ಇಂಡಿಯನ್ ಎಕ್ಸ್ ಪ್ರೆಸ್ ಮಾಜಿ ಸಂಪಾದಕ ಕುಲದೀಪ್ ನಯ್ಯರ್ ನಿಧನ
ನವದೆಹಲಿ, ಆಗಸ್ಟ್ 23: ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್(14 ಆಗಸ್ಟ್ 1923 - 22 ಆಗಸ್ಟ್ 2018) ಅವರು ದೆಹಲಿಯ ಖಾಸಗೀ ಆಸ್ಪತ್ರೆಯಲ್ಲಿ ಇಂದು ಬೆಳಗ್ಗಿನ ಜಾವ 1 ಗಂಟೆಗೆ ನಿಧನರಾದರು.
ಅವರಿಗೆ 95 ವರ್ಷ ವಯಸ್ಸಾಗಿತ್ತು. ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಮಾಜಿ ಸಂಪಾದಕರಾಗಿದ್ದ ನಯ್ಯರ್ ಅವರು ತುರ್ತು ಪರಿಸ್ಥಿತಿಯನ್ನು ತೀವ್ರವಾಗಿ ಖಂಡಿಸಿದವರಲ್ಲಿ ಒಬ್ಬರು. ಆ ಸಮಯದಲ್ಲಿ ಅವರನ್ನು ಜೈಲಿಗೂ ತಳ್ಳಲಾಗಿತ್ತು.
ಪಂಜಾಬಿನ ಸಿಯಾಲ್ಕೋಟ್ ನಲ್ಲಿ ಆಗಸ್ಟ್ 14, 1923 ರಲ್ಲಿ ಗುರ್ಬಕ್ಷ್ ಸಿಂಗ್ ಮತ್ತು ಪೂರಣ್ ದೇವಿ ಅವರ ಮಗನಾಗಿ ಜನಸಿದ ಕುಲದೀಪ್ ನಯ್ಯರ್, ಲಾಹೋರ್ ನಲ್ಲಿ ಕಾನೂನು ಪದವಿ ಪಡೆದರು.
1952 ರಲ್ಲಿ ಪತ್ರಿಕೋದ್ಯಮ ಪದವಿ ಪಡೆದ ನೈಯರ್ ಮೊದಲಿಗೆ ಉರ್ದು ಪತ್ರಿಕೆಯೊಂದರ ವರದಿಗಾರರಾಗಿ ಕೆಲಸ ಆರಂಭಿಸಿದ್ದರು. ನಂತರ ದೆಹಲಿ ಆವೃತ್ತಿಯ 'ದಿ ಸ್ಟೇಟ್ಸ್ ಮನ್' ಇಂಗ್ಲಿಷ್ ಪತ್ರಿಕೆಯ ಸಂಪಾದಕರಾಗಿ, ತುರ್ತುಪರಿಸ್ಥಿಯ ಸಮಯದಲ್ಲಿ ಜೈಲುವಾಸ ಅನುಭವಿಸಿದರು.
ಮಾನಹ ಹಕ್ಕು ಹೋರಾಟಗಾರ ಮತ್ತು ಶಾಂತಿ ಪ್ರತಿಪಾದಕರಾಗಿಯೂ ಅವರು ಹೆಸರು ಗಳಿಸಿದ್ದರು. ಡೆಕ್ಕನ್ ಹೆರಾಲ್ಡ್, ದಿ ನ್ಯೂಸ್, ದಿ ಡೇಲಿ ಸ್ಟಾರ್, ದಿ ಸಂಡೇ ಗಾರ್ಡಿಯನ್, ದಿ ಸ್ಟೇಟ್ಸ್ ಮನ್, ದಿ ಎಕ್ಸ್ ಪ್ರೆಸ್ ಟ್ರಿಬ್ಯೂನ್(ಪಾಕಿಸ್ತಾನ), ಡಾನ್(ಪಾಕಿಸ್ತಾನ), ಪ್ರಭಾಸಾಕ್ಷಿ ಸೇರಿದಂತೆ 80 ಕ್ಕೂ ಹೆಚ್ಚು ಪತ್ರಿಕೆಗಳಲ್ಲಿ 14 ಭಾಷೆಗಳಲ್ಲಿ ಸಂಪಾದಕೀಯ ಪುಟಕ್ಕೆ ಲೇಖನ ಬರೆಯುತ್ತಿದ್ದ ಹೆಗ್ಗಳಿಕೆ ನಯ್ಯರ್ ಅವರದ್ದು.
Beyond the lines, India - The Critical years, Distant Neighbours - A tale of the subcontinent, Suppression of judges, India After Nehru ಸೇರಿದಂತೆ 15 ಕ್ಕೂ ಹೆಚ್ಚು ಪುಸ್ತಕಗಳನ್ನು ಕುಲದೀಪ್ ನಯ್ಯರ್ ರಚಿಸಿದ್ದರು.