ಉನ್ನಾವೋ ಅತ್ಯಾಚಾರ ತೀರ್ಪು; ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ
ನವದೆಹಲಿ, ಡಿಸೆಂಬರ್ 20: ಅಪರಾಧ ಮಾಡಿದವರು ಎಷ್ಟೇ ದೊಡ್ಡವರಾದರೂ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ ಎಂಬ ಮಾತು ಸತ್ಯವಾಗಿದೆ. ಅಧಿಕಾರ, ಹಣ ಇದ್ದರೇ ಏನು ಬೇಕಾದರೂ ಮಾಡಿ ದಕ್ಕಿಸಿಕ್ಕೊಳ್ಳಬಹುದು ಎಂಬುವವರಿಗೆ ದೆಹಲಿ ನ್ಯಾಯಾಲಯ ಸರಿಯಾದ ಪಾಠ ಕಲಿಸಿದೆ. ದೇಶಾದ್ಯಂತ ಸದ್ದು ಮಾಡಿದ್ದ ಉನ್ನಾವೋ ಅತ್ಯಾಚಾರದಲ್ಲಿ ನೊಂದ ಬಾಲಕಿಗೆ ಕಡೆಗೂ ನ್ಯಾಯ ದೊರಕಿದೆ.
ಹೌದು, ಸಮಾಜದಲ್ಲಿ ಶೋಷಿತರನ್ನು, ಮಹಿಳೆಯರನ್ನು, ಅನ್ಯಾಯಕ್ಕೊಳಗಾದವರನ್ನು ಕಾಯಬೇಕಿದ್ದ ಶಾಸಕನೇ, ಬಾಲಕಿಯೊಬ್ಬಳಿಗೆ ರಾಕ್ಷಸನಾಗಿದ್ದವ ಇಂದು ಜೀವನಪೂರ್ತಿ ಜೈಲಿನಲ್ಲಿ ಕೊಳೆಯಬೇಕಾದ ಪ್ರಸಂಗ ಬಂದೊದಗಿದೆ. ಉತ್ತರ ಪ್ರದೇಶದ ಉನ್ನಾವೋದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ಗೆ ದೆಹಲಿಯ ತೀಸ್ ಹಜಾರ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ, ಶಿಕ್ಷೆ ಪ್ರಕಟಿಸಿದೆ.
ಸಾಯುವತನಕ ಜೈಲಿನಲ್ಲಿ
ದೆಹಲಿಯ ತೀಸ್ ಹಜಾರ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಧರ್ಮೇಶ ಶರ್ಮಾ ಶಿಕ್ಷೆ ಪ್ರಕಟಿಸಿದರು. ಐಪಿಸಿ ಕಲಂ 376 (2) ಪ್ರಕಾರ ಹಾಗೂ ಫೊಸ್ಕೊ ಕಾಯ್ದೆ ಅಡಿ ಕುಲದೀಪ್ ಸಿಂಗ್ ಸೆಂಗರ್ಗೆ ಸಾಯುವವರೆಗೂ ಜೈಲಿನಲ್ಲಿ ಕೊಳೆಯಬೇಕಾಗಿದ್ದು, ಅಲ್ಲದೇ ಸೆಂಗರ್ ಸಂತ್ರಸ್ತೆಯ ಕುಟುಂಬಕ್ಕೆ 10 ಲಕ್ಷ ರುಪಾಯಿ ಪರಿಹಾರ ನೀಡಬೇಕು ಹಾಗೂ ವಿಚಾರಣೆಯ ವೆಚ್ಚ 15 ಲಕ್ಷ ರುಪಾಯಿಯನ್ನು ಪಾವತಿಸಬೇಕು. ಅಲ್ಲದೇ ಸಂತ್ರಸ್ತೆಗೆ ಹಾಗೂ ಅವಳ ಕುಟುಂಬಕ್ಕೆ ಹೆಚ್ಚಿನ ಭದ್ರತೆ ನೀಡುವಂತೆ ಸಿಬಿಐ ನಿರ್ದೇಶನ ನೀಡಬೇಕು ಎಂದು ಕೋರ್ಟ್ ಆದೇಶ ನೀಡಿದೆ.
ಉನ್ನಾವೋ ಅತ್ಯಾಚಾರ; ಬಿಜೆಪಿ ಉಚ್ಚಾಟಿತ ಶಾಸಕ ಕುಲದೀಪ್ ಸೆಂಗಾರ್ಗೆ ಜೀವಾವಧಿ ಶಿಕ್ಷೆ
ಕರುಣೆ ತೋರಿಸಿ
ನ್ಯಾಯಾಲಯ ವಿಚಾರಣೆ ನಡೆಸಿದ ನಂತರ, ಕುಲದೀಪ್ ಸಿಂಗ್ ಸೆಂಗರ್ ಪ್ರಕರಣದಲ್ಲಿ ಅಪರಾಧಿಯಾಗಿದ್ದಾನೆ ಎಂದು ಕಳೆದ ಮಂಗಳವಾರ ತೀರ್ಪು ನೀಡಿ, ಶಿಕ್ಷೆ ಪ್ರಕಟಣೆಯನ್ನು ಡಿ.20 ಕ್ಕೆ ಮುಂದೂಡಿತ್ತು. ನ್ಯಾಯಾಲಯಕ್ಕೆ ಇಂದು ಬೆಳಿಗ್ಗೆ 12 ಗಂಟೆಗೆ ಹಾಜರಾದ ಕುಲದೀಪ್ ಹಾಗೂ ಸಂತ್ರಸ್ತೆಯ ಕುಟುಂಬದವರು ಸುಮಾರು ಒಂದು ಗಂಟೆ ಕೋರ್ಟ್ ಹಾಲ್ನಲ್ಲಿ ಇದ್ದರು. ಈ ವೇಳೆ ಸಂತ್ರಸ್ತೆಯ ಪರ ವಕೀಲರು, 'ಅಪರಾಧಿಗೆ ಗರಿಷ್ಠ ಶಿಕ್ಷೆ ವಿಧಿಸಬೇಕು' ಎಂದು ಮನವಿ ಮಾಡಿದರು. ಸೆಂಗರ್ ಪರ ವಕೀಲರು, 'ಸೆಂಗರ್ ಕುಟುಂಬಕ್ಕೆ ಯಾರೂ ದಿಕ್ಕು ಇಲ್ಲ. ಹೀಗಾಗಿ ನ್ಯಾಯಾಲಯ ದಯೆ ತೋರಿಸಬೇಕು' ಎಂದು ಮನವಿ ಮಾಡಿದರು. ಮನವಿ ಆಲಿಸಿದ ನ್ಯಾಯಾಧೀಶರು, ಮಧ್ಯಾಹ್ನ 2 ಗಂಟೆಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದರು.
ಕುಸಿದು ಬಿದ್ದ ಸೆಂಗರ್
ಸೆಂಗರ್ ಪರ ವಕೀಲರು ನ್ಯಾಯಾಧೀಶರ ಮುಂದೆ, ಸೆಂಗರ್ ಗೆ ಗರಿಷ್ಠ ಶಿಕ್ಷೆಯಿಂದ ವಿನಾಯಿತಿ ನೀಡಿ ಎಂದು ಪರಿಪರಿಯಾಗಿ ಕೇಳಿಕೊಂಡರು. ಆದರೆ, ನ್ಯಾಯಾಧೀಶರು ಇದೊಂದು ಅತ್ಯಂತ ವಿರಳ ಪ್ರಕರಣ. ರಕ್ಷಿಸಬೇಕಾದವರೇ ಭಕ್ಷಿಸಿದ್ದಾರೆ. ಇಂತಹವರಿಗೆ ದಯೆ ತೋರುವುದು ಸೂಕ್ತ ಅಲ್ಲ. ಜೀವನಪೂರ್ತಿ ಅಂದರೆ ಸಹಜವಾಗಿ ಸಾಯುವವರೆಗೂ ಜೈಲಿನಲ್ಲಿ ಇರತಕ್ಕದ್ದು ಎಂದು ಗರಿಷ್ಠ ಶಿಕ್ಷೆ ಪ್ರಕಟಿಸಿದರು. ಈ ವೇಳೆ ಕಣ್ಣೀರು ಹಾಕುತ್ತಿದ್ದ, ಸೆಂಗರ್, ಶಿಕ್ಷೆ ಪ್ರಕಟವಾದ ತಕ್ಷಣ ಕುಸಿದು ಬಿದ್ದ, ಸ್ಥಳದಲ್ಲಿದ್ದ ಪೊಲೀಸರು ಅವನನ್ನು ಮೇಲೆತ್ತಿದ್ದರೂ ಮತ್ತೇ ಮೂರು ಸಾರಿ ಕುಸಿದು ಬಿದ್ದು ನಿಶಕ್ತನಾಗಿದ್ದು ಕಂಡು ಬಂದಿತು.
ಉತ್ತರ ಪ್ರದೇಶದಲ್ಲಿ 4 ತಿಂಗಳಲ್ಲಿ 5 ಮಂದಿ ಅತ್ಯಾಚಾರ ಸಂತ್ರಸ್ತೆಯರಿಗೆ ಬೆಂಕಿ
ಘಟನೆಯ ಟೈಮ್ ಲೈನ್
2017 ರ ಜೂನ್ 4; ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯ ಬಂಗೇರಮಾವು ಕ್ಷೇತ್ರದ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಹಾಗೂ ಆತನ ಸಹಚರರು 17 ವರ್ಷದ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿದ್ದರು.
2018, ಏಪ್ರೀಲ್ 3; ಘಟನೆಯನ್ನು ಖಂಡಿಸಿ, ಬಾಲಕಿ ತಂದೆ ನಿರಂತರವಾಗಿ ಪೊಲೀಸರ ಬಳಿ ಹೋದರೂ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ. ಈ ದಿನ ಬಾಲಕಿ ತಂದೆಯನ್ನೇ ಪೊಲೀಸರು ಅಕ್ರಮ ಶಸ್ತ್ರಾಸ್ತ ಕಾಯ್ದೆ ಅಡಿ ಬಂಧಿಸಿ ಲಾಕಪ್ನಲ್ಲಿ ಇಟ್ಟಿದ್ದರು.
2018 ಏಪ್ರೀಲ್ 8; ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಮನೆ ಮುಂದೆ ಸಂತ್ರಸ್ತ ಬಾಲಕಿ ಆತ್ಮಹತ್ಯೆಗೆ ಮುಂದಾದಳು. ಇದು ತೀವ್ರ ವಿವಾದವಾಗಿ, ರಾಷ್ಟ್ ಮಟ್ಟದಲ್ಲಿ ಪ್ರಚಾರ ಪಡೆದುಕೊಂಡಿತು.
2018 ಏಪ್ರೀಲ್ 9; ಬಂಧನಕ್ಕೊಳಗಾಗಿದ್ದ ಸಂತ್ರಸ್ತ ಬಾಲಕಿ ತಂದೆ ಪೊಲೀಸ್ ಠಾಣೆಯಲ್ಲಿಪೊಲೀಸರ ಕಿರುಕುಳದಿಂದ ಮೃತಪಟ್ಟರು.
2018 ಏಪ್ರೀಲ್ 13; ಪ್ರಕರಣ ಅಲಹಾಬಾದ್ ಹೈಕೋರ್ಟ್ಗೆ ವರ್ಗಾವಣೆ, ಸಿಬಿಐ ತನಿಖೆಗೆ ಆದೇಶಿಸಿ ಮುಖ್ಯಮಂತ್ರಿಆಧಿತ್ಯಾನಾಥ, ಆರೋಪಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಬಂಧನ, ಸಿಬಿಐ ಕಡೆಯಿಂದ ಕುಲದೀಪ ಸೇರಿ ಐವರ ಮೇಲೆ ಎಫ್ಐಆರ್
2019 ರಲ್ಲಿ ತಿರುವು
2019, ಜುಲೈ 28; ಸಿಬಿಐಗೆ ತನಿಖೆ ಹೆಗಲೇರಿದ ನಂತರ, ಕಾರಿನಲ್ಲಿ ವಿಚಾರಣೆಗಾಗಿ ತೆರಳುತ್ತಿದ್ದ ಸಂತ್ರಸ್ತೆ, ಹಾಗೂ ಅವಳ ಇಬ್ಬರು ಚಿಕ್ಕಮ್ಮಂದಿರು ಹಾಗೂ ವಕೀಲನ ಮೇಲೆ ರಾಯ್ ಬರೇಲಿ ಹತ್ತಿರ ಲಾರಿ ಹಾಯಿಸಿ ಹತ್ಯೆಗೆ ಯತ್ನ, ಘಟನೆಯಲ್ಲಿ ಸಂತ್ರಸ್ತೆಯ ಒಬ್ಬ ಚಿಕ್ಕಮ್ಮ ಹಾಗೂ ವಕೀಲ ಮರಣ
2019 ಜುಲೈ 30; ಕುಲದೀಪ್ ಸೆಂಗರ್ನನ್ನು ಬಿಜೆಪಿಯಿಂದ ಉಚ್ಚಾಟಿಸಿದ ಉತ್ತರಪ್ರದೇಶ ಬಿಜೆಪಿ ಘಟಕ
2019 ಜುಲೈ 31; ತನ್ನ ಹಾಗೂ ತನ್ನ ಕುಟುಂಬಕ್ಕೆ ಭಾರೀ ಜೀವ ಬೆದರಿಕೆ ಇದೆ ಎಂದು ಸಂತ್ರಸ್ತೆ ಸುಪ್ರೀಂ ಮುಖ್ಯ ನ್ಯಾಯಮೂರ್ತಿಗೆ ಮೊರೆ
2019 ಆಗಷ್ಟ್ 2; ಸಂತ್ರಸ್ತೆಯ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಮುಖ್ಯ ನ್ಯಾಯಮುರ್ತಿಗಳು ಪ್ರಕರಣವನ್ನು ಅಲಹಾಬಾದ್ ಕೋರ್ಟ್ನಿಂದ ದೆಹಲಿಯ ತೀಸ್ ಹಜಾರ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿದರು. ಸುಪ್ರೀಂ ಅಡಿಯಲ್ಲಿ ವಿಚಾರಣೆ ನಡೆಯಬೇಕು ಎಂದು ಆದೇಶಿಸಿದ್ದಲ್ಲದೇ, ದೆಹಲಿಯಲ್ಲಿ ಸಂತ್ರಸ್ತೆಗೆ ಏಮ್ಸ್ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಯಿತು. ಆರೋಪಿಗಳನ್ನು ತಿಹಾರ್ ಜೈಲಿಗೆ ವರ್ಗಾವಣೆ ಮಾಡಲಾಯಿತು
2019 ಡಿಸೆಂಬರ್ 16; ದೆಹಲಿಯ ತೀಸ್ ಹಜಾರ ಜಿಲ್ಲಾ ನ್ಯಾಯಾಲಯದಿಂದ ಕುಲದೀಪ್ ಸಿಂಗ್ ಸೆಂಗಾರ್ ಅಪರಾಧಿ ಎಂದು ತೀರ್ಪು
2018 ಡಿಸೆಂಬರ್ 20; ದೆಹಲಿಯ ತೀಸ್ ಹಜಾರ ಜಿಲ್ಲಾ ನ್ಯಾಯಾಲಯದಿಂದ ಕುಲದೀಪ್ ಸಿಂಗ್ ಸೆಂಗಾರ್ಗೆ ಜೀವಾವಧಿ ಶಿಕ್ಷೆ ಹಾಗೂ ೨೫ ಲಕ್ಷ ರುಪಾಯಿ ದಂಡ