ಲೋಕಸಭೆ ಚುನಾವಣೆಗೂ ಮುನ್ನ ಎನ್ ಡಿಎ ವಿರುದ್ಧ 'ಮಾಜಿ'ಗಳ ಯುದ್ಧ!
ನವದೆಹಲಿ, ಡಿಸೆಂಬರ್ 19: 2019 ರ ಲೋಕಸಭಾ ಚುನಾವಣೆ ಬಿಜೆಪಿಗೆ ಸುಲಭದ ತುತ್ತಂತೂ ಅಲ್ಲವೇ ಅಲ್ಲ. 2014 ರ ಲೋಕಸಭಾ ಚುನಾವಣೆಗೂ ಮುನ್ನ ಮತ್ತು ಫಲಿತಾಂಶದ ನಂತರ ಎನ್ ಡಿಎ ಯೊಂದಿಗೆ ಸೇರಿಕೊಂಡ ಹಲವು ಪಕ್ಷಗಳು ಇಂದು ಬಿಜೆಪಿಯೊಂದಿಗಿಲ್ಲ.
ಬೇರೆ ಬೇರೆ ಕಾರಣಗಳಿಗೆ ಬಿಜೆಪಿ ಜೊತೆ ಮುನಿಸಿಕೊಂಡಿರುವ ಈ ಎಲ್ಲ ಪಕ್ಷಗಳು ಲೋಕಸಭಾ ಚುನಾವಣೆಯ ಹೊತ್ತಿಗೆ ಬಿಜೆಪಿಗೆ ಬಹುದೊಡ್ಡ ತಲೆನೋವಾಗುವ ಎಲ್ಲಾ ಲಕ್ಷಣಗಳೂ ಕಂಡುಬರುತ್ತಿವೆ.
NDA ಗೆ ಆಘಾತ: ಕೇಂದ್ರ ಸಚಿವ ಸ್ಥಾನಕ್ಕೆ ಉಪೇಂದ್ರ ಕುಶ್ವಾಹ ರಾಜೀನಾಮೆ
ಈ ಮಾತಿಗೆ ಪೂರಕ ಎಂಬಂತೆ ರಾಷ್ಟ್ರೀಯ ಲೋಕ ಸಮತಾ ಪಕ್ಷದ ನಾಯಕ ಉಪೇಂದ್ರ ಕುಶ್ವಾಹ ಇತ್ತೀಚೆಗಷ್ಟೇ ಎನ್ ಡಿಎ ಯಿಂದ ದೂರ ಸರಿದಿದ್ದಾರೆ. ಜೊತೆಗೆ ಎನ್ ಡಿಎ ಮೈತ್ರಿಕೂಟಕ್ಕೆ 'ಮಾಜಿ' ಯಾಗಿರುವ ಅವರು ಎನ್ ಡಿಎ ವಿರುದ್ಧ ಹೋರಾಟ ಆರಂಭಿಸಿದ್ದಾರೆ. ಈಗಾಗಲೇ ಎನ್ ಡಿಎ ಜೊತೆ ಗುರುತಿಸಿಕೊಂಡಿರುವ ಪಕ್ಷಗಳು ಆದಷ್ಟು ಬೇಗ ಎನ್ ಡಿಎ ಯನ್ನು ತೊರೆದು ಬರುವುದು ಒಳಿತು. ಇಲ್ಲವೆಂದರೆ ಬಿಜೆಪಿ ತನ್ನ ಉಪಯೋಗಕ್ಕಾಗಿ ಎನ್ ಡಿಎ ಜೊತೆ ಗುರುತಿಸಿಕೊಂಡ ಎಲ್ಲಾ ಪಕ್ಷಗಳನ್ನೂ ನಾಶ ಮಾಡುತ್ತದೆ ಎಂದು ಕುಶ್ವಾಹ ಹೇಳಿದ್ದಾರೆ.
ಪಾಸ್ವಾನ್ ಗೆ ಕಿವಿಮಾತು
ಬಿಜೆಪಿ ಮತ್ತು ನಿತೀಶ್ ಕುಮಾರ್ ಅವರ ದುರಾಹಂಕಾರವೇ ನಾನು ಎನ್ ಡಿಎಯನ್ನು ತೊರೆಯಲು ಮುಖ್ಯ ಕಾರಣ. ಲೋಕಜನಶಕ್ತಿ ಪಕ್ಷ ಸಹ ಆದಷ್ಟು ಬೇಗ ಎನ್ ಡಿಎಯನ್ನು ತೊರೆಯುವುದು ಒಳಿತು ಎಂದು ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ಕಿವಿಮಾತು ಹೇಳಿದರು. ಇಲ್ಲವೆಂದರೆ ಬಿಜೆಪಿಯು ಎಲ್ಲಾ ಸಣ್ಣ ಸಣ್ಣ ಪಕ್ಷಗಳನ್ನೂ ನಾಶಮಾಡುತ್ತದೆ ಎಂದು ಕುಶ್ವಾಹ ಹೇಳಿದ್ದಾರೆ.
ಯಾರು ಈ ಕುಶ್ವಾಹ?
ರಾಷ್ಟ್ರೀಯ ಲೋಕ ಸಮತಾ ಪಕ್ಷದ ಸಂಸ್ಥಾಪಕರಾದ ಉಪೇಂದ್ರ ಕುಶ್ವಾಹ ಎನ್ ಡಿಎ ಜೊತೆ ಗುರುತಿಸಿಕೊಂಡಿದ್ದರು. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ರಾಜ್ಯ ಸಚಿವರಾಗಿದ್ದ ಕುಶ್ವಾಹ ಇತ್ತೀಚೆಗೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಎನ್ ಡಿಎ ಮೈತ್ರಿಕೂಟಕ್ಕೆ ಆಘಾತ ನೀಡಿದ್ದರು. ಬಿಹಾರದಲ್ಲಿ ಲೋಕಸಭಾ ಚುನಾವಣೆಗೆ ತಾವು ಕೇಳಿದಷ್ಟು ಸೀಟು ನೀಡಲು ಬಿಜೆಪಿ ಸಿದ್ಧವಿಲ್ಲದ ಕಾರಣ ಕುಶ್ವಾಹ ಬಿಜೆಪಿ ಜೊತೆ ಮುನಿಸಿಕೊಂಡಿದ್ದರು.
NDA ಜೊತೆ ಬ್ರೇಕಪ್: ಉಪೇಂದ್ರ ಕುಶ್ವಾಹ ನೀಡಿದ ಕಾರಣವೇನು?
ಎನ್ ಡಿಎ ತೊರೆಯಲು ಕಾರಣವೇನು?
ಅಷ್ಟಕ್ಕೂ ನಾಲ್ಕೂವರೆ ವರ್ಷಗಳಿಂದ ಎನ್ ಡಿಎ ಜೊತೆಗಿದ್ದು ಇದೀಗ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ನಾಯಕರು ಮೈತ್ರಿಕೂಟ ತೊರೆಯಲು ಕಾರಣವೇನು? ಎನ್ ಡಿಎ ಮೈತ್ರಿಕೂಟದಿಂದ ಹೊರಬಂದು, ಚುನಾವಣೆಯ ಸಮಯದಲ್ಲಿ ತಟಸ್ಥವಾಗಿದ್ದು, ನಂತರ ಫಲಿತಾಂಶ ನೋಡಿಕೊಂಡು ಯಾವ ಮೈತ್ರಿಕೂಟಕ್ಕೆ ಹೋಗಬೇಕು ಎಂಬುದನ್ನು ನಿರ್ಧರಿಸುವುದು ಬಹುತೇಕ ಸಣ್ಣ ಪುಟ್ಟ ಪಕ್ಷಗಳು ಮಾಡುವ ಸರ್ವೇಸಾಮಾನ್ಯ ಕಾರ್ಯತಂತ್ರ. ಆರ್ ಎಲ್ ಎಸ್ ಪಿ ಸಹ ಅದಕ್ಕೆ ಹೊರತಾಗಿಲ್ಲ.
ಬಿಜೆಪಿಗೆ ಸಂಕಷ್ಟ
2014 ರ ಚುನಾವಣೆಯ ಸಂದರ್ಭದಲ್ಲಿ ಆಗಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಡಳಲಿತ ವಿರೋಧಿ ಅಲೆ ಇತ್ತು. ಜೊತೆಗೆ ನರೇಂದ್ರ ಮೋದಿ ನಾಯಕತ್ವಕ್ಕೆ ಅವಕಾಶ ನೀಡಲು ಜನ ತುಡಿಯುತ್ತಿದ್ದರು. ನಾಯಕತ್ವದ ಕೊರತೆಯನ್ನೂ ಎದುರಿಸುತ್ತಿದ್ದ ಕಾಂಗ್ರೆಸ್ ಹೀನಾಯ ಸೋಲು ಕಂಡಿತ್ತು. ಆದರೆ ಈ ಬಾರಿ ಹಾಗಾಗುವ ಸಾಧ್ಯತೆ ಕಡಿಮೆ. ಲೋಕಸಭಾ ಚುನಾವಣೆಗೂ ಮುನ್ನ ತನ್ನನ್ನು ತಾನು ಸಾಬೀತುಪಡಿಸಿಕೊಳ್ಳಲು ಛತ್ತೀಸ್ ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಮೋದಿ ಸರ್ಕಾರದ ವಿರುದ್ಧ ರಫೇಲ್, ಅಪನಗದೀಕರಣ, ಜಿಎಸ್ಟಿ, ಸಿಬಿಐ, ಆರ್ ಬಿಐ ವಿವಾದಗಳನ್ನು ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿರುವ ಕಾಂಗ್ರೆಸ್, ಮಹಾಮೈತ್ರಿಯೊಂದಿಗೆ ಲೋಕಸಭಾ ಚುನಾವಣೆಯನ್ನು ಎದುರಿಸಿದರೆ ಎನ್ ಡಿಎ ಗೆ ಸಂಕಷ್ಟ ತಪ್ಪಿದ್ದಲ್ಲ.