ಪಿ ಚಿದಂಬರಂ ಬಂಧನದ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ ಇಂದ್ರಾಣಿ
ನವದೆಹಲಿ, ಆಗಸ್ಟ್ 29: ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಆರೋಪ ಹೊತ್ತು ಸಿಬಿಐ ವಶದಲ್ಲಿರುವ ಕೇಂದ್ರದ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರ ಬಂಧನದ ಬಗ್ಗೆ ಇದೇ ಮೊದಲ ಬಾರಿಗೆ ಇಂದ್ರಾಣಿ ಮುಖರ್ಜಿ ಪ್ರತಿಕ್ರಿಯಿಸಿದ್ದಾರೆ.
"ಪಿ ಚಿದಂಬರಂ ಅವರನ್ನು ಬಂಧಿಸಿರುವುದು ಒಳ್ಳೆಯ ವಿಚಾರ. ಒಳ್ಳೆಯ ಸುದ್ದಿ" ಎಂದು ಜೈಲುವಾಸಿಯಾಗಿರುವ ಐಎನ್ಎಸ್ ಮೀಡಿಯ ಸಹ ಸಂಸ್ಥಾಪಕಿ ಇಂದ್ರಾಣಿ ಮುಖರ್ಜಿ ಪ್ರತಿಕ್ರಿಯೆ ನೀಡಿದ್ದಾರೆ.
ಕಾರ್ತಿ ಇಂದ್ರಾಣಿ ಭೇಟಿ; ಚಿದು ಕಾರ್ಯತಂತ್ರ ರಹಸ್ಯ ಬಯಲು ಮಾಡಿದ 'ಇಡಿ'
ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸುತ್ತಿರುವ ಇಂದ್ರಾಣಿಯನ್ನು ಇಂದು ಮುಂಬೈ ನ್ಯಾಯಾಲಯದಲ್ಲಿ ವಿಚಾರಣೆಗೆ ಕರೆ ತರುವ ವೇಳೆಯಲ್ಲಿ ಚಿದಂಬರಂ ಬಂಧನದ ಬಗ್ಗೆ ಮಾತನಾಡಿದರು. ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಹ ಆರೋಪಿಯಾಗಿರುವ ಕಾರ್ತಿ ಚಿದಂಬರಂ ಅವರ ಜಾಮೀನು ಕೂಡ ತಿರಸ್ಕೃತವಾಗಲಿ ಎಂದು ಇಂದ್ರಾಣಿ ಹೇಳಿದ್ದಾರೆ.
ಆಗಸ್ಟ್ 21ರಂದು ಸಿಬಿಐ ಅಧಿಕಾರಿಗಳು ಪಿ ಚಿದಂಬರಂ ಅವರನ್ನು ದೆಹಲಿ ನಿವಾಸದಲ್ಲಿ ವಶಕ್ಕೆ ಪಡೆದು ಕೋರ್ಟಿನ ಮುಂದೆ ಹಾಜರುಪಡಿಸಿದ್ದರು. ನಂತರ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಚಿದಂಬರಂಗೆ ಸೆಪ್ಟೆಂಬರ್ 05ರ ತನಕ ಜಾರಿ ನಿರ್ದೇಶನಾಲಯದಿಂದ ಬಂಧನದಿಂದ ಭದ್ರತೆ ಸಿಕ್ಕಿದೆ. ಸಿಬಿಐ ವಶದಲ್ಲಿರುವ ಪಿ.ಚಿದಂಬರಂ ಅವರು ಸುಪ್ರೀಂಕೋರ್ಟ್ನಲ್ಲಿ ಹೂಡಿದ್ದ ಅರ್ಜಿಯ ಆದೇಶವನ್ನು ಸೆಪ್ಟೆಂಬರ್ 5 ರಂದು ನೀಡುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.
ಆ ಹೆಂಗಸಿನ ತಪ್ಪೊಪ್ಪಿಗೆ, ಪಿ ಚಿದಂಬರಂ ಬಂಧನಕ್ಕೆ ಕಾರಣವಾಯ್ತು
ಫೆಬ್ರವರಿ 17, 2018ರಲ್ಲಿ ಇಂದ್ರಾಣಿ ಅಪ್ರೂವರ್ ಆಗಿ CrPC ಸೆಕ್ಷನ್ 164 ಅನ್ವಯ ಮ್ಯಾಜಿಸ್ಟ್ರೇಟ್ ಮುಂದೆ ಕಾರ್ತಿ ಚಿದಂಬರಂ ಹಾಗೂ ಪಿ ಚಿದಂಬರಂ ವಿರುದ್ಧ ಹೇಳಿಕೆ ದಾಖಲಿಸಿದ್ದರಿಂದ ಪಿ ಚಿದಂಬರಂ ಬಂಧಿಸಲು ಸಾಧ್ಯವಾಗಿದೆ. ಇಂದ್ರಾಣಿ ನೀಡಿರುವ ಇಮೇಲ್ ಸಾಕ್ಷಿ, ಹೋಟೆಲ್ ಹಯಾತ್ ನಲ್ಲಿ ಭೇಟಿ, ಚಿದಂಬರಂ ನೀಡಿದ ಸೂಚನೆ, ಮುಂತಾದ ಸಾಕ್ಷಿಗಳೇ ಸದ್ಯಕ್ಕೆ ಇಡಿ ಹಾಗೂ ಸಿಬಿಐಗೆ ಪ್ರಮುಖ ಅಸ್ತ್ರಗಳಾಗಿವೆ. ಇದೇ ಸಾಕ್ಷಿಯನ್ನು ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಈಗ ಸುಪ್ರೀಂಕೋರ್ಟ್ ಮುಂದೆ ವಾದ ಮಂಡಿಸಿವೆ.