ದೆಹಲಿ ಚುನಾವಣೆಯಲ್ಲಿ ಆಪ್ ಕರ್ನಾಟಕ ಕಾರ್ಯಕರ್ತರ ಪ್ರಚಾರ
ನವದೆಹಲಿ, ಫೆಬ್ರವರಿ 07: ದೆಹಲಿ ವಿಧಾನಸಭಾ ಚುನಾವಣೆಗೆ ಫೆಬ್ರವರಿ 08 ರಂದು ಮತದಾನ ನಡೆಯಲಿದೆ. ಆಮ್ ಅದ್ಮಿ ಪಾರ್ಟಿಯ ಆಮ್ ಆದ್ಮಿ ಪಾರ್ಟಿಯನ್ನು ಮತ್ತೊಮ್ಮೆ ದೆಹಲಿಯಲ್ಲಿ ಅಧಿಕಾರಕ್ಕೆ ತರಲು ದೇಶದ ಎಲ್ಲಾ ರಾಜ್ಯಗಳಿಂದಲೂ ಪಕ್ಷದ ಕಾರ್ಯಕರ್ತರು ಪ್ರಚಾರಕ್ಕಾಗಿ ತೆರಳಿದ್ದರು. ಕರ್ನಾಟಕದಿಂದ 200ಕ್ಕೂ ಹೆಚ್ಚು ಕಾರ್ಯಕರ್ತರು ಕಳೆದ ಹಲವು ದಿನಗಳಿಂದ ಪ್ರಚಾರದಲ್ಲಿ ನಿರತರಾಗಿದ್ದು, ಪಕ್ಷ ಮತ್ತೆ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ಆತ್ಮವಿಶ್ವಾಸ ಹೊಂದಿದ್ದಾರೆ.
ಕರ್ನಾಟಕ ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕರಾದ ಪೃಥ್ವಿರೆಡ್ಡಿ, ರಾಜ್ಯ ಕಾರ್ಯದರ್ಶಿಗಳಾದ ಸಂಚಿತ್ ಸಹಾನೀ, ರಾಜ್ಯ ಸಹ ಸಂಚಾಲಕರಾದ ಮೋಹನ್ ದಾಸರಿ, ರಾಜ್ಯ ಜಂಟಿ ಕಾರ್ಯದರ್ಶಿಗಳಾದ ದರ್ಶನ್ ಜೈನ್ ಆದಿಯಾಗಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬೆಂಗಳೂರು ಮತ್ತು ಉತ್ತರ ಕರ್ನಾಟಕ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೋಗಿ ದೆಹಲಿಯಲ್ಲಿ ಅಬ್ಬರದ ಪ್ರಚಾರ ನಡೆಸಿದರು. ವಿಶೇಷವಾಗಿ ಪಕ್ಷದ ವಿದ್ಯಾರ್ಥಿ ಘಟಕವಾದ ಛಾತ್ರ ಯುವ ಸಂಘರ್ಷ ಸಮಿತಿ (CYSS)ಯ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ವಿವಿಧ ಜವಾಬ್ದಾರಿಗಳನ್ನು ಹೊತ್ತು ಪ್ರಚಾರ ತಂಡಗಳನ್ನು ಮುನ್ನಡೆಸಿದರು.
ಕರ್ನಾಟಕದಿಂದ ದೆಹಲಿಗೆ ತೆರಳಿದ ಕಾರ್ಯಕರ್ತರು ಹಲವು ಕ್ಷೇತ್ರಗಳಲ್ಲಿ ಮನೆ-ಮನೆ ಪ್ರಚಾರ, ಬಜ್ ಕ್ಯಾಂಪೇನ್, ಪ್ರಚಾರ ಸಭೆ, ಕರೆ ಕ್ಯಾಂಪೇನ್, ಬೂತ್ ಮಟ್ಟದಲ್ಲಿ ಪ್ರಚಾರ ಆಯೋಜನೆ ಮತ್ತು ನಿರ್ವಹಣೆ, ಬೀದಿಗಳನ್ನು ಸ್ವಚ್ಚಮಾಡುವ ಮೂಲಕ ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು.
ಕರ್ನಾಟಕದ ಕಾರ್ಯಕರ್ತರು ಮಂಗೋಲಪುರಿ ಮತ್ತು ಕಾರವಾಲ್ ನಗರ ವಿಧಾನಸಭಾ ಕ್ಷೇತ್ರ ಹಾಗೂ ವಿವಿಧ ಭಾಗಗಳಲ್ಲಿ ಹಲವು ದಿನಗಳಿಂದ ಪ್ರಚಾರ ನಡೆಸಿದರು. ಈ ಭಾಗಗಳಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಹೆಚ್ಚಿದೆ. ಕಾರವಾಲ್ ನಗರ ಕ್ಷೇತ್ರದಿಂದ ಆಮ್ ಆದ್ಮಿ ಪಾರ್ಟಿಯ ಕರ್ನಾಟಕ ಪ್ರಭಾರಿ, ಯುವ ನಾಯಕ ದುರ್ಗೇಶ್ ಪಾಠಕ್ ಅವರು ಅಭ್ಯರ್ಥಿಯಾಗಿದ್ದಾರೆ. ಇವರು 2015ರ ದೆಹಲಿ ಚುನಾವಣೆಯಲ್ಲಿ 35 ಕ್ಷೇತ್ರಗಳ ಜವಾಬ್ದಾರಿ ಹೊತ್ತು 34 ಕ್ಷೇತ್ರಗಳಲ್ಲಿ ಪಕ್ಷ ಗೆಲುವು ಸಾಧಿಸುವಂತೆ ದುಡಿದ್ದರು. ಪ್ರಸ್ತುತ ರಾಷ್ಟ್ರೀಯ ಸಂಘಟನಾ ತಂಡದ ಮುಖ್ಯಸ್ಥರಾಗಿರುವ ಇವರು ಕರ್ನಾಟಕ ರಾಜ್ಯದ ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆ. ಅಂತೆಯೇ ಮಂಗೋಲಪುರಿ ಕ್ಷೇತ್ರದಿಂದ ರಾಖಿ ಬಿರ್ಲಾ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಅವರು ದೆಹಲಿ ಸರ್ಕಾರದಲ್ಲಿ ಡೆಪ್ಯುಟಿ ಸ್ಪೀಕರ್ ಮತ್ತು ಸಮಾಜ ಕಲ್ಯಾಣ ಮಂತ್ರಿಯಾಗಿ ತಮ್ಮ ಸೇವೆ ನಿರ್ವಹಿಸಿದ್ದಾರೆ.