ಉತ್ತರಾಖಂಡ್: 65 ಕೊರೊನಾ ರೋಗಿಗಳ ಸಾವು ಮರೆಮಾಚಿದ ಆಸ್ಪತ್ರೆ!
ಡೆಹ್ರಾಡೂನ್, ಮೇ 18: ಹರಿದ್ವಾರ ಖಾಸಗಿ ಆಸ್ಪತ್ರೆಯಲ್ಲಿ 65 ಮಂದಿ ಕೊರೊನಾವೈರಸ್ ಸೋಂಕಿತರ ಸಾವಿನ ವಿಚಾರವನ್ನು ಮರೆಮಾಚಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕೊವಿಡ್-19 ನಿಯಮಗಳ ಸ್ಪಷ್ಟ ಉಲ್ಲಂಘನೆ ಬಗ್ಗೆ ಸೋಮವಾರ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಕೊರೊನಾವೈರಸ್ ಸೋಂಕಿತರ ಸಾವಿನ ಕುರಿತು ಬೇಜವಾಬ್ದಾರಿ ತೋರಿದ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಂಪುಟ ಸಚಿವ ಹಾಗೂ ರಾಜ್ಯ ಸರ್ಕಾರದ ವಕ್ತಾರ ಸುಬೋಧ್ ಉನಿಯಲ್ ತಿಳಿಸಿದ್ದಾರೆ.
ಈ ಗ್ರಾಮ ಸ್ವಯಂ ಲಾಕ್ಡೌನ್; ಅನಗತ್ಯವಾಗಿ ಹೊರ ಬಂದರೆ ದಂಡ!
ಬಾಬಾ ಬರ್ಫಾನಿ ಆಸ್ಪತ್ರೆಯಲ್ಲಿ ಕಳೆದ ಏಪ್ರಿಲ್ 25 ರಿಂದ ಮೇ 12ರ ಅವಧಿಯಲ್ಲಿ 65 ಮಂದಿ ಕೊರೊನಾವೈರಸ್ ಸೋಂಕಿತರು ಪ್ರಾಣ ಬಿಟ್ಟಿದ್ದಾರೆ. ಈ ವಿಷಯವನ್ನು ರಾಜ್ಯದ ಕೊವಿಡ್-19 ಕಂಟ್ರೋಲ್ ರೂಮ್ ಅಧಿಕಾರಿಗಳಿಗೆ ಒದಗಿಸದೇ ಮರೆ ಮಾಚಲಾಗಿತ್ತು. ಶಿಸ್ತುಕ್ರಮದ ಎಚ್ಚರಿಕೆ ನೀಡಿದ ನಂತರದಲ್ಲಿ ಆಸ್ಪತ್ರೆ ಆಡಳಿತ ಮಂಡಳಿಯು ಅಸಲಿ ಕಥೆಯನ್ನು ಬಿಚ್ಚಿಟ್ಟಿದೆ.
ವೈದ್ಯಕೀಯ ಸಿಬ್ಬಂದಿ ಕೊರತೆ ನೆಪ:
ಕೊರೊನಾವೈರಸ್ ಸೋಂಕಿತನ ಸಾವಿನ ಬಗ್ಗೆ ಸರಿಯಾದ ಸಮಯದಲ್ಲಿ ಕಂಟ್ರೋಲ್ ರೂಮ್ ಅಧಿಕಾರಿಗಳಿಗೆ ಮಾಹಿತಿ ನೀಡದಿರಲು ಖಾಸಗಿ ಆಸ್ಪತ್ರೆಯಲ್ಲಿನ ವೈದ್ಯಕೀಯ ಸಿಬ್ಬಂದಿ ಕೊರತೆಯೇ ಕಾರಣ ಎಂದು ಇದೀಗ ನೆಪ ಹೇಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯಾದ್ಯಂತ ಕೊರೊನಾವೈರಸ್ ಸೋಂಕಿನಿಂದ ಬಳಲುತ್ತಿದ್ದ ರೋಗಿ ಮೃತಪಟ್ಟು 24 ಗಂಟೆಗಳಲ್ಲೇ ಕೊವಿಡ್-19 ಕಂಟ್ರೋಲ್ ರೂಮ್ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡುವಂತೆ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಅಭಿಷೇಕ್ ತ್ರಿಪಾಠಿ ಹೇಳಿದ್ದಾರೆ.
ಉತ್ತರಾಖಂಡದಲ್ಲಿ ಇತ್ತೀಚಿನ ವಾರದಲ್ಲಿ ಖಾಸಗಿ ಆಸ್ಪತ್ರೆಗಳು ಸಾವಿನ ಸಂಖ್ಯೆ ಬಗ್ಗೆ ಸರಿಯಾದ ಮಾಹಿತಿ ನೀಡದ ಹೊರತಾಗಿಯೂ ಕೂಡಾ ಕೊರೊನಾವೈರಸ್ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ದಿಢೀರ್ ಏರಿಕೆ ಕಂಡು ಬಂದಿತ್ತು. ಈ ಹಿನ್ನೆಲೆ ಪ್ರತಿನಿತ್ಯ ಕೊರೊನಾವೈರಸ್ ಸೋಂಕಿತರ ಸಾವಿನ ಬಗ್ಗೆ ಕೊವಿಡ್-19 ಕಂಟ್ರೋಲ್ ರೂಮ್ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಕಡ್ಡಾಯ ಎಂದು ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಕಾರ್ಯದರ್ಶಿ ಅಮಿತ್ ನೇಗಿ ಪತ್ರ ಬರೆದಿದ್ದರು.