ದೇವ್, ರೂಪಾನಿ ವಿವಾದಾತ್ಮಕ ಹೇಳಿಕೆಗೆ ಕಾಂಗ್ರೆಸ್ ಲೇವಡಿ
ನವದೆಹಲಿ, ಮೇ 01: ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ತ್ರಿಪುರ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ನೀಡಿದ ವಿವಾದಾತ್ಮಕ ಹೇಳಿಕೆಗಳ ಕುರಿತು ಕಾಂಗ್ರೆಸ್ ಲೇವಡಿ ಮಾಡಿದೆ.
ಕಳೆದವಾರ ಸರ್ಚ್ ಇಂಜಿನ್ ಗೂಗಲ್ ಅನ್ನು ವಿಜಯ ರೂಪಾನಿ ನಾರದ ಮುನಿಗಳಿಗೆ ಹೋಲಿಸಿದ್ದರು. ಸಭೆಯೊಂದರಲ್ಲಿ ಮಾತನಾಡುತ್ತಿದ್ದ ತ್ರಿಪುರ ಮುಖ್ಯಮಂತ್ರಿ ವಿಪ್ಲವ್ ದೇವ್, 'ಸರ್ಕಾರಿ ಕೆಲಸ ಹುಡುಕುವ ಬದಲು ಪಾನ್ ಅಂಗಡಿ ತೆರೆಯಿರಿ' ಎಂದು ಹೇಳಿದ್ದರು.
"ನಿಜವಾದ ಭಾರತೀಯ ನಾರಿ ಐಶ್ವರ್ಯ ರೈ, ಡಯಾನಾ ಹೆಡನ್ ಅಲ್ಲ!"
ಈ ಕುರಿತು ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಮುಖಂಡೆ ರೇಣುಕಾ ಚೌಧರಿ, "ನೀವು ವಿಜಯ ರೂಪಾನಿ ಎಂಬ ಮುಖ್ಯಮಂತ್ರಿಯನ್ನು ಪಡೆದಿದ್ದೀರಿ. ಈ ಗುಜರಾತ್ ಮುಖ್ಯಮಂತ್ರಿ ನಮಗೆ ಹೇಳುತ್ತಾರೆ, ನಾರದ ಮುನಿಯೇ ನಿಜವಾಗಿಯೂ ಗೂಗಲ್ ಪರಿಕಲ್ಪನೆ ಪರಿಚಯಿಸಿದ್ದು ಅಂತ. ನಿಜಕ್ಕೂ ಅದ್ಭುತ. ಈ ಬಗ್ಗೆ ಗೂಗಲ್ ಏನು ಚಿಂತಿಸಬಹುದು ಎಂದು ನಾನು ಯೋಚಿಸುತ್ತಿದ್ದೇನೆ. ನೀವು ಇನ್ನೊಬ್ಬ ಮುಖ್ಯಮಂತ್ರಿಯನ್ನು ಹೊಂದಿದ್ದೀರಿ. ಅವರು, 'ಸರ್ಕಾರಿ ಕೆಲಸ ಹುಡುಕುತ್ತ ಕಾಲಹರಣ ಮಾಡಬೇಡಿ. ನಿರುದ್ಯೋಗಿಗಳು, ಸುಶಿಕ್ಷಿತರು ಪಾನ್ ಶಾಪ್ ತೆರೆಯಿರಿ' ಎನ್ನುತ್ತಾರೆ" ಎಂದು ಲೇವಡಿ ಮಾಡಿದ್ದಾರೆ.
"ದೇವ್ ಅವರ ಹೇಳಿಕೆ ಕುರಿತು ನರೇಂದ್ರ ಮೋದಿಯವರು ಬೇಸರ ವ್ಯಕ್ತಪಡಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದೆಲ್ಲವೂ ನಾಟಕ. ಅವರೆಲ್ಲರ ಸಿದ್ಧಾಂತವೂ ಒಂದೇ. ಭಾರತಕ್ಕೆ ಇದು ಖಂದಿತ ಬೇಕಿಲ್ಲ" ಎಂದು ಚೌಧರಿ ಹೇಳಿದ್ದಾರೆ.
ಏಪ್ರಿಲ್ 28 ರಂದು ಸಭೆಯೊಂದರಲ್ಲಿ ಮಾತನಾಡುತ್ತಿದ್ದ ದೇವ್, ''ಸರ್ಕಾರಿ ಕೆಲಸ ಪಡೆಯಲು ರಾಜಕೀಯ ಪಕ್ಷಗಳ ಹಿಂದೆ ಓಡಬೇಡಿ. ಸುಮ್ಮನೆ ಕಾಲಹರಣವಾದಂತಾಗುತ್ತದೆ. ಅದರ ಬದಲು ನೀವೇನಾದರೂ ಒಂದು ಪಾನ್ ಶಾಪ್ ಇಟ್ಟರೆ, ಸರ್ಕಾರಿ ಕೆಲಸಕ್ಕಾಗಿ ವ್ಯರ್ಥಮಾಡಿದಷ್ಟು ಸಮಯದಲ್ಲಿ ಸುಮಾರು 5 ಲಕ್ಷ ರೂ. ಬ್ಯಾಂಕ್ ಬ್ಯಾಲೆನ್ಸ್ ಇಡಬಹುದು" ಎಂದಿದ್ದರು.