ರಫೇಲ್ ಡೀಲ್ : ಚೌಕಿದಾರ್ ಚೋರ್ ಎಂದಿದ್ದ ರಾಹುಲ್ ಗೆ ಭಾರೀ ಮುಖಭಂಗ
ಬೆಂಗಳೂರು, ಡಿಸೆಂಬರ್ 14 : ಚುನಾವಣಾ ರ್ಯಾಲಿಯಿರಲಿ, ಯಾವುದೇ ಸಭೆ ಸಮಾರಂಭವಿರಲಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಫೇಲ್ ಡೀಲ್ ಅವ್ಯವಹಾರದ ಬಗ್ಗೆ ಪ್ರಸ್ತಾಪಿಸದೆ ಭಾಷಣವನ್ನೇ ಆರಂಭಿಸುತ್ತಿರಲಿಲ್ಲ. 'ಚೌಕಿದಾರ್ ಚೋರ್ ಹೈ' ಎಂದು ಹೇಳದೆ ಅವರ ಮಾತು ಪೂರ್ತಿ ಆಗುತ್ತಿರಲಿಲ್ಲ.
ಈ ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲು ಸರ್ವೋಚ್ಚ ನ್ಯಾಯಾಲಯ ಸಾರಾಸಗಟಾಗಿ ನಿರಾಕರಿಸಿದ್ದರಿಂದ, ರಾಹುಲ್ ಗಾಂಧಿ ಅವರ ಹೋರಾಟಕ್ಕೆ, ಪ್ರತಿಷ್ಠೆಗೆ ಭಾರೀ ಹೊಡೆತ ಬಿದ್ದಂತಾಗಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯಲೇಬೇಕು, ಎಲ್ಲ ಸತ್ಯ ಹೊರಬೀಳಬೇಕು ಎಂದು ಅವರು ಪಟ್ಟು ಹಿಡಿದಿದ್ದರು.
ರಫೇಲ್ ಡೀಲ್ ಬಗ್ಗೆ ಐಎಎಫ್ ವಿವರಣೆ ನೀಡಲಿ : ಸುಪ್ರೀಂ ಕೋರ್ಟ್
ಫ್ರಾನ್ಸ್ ಸರಕಾರದ ಜೊತೆ 36 ರಫೇಲ್ ಯುದ್ಧ ವಿಮಾನ ಖರೀದಿ ಮಾಡುವಾಗ ದಿವಾಳಿಯ ಅಂಚಿನಲ್ಲಿದ್ದ ತಮ್ಮ 'ಸ್ನೇಹಿತ' ಅನಿಲ್ ಅಂಬಾನಿ ಅವರನ್ನು ದಿವಾಳಿತನದಿಂದ ಹೊರತರಲು, ಅವರಿಗೆ ಯುದ್ಧ ವಿಮಾನ ನಿರ್ಮಾಣದಲ್ಲಿ ಅನುಭವ ಇಲ್ಲದಿದ್ದರೂ, ಆಫ್ಸೆಟ್ ಪಾರ್ಟನರ್ ಆಗಿ ಮಾಡಲು ಮೋದಿ ಶಿಫಾರಸು ಮಾಡಿದ್ದರು ಎಂಬುದು ರಾಹುಲ್ ಅವರ ಆರೋಪ.
ಚೌಕಿದಾರ್ ಚೋರ್ ಹೈ ಎಂದಿದ್ದ ರಾಹುಲ್
ಜೆಟ್ ವಿಮಾನ ನಿರ್ಮಾಣದ ಬಗ್ಗೆ ಕಿಂಚಿತ್ತೂ ಗೊತ್ತಿಲ್ಲದ ಅನಿಲ್ ಅಂಬಾನಿ ಅವರ ರಿಲಯನ್ಸ್ ಡಿಫೆನ್ಸ್ ಕಂಪನಿಯನ್ನು ಆಫ್ಸೆಟ್ ಪಾರ್ಟನರ್ ಅನ್ನಾಗಿ ಮಾಡಿಸಿ, ನರೇಂದ್ರ ಮೋದಿಯವರು 30 ಸಾವಿರ ಕೋಟಿ ರುಪಾಯಿಯಷ್ಟು ಅವ್ಯವಹಾರ ನಡೆಸಿದ್ದಾರೆ, 'ಚೌಕಿದಾರ್ ಚೋರ್ ಹೈ' ಎಂದು ರಾಹುಲ್ ಗಾಂಧಿ ಅವರು ಅವಕಾಶ ಸಿಕ್ಕಾಗಲೆಲ್ಲ ವಾಗ್ದಾಳಿ ಮಾಡುತ್ತಿದ್ದರು. ಇದನ್ನು ಹಗರಣಗಳ ಹಗರಣ ಎಂದು ಕರೆದಿದ್ದ ರಾಹುಲ್ ಗಾಂಧಿ ಅವರು ಪ್ರತಿಬಾರಿ ಒಂದೊಂದು ಅಂಕಿಸಂಖ್ಯೆಯನ್ನು ಪ್ರಸ್ತಾಪಿಸುತ್ತಿದ್ದುದು ಅವರ ಅಧ್ಯಯನದ ಕೊರತೆಯನ್ನು ಎತ್ತಿ ತೋರಿಸುತ್ತಿತ್ತು.
ರಫೇಲ್ ಡೀಲ್ ಬಗ್ಗೆ ಐಎಎಫ್ ಗೆ ಸುಪ್ರೀಂ ಪ್ರಶ್ನೆಗಳ ಸುರಿಮಳೆ
ಸರ್ವೋಚ್ಚ ನ್ಯಾಯಾಲಯ ಮಧ್ಯ ಪ್ರವೇಶವಿಲ್ಲ
5ನೇ ಜನರೇಶನ್ ಫೈಟಲ್ ವಿಮಾನಗಳ ಅಗತ್ಯವಿದ್ದಿದ್ದರಿಂದ ಫ್ರಾನ್ಸ್ ನ ಡಸ್ಸಾಲ್ಟ್ ಕಂಪನಿಯ ಜೊತೆ ಭಾರತೀಯ ವಾಯು ಸೇನೆ ಮಾಡಿಕೊಂಡಿರುವ ಒಪ್ಪಂದ ಮತ್ತು ಖರೀದಿ ಮೊತ್ತದಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಇದು ವಾಯು ಸೇನೆಗೆ ಸಂಬಂಧಿಸಿದ ಸಂಗತಿ, ಇದರಲ್ಲಿ ಸರ್ವೋಚ್ಚ ನ್ಯಾಯಾಲಯ ಮಧ್ಯ ಪ್ರವೇಶಿಸುವುದಿಲ್ಲ ಎಂದು ಹೇಳಿದೆ. ಈ ಒಪ್ಪಂದದ ಬಗ್ಗೆ ಯಾವುದೇ ಸತ್ಯಾಂಶಗಳನ್ನು ತಿಳಿದುಕೊಳ್ಳದೆ ರಾಹುಲ್ ಗಾಂಧಿ ಅವರು ಏಕೆ ತನಿಖೆಗೆ ಒತ್ತಾಯಿಸುತ್ತಿದ್ದರು ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ.
LIVE: ರಫೇಲ್ ಡೀಲ್ ತನಿಖೆಗೆ ಸುಪ್ರೀಂ ನಕಾರ: ಕೇಂದ್ರ ಸರ್ಕಾರ ನಿರಾಳ
ಹೋರಾಟ ನಿಲ್ಲುವುದಿಲ್ಲ : ಪ್ರಶಾಂತ್ ಭೂಷಣ್
ಈ ಹಗರಣದ ತನಿಖೆ ನಡೆಯಲೇಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದವರಲ್ಲಿ ಪ್ರಮುಖರು ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಅವರು, ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪು ಸಂಪೂರ್ಣ ತಪ್ಪಾಗಿದೆ. ನರೇಂದ್ರ ಮೋದಿ ಸರಕಾರದ ವಿರುದ್ಧ ನಮ್ಮ ಅಭಿಯಾನ ನಿಲ್ಲುವುದಿಲ್ಲ, ಇನ್ನು ಜೋರಾಗಲಿದೆ. ಈ ತೀರ್ಪನ್ನು ಪ್ರಶ್ನಿಸಿ ರಿವ್ಯೂ ಅರ್ಜಿಯನ್ನು ಸಲ್ಲಿಸುವ ಬಗ್ಗೆ ನಾವು ಸದ್ಯದಲ್ಲಿಯೇ ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದು ಅವರು ಹೇಳಿದ್ದಾರೆ. ಪ್ರಶಾಂತ್ ಭೂಷಣ್ ಅವರಿಗೆ, ಮಾಜಿ ಕೇಂದ್ರ ಸಚಿವರಾದ ಯಶವಂತ್ ಸಿನ್ಹಾ ಮತ್ತು ಅರುಣ್ ಶೌರಿ ಅವರು ಜೊತೆಯಾಗಿದ್ದಾರೆ.
ನಿರಾಳರಾದ ಅನಿಲ್ ಅಂಬಾನಿ ಪ್ರತಿಕ್ರಿಯೆ
ಈ ಹಗರಣಕ್ಕೆ ಸಂಬಂಧಿಸಿದ ಎಲ್ಲ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿರುವುದನ್ನು ಸ್ವಾಗತಿಸುವುದಾಗಿ ಹೇಳಿದ್ದು, ವಿರೋಧಿಗಳು ಹೇಗೆ ರಿಲಯನ್ಸ್ ಗ್ರೂಪ್ ಮೇಲೆ ಮತ್ತು ನನ್ನ ಮೇಲೆ ವೈಯಕ್ತಿಕವಾಗಿ ಆಧಾರರಹಿತ, ರಾಜಕೀಯ ಪ್ರೇರಿತ ಸುಳ್ಳು ಆರೋಪ ಹೊರಿಸಿದ್ದರು ಎಂಬುದು ಇದರಿಂದ ಸಾಬೀತಾಗಿದೆ ಎಂದು ಈ ಹಗರಣದ ಪ್ರಮುಖ ಕೇಂದ್ರಬಿಂದುವಾಗಿದ್ದ ರಿಲಯನ್ಸ್ ಗ್ರೂಪ್ ಆಫ್ ಕಂಪನಿಯ ಚೇರ್ಮನ್ ಆಗಿರುವ ಅನಿಲ್ ಅಂಬಾನಿ ಅವರು ಪ್ರತಿಕ್ರಿಯಿಸಿದ್ದಾರೆ. ನಾವು ಭಾರತದ ರಾಷ್ಟ್ರೀಯ ಭದ್ರತೆಗೆ ಮತ್ತು ನರೇಂದ್ರ ಮೋದಿ ಸರಕಾರದ ಮೇಕ್ ಇನ್ ಇಂಡಿಯಾ ಕನಸನ್ನು ಸಾಕಾರಗೊಳಿಸಲು ವಿನಮ್ರತೆಯಿಂದ ಕಾಣಿಕೆ ನೀಡಬಯಸುವುದಾಗಿ ಹೇಳಿದ್ದಾರೆ. ಇಷ್ಟೆಲ್ಲ ವಿವಾದ ಸೃಷ್ಟಿಯಾಗಿದ್ದಾಗಲೂ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.