ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನ
ನವದೆಹಲಿ, ಅಕ್ಟೋಬರ್ 08: ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನರಾಗಿದ್ದಾರೆ. ಸಚಿವರು ಕೆಲ ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು.
ಕೇಂದ್ರ ಆಹಾರ ಹಾಗೂ ಪಡಿತರ ಸರಬರಾಜು ಖಾತೆ ಸಚಿವ, ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ರಾಮ್ ವಿಲಾಸ್ ಪಾಸ್ವಾನ್ ಅವರು ಸೆಪ್ಟೆಂಬರ್ 11 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ರಾಮ್ ವಿಲಾಸ್ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು.
2000ರಲ್ಲಿ ರಾಮ್ ವಿಲಾಸ್ ಪಾಸ್ವಾನ್ ಅವರು ಲೋಕ ಜನಶಕ್ತಿ ಪಕ್ಷ ಆರಂಭಿಸಿದರು. 80, 90 ರ ದಶಕದಲ್ಲಿ ದಮನಿತರು ಶೋಷಿತರಿಗೆ ಮೇಲ್ವರ್ಗದ ಮೇಲಿದ್ದ ಸಿಟ್ಟು ಆಕ್ರೋಶಕ್ಕೆ ದನಿಯಾಗಿ ದಲಿತ ನಾಯಕ ಎನಿಸಿಕೊಂಡರು. ಸದ್ಯ ಎನ್ಡಿಎ ಸರ್ಕಾರದಲ್ಲಿ ಸಚಿವರಾಗಿದ್ದಾರೆ.
ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ದೆಹಲಿ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂದು ಅವರ ಪುತ್ರ ಮತ್ತು ಲೋಕ ಜನಶಕ್ತಿ ಪಕ್ಷದ (ಎಲ್ಜೆಪಿ) ಮುಖ್ಯಸ್ಥ ಚಿರಾಗ್ ಪಾಸ್ವಾನ್ ತಿಳಿಸಿದ್ದರು. ಅಗತ್ಯವಿದ್ದಲ್ಲಿ ಮುಂದಿನ ವಾರ ಮತ್ತೊಂದು ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕು ಎಂದು ಹೇಳಲಾಗಿತ್ತು.
ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ (ಎನ್ಡಿಎ) ನ ಸೀಟು ಹಂಚಿಕೆ ಸಂಬಂಧ ಸಭೆ ನಡೆಸಬೇಕಾಗಿದ್ದು ಪಾಸ್ವಾನ್ ಅವರ ಅನಾರೋಗ್ಯದ ಕಾರಣ ಸಭೆ ಮುಂದೂಡಲ್ಪಟ್ಟಿತ್ತು.
ಬಿಹಾರದಲ್ಲಿ 243 ವಿಧಾನಸಭಾ ಸ್ಥಾನಗಳಿದ್ದು, ಅಕ್ಟೋಬರ್ 28, ನವೆಂಬರ್ 3, ಮತ್ತು 7ರಂದು ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಮತ್ತು ಮತ ಎಣಿಕೆ ನವೆಂಬರ್ 10ಕ್ಕೆ ನಡೆಯಲಿದೆ.