ಸಾಯುವ ಮುನ್ನಾ ಅತ್ಯಾಚಾರ ಸಂತ್ರಸ್ತೆ ಹೇಳಿದ ಕೊನೆಯ ಮಾತು
ನವದೆಹಲಿ, ಡಿಸೆಂಬರ್ 07: ತನ್ನ ಮೇಲೆ ಅತ್ಯಾಚಾರ ಮಾಡಿದ ಆರೋಪಿಗಳಿಗೆ ಶಿಕ್ಷೆ ಆಗಬೇಕೆಂದು ಹಠತೊಟ್ಟು ಹೋರಾಡುತ್ತಿದ್ದ ಉನ್ನಾವೋ ನ ಯುವತಿಯನ್ನು ಅತ್ಯಾಚಾರ ಆರೋಪಿಗಳೇ ಬೆಂಕಿ ಹಚ್ಚಿ ಸುಟ್ಟು ಕೊಂದಿದ್ದಾರೆ.
ಉರಿಯಲ್ಲಿ ಬೆಂದಿದ್ದರೂ ಸತತ ನಲವತ್ತು ಗಂಟೆ ಜೀವ ಕೈಯಲ್ಲಿ ಹಿಡಿದು ಹೋರಾಡಿದ್ದ ಸಂತ್ರಸ್ತೆ ಇಂದು ಬೆಳಿಗ್ಗೆ ಕೊನೆ ಉಸಿರೆಳೆದಿದ್ದಾಳೆ. ಆದರೆ ಸಾಯುವ ಮುನ್ನಾ ಆಕೆ ಆಡಿದ್ದ ಮಾತುಗಳು ಆಕೆಯಲ್ಲಿದ್ದ ಬದುಕುವ ಅಪರಿಮಿತ ಆಸೆ, ಅತ್ಯಾಚಾರಿಗಳ ವಿರುದ್ಧ ಸಿಟ್ಟನ್ನು ತೋರುತ್ತಿವೆ.
ಅತ್ಯಾಚಾರ ಪ್ರಕರಣದ ವಿಚಾರಣೆಗೆಂದು ನ್ಯಾಯಾಲಯಕ್ಕೆ ತೆರಳುತ್ತಿದ್ದ ವೇಳೆ ಅತ್ಯಾಚಾರ ಆರೋಪಿ ತನ್ನ ಇತರ ಸಂಗಡಿರೊಂದಿಗೆ ಸೇರಿಕೊಂಡು ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಬೆಂಕಿಯಲ್ಲಿ ಸುಟ್ಟರೂ ಸುಮಾರು ದೂರ ಸಾಗಿ ಸಹಾಯಕ್ಕಾಗಿ ಅಂಗಲಾಚಿದ ಯುವತಿಯನ್ನು ಯಾರೋ ಆಸ್ಪತ್ರೆಗೆ ದಾಖಲಿಸಿದರು.
ಬೆಂಕಿಯಲ್ಲಿ ಬೆಂದ ಉನ್ನಾವೊ ರೇಪ್ ಸಂತ್ರಸ್ತೆ ದುರ್ಮರಣ
ಶೇ 90 ರಷ್ಟು ಸುಟ್ಟ ಗಾಯಗಳಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಸಂತ್ರಸ್ತೆಯನ್ನು ದೆಹಲಿಯ ಆಸ್ಪತ್ರೆಗೆ ಏರ್ಲಿಫ್ಟ್ ಮಾಡಲಾಗಿತ್ತು. ಆದರೆ ಅಲ್ಲಿ ವೈದ್ಯರು ನಡೆಸಿದ ಯತ್ನಗಳು ವಿಫಲವಾಗಿದ್ದು, ಆಕೆ ಕೊನೆ ಉಸಿರೆಳೆದಿದ್ದಾಳೆ.
ಸಾಯುವ ಮುನ್ನಾ ಹೇಳಿದ ಮಾತುಗಳೇನು?
ಸಾಯುವ ಮುನ್ನಾ ಆಕೆ ಹೇಳಿದ್ದ ಮಾತುಗಳು ದಾಖಲಾಗಿವೆ. ಆಕೆ ಆಸ್ಪತ್ರೆಯ ಮುಖ್ಯ ವೈದ್ಯರೊಂದಿಗೆ ಮಾತನಾಡಿ, 'ನಾನು ಬದುಕಬೇಕು, ನನ್ನನ್ನು ಉಳಿಸಿಕೊಳ್ಳಿ' ಎಂದು ಅಂಗಲಾಚಿದ್ದಳು ಎಂದು ವೈದ್ಯರು ಹೇಳಿದ್ದಾರೆ. ಜೊತೆಗೆ 'ಆರೋಪಿಗಳನ್ನು ಬಿಡಬೇಡಿ, ಅವರಿಗೆ ಶಿಕ್ಷೆ ಆಗಲಿ, ನನ್ನನ್ನು ಬದುಕಿಸಿ ಅವರು ನೇಣಿಗೇರುವುದನ್ನು ನಾನು ನೋಡಬೇಕು' ಎಂದು ಸಂತ್ರಸ್ತೆ ಪದೇ-ಪದೇ ಹೇಳಿದ್ದಾಳೆ.
ಭಾರಿ ಆಕ್ರೋಶ ಕೆರಳಿಸಿರುವ ಪ್ರಕರಣ
ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಇಟ್ಟ ಪ್ರಕರಣ ಭಾರಿ ಆಕ್ರೋಶ ಕೆರಳಿಸಿದ್ದು, ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ವಿಧಾನಸಭೆ ಎದುರು ಕೂತು ಪ್ರತಿಭಟನೆ ನಡೆಸಿದ್ದಾರೆ.
ಯೋಗಿ ಆಡಳಿತದಲ್ಲಿ ಅತ್ಯಾಚಾರಿಗಳ ದರ್ಬಾರ್: ಜಾಮೀನು ಪಡೆದ ದಿನವೇ ಸಂತ್ರಸ್ತೆಗೆ ಬೆಂಕಿ ಇಟ್ಟ ಆರೋಪಿ
'ನನಗೆ ಹಣ ಬೇಡ, ಆರೋಪಿಗಳನ್ನು ಅಟ್ಟಾಡಿಸಿ ಕೊಲ್ಲಿ'
'ನನ್ನ ಮಗಳು ಮರಣಹೊಂದಿದ್ದಾಳೆ, ನನಗೆ ಹಣ, ಆಸ್ತಿ ಇನ್ನಾವುದೇ ಸಹಾಯ ಬೇಡ, ಆರೋಪಿಗಳನ್ನು ಅಟ್ಟಾಸಿಕೊಂಡು ಕೊಲ್ಲಬೇಕು, ಹೈದರಾಬಾದ್ ಮಾದರಿಯಲ್ಲಿ ನ್ಯಾಯ ದೊರಕಬೇಕು' ಎಂದು ಸಂತ್ರಸ್ತೆಯ ತಂದೆ ಮೊರೆ ಇಟ್ಟಿದ್ದಾರೆ.
ಸುಟ್ಟ ದೇಹವನ್ನು ಹೇಗೆ ಸುಡೋಣ: ಸಂತ್ರಸ್ತೆ ಸಹೋದರ
ಸಂತ್ರಸ್ತೆಯ ನೊಂದ ಅಣ್ಣ ಮಾತನಾಡಿ, 'ಈಗಾಗಲೇ ಆಕೆಯನ್ನು ಸುಡಲಾಗಿದೆ, ನಾವು ಅಂತ್ಯಸಂಸ್ಕಾರವಾದರೂ ಮಾಡುವುದು ಹೇಗೆ? ಆ ಐದು ಜನರು ಬದುಕಿರಬಾರದು, ಅವರ ನಾಮಾವಶೇಷವಾಗಬೇಕು' ಎಂದು ಆಕ್ರೋಶದಿಂದ ಒತ್ತಾಯಿಸಿದ್ದಾರೆ.
ಅತ್ಯಾಚಾರ ಸಂತ್ರಸ್ತೆ ಸ್ಥಿತಿ ಗಂಭೀರ: ಆ ಪಾಪಿಗಳು ನೇಣಿಗೇರುವುದನ್ನು ನೋಡಬೇಕು ಎಂದ ಯುವತಿ