ದೆಹಲಿಯಲ್ಲಿ ದಿಕ್ಕು ತಪ್ಪುತ್ತಿದೆಯೇ ರೈತರ ಪ್ರತಿಭಟನೆ: ಏನಿದು ಕೇಜ್ರಿವಾಲ್ ಕೈವಾಡದ ಶಂಕೆ?
ನೂತನ ಕೃಷಿ ಕಾಯಿದೆಯ ವಿರುದ್ದ ದೆಹಲಿ ಗಡಿ ಭಾಗದಲ್ಲಿ ನಡೆಯುತ್ತಿರುವ ಅನ್ನದಾತರ ಪ್ರತಿಭಟನೆ ದಿನಕ್ಕೊಂದು ತಿರುವು ಪಡೆಯುತ್ತಿದೆ. ವಿರೋಧ ಪಕ್ಷದ ಮುಖಂಡರು ಪ್ರತಿಭಟನಾನಿರತ ರೈತರನ್ನು ಬಂದು ಭೇಟಿಯಾಗುತ್ತಿದ್ದಾರೆ.
ಇತ್ತ, ಈ ವರ್ಷದ ಮೊದಲ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಗಣರಾಜ್ಯೋತ್ಸವದ ದಿನದಂದು ಕೆಂಪುಕೋಟೆಯಲ್ಲಿ ನಡೆದ ಘಟನೆ ಈ ದೇಶಕ್ಕಾದ ಅಪಮಾನ ಎಂದು ಬೇಸರಿಸಿಕೊಂಡಿದ್ದಾರೆ. ಇನ್ನು, ರೈತರ ಜೊತೆ ಚರ್ಚೆಗೆ ಸರಕಾರ ಮುಕ್ತವಾಗಿದೆ ಎಂದೂ ಹೇಳಿದ್ದಾರೆ.
ಭಾರತೀಯ ಕಿಸಾನ್ ಒಕ್ಕೂಟಕ್ಕೆ 'ಜೈ' ಎಂದ ಶಿರೋಮಣಿ ಅಕಾಲಿ ದಳ
ಕೆಂಪುಕೋಟೆಯಲ್ಲಿ ನಡೆದ ಘಟನೆಯ ನಂತರ ರೈತರ ಹೋರಾಟದಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದು, ಹೋರಾಟದ ಶಕ್ತಿಯನ್ನು ತಗ್ಗಿಸಬಲ್ಲದು ಎನ್ನುವುದನ್ನು ಅರಿತ ಭಾರತೀಯ ಕಿಶಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಮಾಡಿದ ಭಾವನಾತ್ಮಕ ಭಾಷಣ ಹೋರಾಟದ ಕಾವನ್ನು ಇನ್ನೊಂದು ಮಜಲಿಗೆ ತೆಗೆದುಕೊಂಡು ಹೋಗಿದೆ.
ಟಿಕಾಯತ್ ಮನವಿಗೆ ಓಗೊಟ್ಟು ಸಾವಿರ ಸಾವಿರ ಸಂಖ್ಯೆಯಲ್ಲಿ ಜಮಾಯಿಸಿದ ರೈತರು ಪ್ರತಿಭಟನೆಯ ದಿಕ್ಕನ್ನು ಬದಲಾಯಿಸುವ ಸಾಧ್ಯತೆಯಿದೆ. ಇವೆಲ್ಲದರ ನಡುವೆ, ಸಭೆಯೊಂದರಲ್ಲಿ ರೈತ ನಾಯಕರೊಬ್ಬರು ಕೇಜ್ರಿವಾಲ್ ಬಗ್ಗೆ ಆಡಿರುವ ವಿಡಿಯೋ, ಭಾರೀ ಸಂಚಲನವನ್ನು ಮೂಡಿಸಿದೆ.
"ಕೃಷಿ ಕಾಯ್ದೆ ಕುರಿತು ಕೇಂದ್ರದ ಜೊತೆ ಸಂಧಾನಕ್ಕೆ OK, ಆದರೆ..?"
ಪೊಲೀಸ್ ಕಾನ್ಸ್ ಸ್ಟೇಬಲ್ ಆಗಿದ್ದ 51 ವರ್ಷದ ರೈತ ಮುಖಂಡ ರಾಕೇಶ್ ಟಿಕಾಯತ್
ದೆಹಲಿ ಪೊಲೀಸ್ ಕಾನ್ಸ್ ಸ್ಟೇಬಲ್ ಆಗಿದ್ದ 51 ವರ್ಷದ ರೈತ ಮುಖಂಡ ರಾಕೇಶ್ ಟಿಕಾಯತ್ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದವರು. ಪ್ರಭಾವೀ ಜ್ಯಾಟ್ ಸಮುದಾಯದ ಟಿಕಾಯತ್, ಈಗ ರೈತರ ಪ್ರತಿಭಟನೆಯ ಮಂಚೂಣಿ ನಾಯಕರಾಗಿದ್ದಾರೆ. ಇವರ ಭಾವನಾತ್ಮಕ ಭಾಷಣ ಮತ್ತು ಇದಾದ ನಂತರ ಮಹಾ ಪಂಚಾಯತ್ ಗೆ ಪ್ರವಾಹೋಪಾದಿಯಲ್ಲಿ ರೈತರು ಹರಿದು ಬಂದಿದ್ದರು. ಆದರೆ...
ಪ್ರಧಾನಿ ಹುದ್ದೆಯಲ್ಲಿ ಇರುವವರಿಗೆ ನಮ್ಮ ಸಂಪೂರ್ಣ ಗೌರವ ಇದ್ದೇ ಇರುತ್ತದೆ
ರಾಕೇಶ್ ಟಿಕಾಯತ್ ಕಳೆದ ಎರಡು ದಿನಗಳಲ್ಲಿ ಮಹತ್ವದ ಹೇಳಿಕೆಯನ್ನು ನೀಡಿದ್ದರು. ಕೇಂದ್ರ ಸರಕಾರ ನಮ್ಮ ಜೊತೆಗೆ ಮಾತುಕತೆಗೆ ಸಿದ್ದ ಎನ್ನುವ ಹೇಳಿಕೆಯನ್ನು ಸ್ವಾಗತಿಸುತ್ತೇವೆ ಮತ್ತು ಪ್ರಧಾನಿ ಹುದ್ದೆಯಲ್ಲಿ ಇರುವವರಿಗೆ ನಮ್ಮ ಸಂಪೂರ್ಣ ಗೌರವ ಇದ್ದೇ ಇರುತ್ತದೆ. ನಾವು ಕೂಡಾ ಸೌಹಾರ್ದಯುತವಾಗಿ ಈ ಸಮಸ್ಯೆಯನ್ನು ಬಹೆಗರಿಸಲು ಉತ್ಸುಕರಾಗಿದ್ದೇವೆ ಎಂದು ಟಿಕಾಯತ್ ಹೇಳಿದ್ದಾರೆ.
ಕೇಜ್ರಿವಾಲ್ ಅವರೊಬ್ಬ ಬಿಗ್ ಫ್ರಾಡ್
ಟಿಕಾಯತ್ ಹೇಳಿಕೆಯ ಬೆನ್ನಲ್ಲೇ ಪಕ್ಕದ ರಾಜ್ಯದ ಕಾಂಗ್ರೆಸ್ ಮುಖಂಡರು ಬಂದು ರೈತ ನಾಯಕರನ್ನು ಭೇಟಿಯಾಗುತ್ತಿದ್ದಾರೆ. ಇದರ ಜೊತೆಗೆ, ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ರೈತರ ಪ್ರತಿಭಟನೆಗೆ ಬೆಂಬಲ ಮುಂದುವರಿಸುವುದಾಗಿ ಹೇಳಿದ್ದಾರೆ. ಅಲ್ಲದೇ, ದೆಹಲಿಯ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ದ ಕಿಡಿಕಾರಿದ್ದಾರೆ. "ಅವರೊಬ್ಬ ಬಿಗ್ ಫ್ರಾಡ್'ಎಂದು ಸಿಂಗ್ ಹೇಳಿದ್ದಾರೆ.
|
ರೈತ ನಾಯಕರೊಬ್ಬರ ವಿಡಿಯೋ ವೈರಲ್
"ಶಹೀನ್ ಬಾಗ್ ನಲ್ಲಿ ಕೆಲವು ತಿಂಗಳುಗಳ ಕಾಲ ಹೋರಾಟ ನಡೆಯುತ್ತಿತ್ತು, ಅದರ ಹಿಂದೆ ನಮ್ಮ ದೆಹಲಿ ಸಿಎಂ ಕೇಜ್ರಿವಾಲ್ ಇದ್ದರು. ಈಗ ನಮ್ಮ ಹೋರಾಟವನ್ನು ದಿಕ್ಕುತಪ್ಪಿಸಲು ಇವರು ನಿಂತಿದ್ದಾರೆ. ಈ ಕೃಷಿ ಕಾಯಿದೆ ರೈತರ ಪರವಾಗಿದ್ದರೂ, ಈ ಹೋರಾಟ ಉಗ್ರರೂಪ ತಾಳುತ್ತಿದೆ"ಎನ್ನುವ ರೈತ ನಾಯಕರೊಬ್ಬರ ವಿಡಿಯೋ ವೈರಲ್ ಆಗುತ್ತಿದೆ.