ದು ಬಹಳಷ್ಟೇ ಬೇಸರ ತರಿಸಿದೆ. ಈ ಹಿನ್ನೆಲೆ ಭಾರತೀಯ ಕಿಸಾನ್ ಯೂನಿಯನ್ ಈ ಪ್ರತಿಭಟನೆಯಿಂದ ಹಿಂದೆ ಸರಿಯಲಿದೆ. ಚಿಲ್ಲಾ ಗಡಿ ಪ್ರದೇಶದಲ್ಲಿ ಸಂಘಟನೆ ನಡೆಸುತ್ತಿರುವ ಪ್ರತಿಭಟನೆಯನ್ನು ಕೊನೆಗೊಳಿಸಲಾಗುತ್ತದೆ ಎಂದು ಸಂಘಟನೆಯ ಅಧ್ಯಕ್ಷ ಠಾಕೂರ್ ಬಾನು ಪ್ರತಾಪ್ ಸಿಂಗ್ ತಿಳಿಸಿದ್ದಾರೆ.
ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ
ದೆಹಲಿಯ ಕೆಂಪುಕೋಟೆಗೆ ಹೋಗಲು ಅನುಮತಿ ನೀಡುವಂತೆ ಆಗ್ರಹಿಸಿ ರೈತರು ಸಂಘರ್ಷಕ್ಕೆ ಇಳಿದರು. ಐಟಿಓ ಬಳಿ ಬಸ್ ಗಳನ್ನು ಧ್ವಂಸಗೊಳಿಸಿದರು. ಕೆಲವು ದುಷ್ಕರ್ಮಿಗಳು ಪೊಲೀಸರ ಮೇಲೆ ಟ್ರ್ಯಾಕ್ಟರ್ ಹತ್ತಿಸಲು ಪ್ರಯತ್ನಿಸಿದ ಘಟನೆ ನಡೆಯಿತು. ಕೆಂಪುಕೋಟೆಗೆ ತೆರಳುವುದಕ್ಕೆ ಮುಂದಾದ ರೈತರನ್ನು ತಡೆಯುವುದಕ್ಕಾಗಿ ಲಾಠಿಚಾರ್ಜ್ ನಡೆಸಿದ ಪೊಲೀಸರು ಅಶ್ರುವಾಯು ಸಿಡಿಸಿದರು. ಒಬ್ಬ ಪ್ರತಿಭಟನಾನಿರತ ರೈತನ ಮೇಲೆ ಟ್ರ್ಯಾಕ್ಟರ್ ಹರಿದು ಮೃತಪಟ್ಟಿರುವ ಘಟನೆಯೂ ನಡೆಯಿತು. ಐಟಿಓ ಪ್ರದೇಶದಲ್ಲಿ ನಡೆದ ಒಂದೂವರೆ ಗಂಟೆಗಳ ಸುದೀರ್ಘ ಸಂಘರ್ಷದ ನಂತರ ಪ್ರತಿಭಟನಾನಿರತ ರೈತರು ಕೆಂಪುಕೋಟೆ ಪ್ರವೇಶಿಸಿದ್ದರು.
ತ್ರಿವರ್ಣ ಧ್ವಜದ ಎದುರಿನಲ್ಲೇ ಸಿಖ್ ಧ್ವಜ ಹಾರಾಟ
ಕೃಷಿ ಕಾಯ್ದೆ ವಿರುದ್ಧ ರೈತರು ನಡೆಸಿದ ಟ್ರ್ಯಾಕ್ಟರ್ ಜಾಥಾ ಹೋರಾಟ ಹಿಂಸಾತ್ಮಕ ರೂಪಕ್ಕೆ ತಿರುಗಿತು. ಪ್ರತಿಭಟನಾನಿರತ ರೈತರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಬೀಸಿದರು, ಅಶ್ರುವಾಯು ಸಿಡಿಸಿದರು. ತೀವ್ರ ಭದ್ರತೆ ನಡುವೆಯೂ ಪ್ರತಿಭಟನಾನಿರತ ರೈತರು ಕೆಂಪುಕೋಟೆಗೆ ಪ್ರವೇಶಿಸಿದರು. ತ್ರಿವರ್ಣ ಧ್ವಜದ ಎದುರಿನಲ್ಲೇ ನಿಶಾನ್ ಸಾಹೇಬ್ ಧ್ವಜವನ್ನು ಹಾರಿಸಿದರು.