"ಅರವಿಂದ್ ಕೇಜ್ರಿವಾಲ್ ಉಪವಾಸ ಬರೀ ಬೂಟಾಟಿಕೆ"
ನವದೆಹಲಿ, ಡಿಸೆಂಬರ್ 14: ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟವು 19ನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರ ಹಾಗೂ ರೈತರ ನಡುವಿನ ಇದುವರೆಗಿನ ಮಾತುಕತೆಗಳು ವಿಫಲವಾಗಿದ್ದು, ಸೋಮವಾರ ರೈತರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಘೋಷಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ರೈತರ ಈ ಪ್ರತಿಭಟನೆ ಬೆಂಬಲಿಸಿ ತಾವೂ ಒಂದು ದಿನ ಉಪವಾಸ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಕೇಜ್ರಿವಾಲ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, "ಇದು ಬೂಟಾಟಿಕೆಯಲ್ಲದೇ ಬೇರೇನೂ ಅಲ್ಲ" ಎಂದು ವ್ಯಂಗ್ಯ ಮಾಡಿದ್ದಾರೆ.
ರೈತರ ಭೇಟಿ: ಅರವಿಂದ್ ಕೇಜ್ರಿವಾಲ್ಗೆ ಗೃಹ ಬಂಧನ
ಭಾನುವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಿಎಂ ಅರವಿಂದ್ ಕೇಜ್ರಿವಾಲ್, ರೈತರು ಬೆಳೆಯುವ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಪಡಿಸುವ ಕಾಯ್ದೆ ತರುವಂತೆ ಕೇಂದ್ರಕ್ಕೆ ಕೇಳಿದ್ದರು. ಜೊತೆಗೆ ರೈತರು ಹಮ್ಮಿಕೊಂಡಿರುವ ಪ್ರತಿಭಟನೆಗೆ ಬೆಂಬಲವಾಗಿ ಒಂದು ದಿನ ಉಪವಾಸ ಇರುವುದಾಗಿ ತಿಳಿಸಿದ್ದರು. ಇದಕ್ಕೆ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, "ಇದು ಬರೀ ಬೂಟಾಟಿಕೆ. ಇದೇ ನವೆಂಬರ್ ನಲ್ಲಿ ನಿಮ್ಮ ಸರ್ಕಾರವೇ ಕೃಷಿ ಕಾನೂನೊಂದನ್ನು ಸೂಚಿಸಿತ್ತು" ಎಂದು ತಿರುಗೇಟು ನೀಡಿದ್ದಾರೆ.
"ಅರವಿಂದ್ ಕೇಜ್ರಿವಾಲ್, ಇದು ನಿಮ್ಮ ಬೂಟಾಟಿಕೆ. ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ ನೀವು ಎಪಿಎಂಸಿ ಕಾಯ್ದೆ ತಿದ್ದುಪಡಿ ಕುರಿತು ಪ್ರಮಾಣ ನೀಡಿದ್ದಿರಿ. ನವೆಂಬರ್ 2020ರಲ್ಲಿ ಒಂದು ಕೃಷಿ ಕಾನೂನನ್ನು ಸೂಚಿಸಿದ್ದಿರಿ. ಈಗ ನೀವು ಉಪವಾಸ ಮಾಡುತ್ತಿದ್ದೀರಿ" ಎಂದು ವ್ಯಂಗ್ಯ ಮಾಡಿದ್ದಾರೆ.
ಕೇಜ್ರಿವಾಲ್ ಅವರ ಉಪವಾಸ ಸತ್ಯಾಗ್ರಹದ ಘೋಷಣೆ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕೂಡ ಟೀಕೆ ಮಾಡಿದ್ದರು. ಇದನ್ನು ನಾಟಕ ಎಂದು ಕರೆದಿದ್ದರು. "ನಿಮಗೇನಾದರೂ ನಾಚಿಕೆಯಿದೆಯೇ? ನಮ್ಮ ರೈತರೆಲ್ಲಾ ಚಳಿಯಲ್ಲಿ ನಡುಗುತ್ತಾ ನಿಮ್ಮದೇ ನಗರದ ಹೊರಗೆ ರಸ್ತೆಗಳಲ್ಲಿ ಕುಳಿತಿದ್ದಾರೆ. ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಆದರೆ ಇಂಥ ಪರಿಸ್ಥಿತಿಯಲ್ಲಿ ನೀವು ಹೇಗೆ ನಿಮ್ಮ ರಾಜಕೀಯ ಹಿತಾಸಕ್ತಿಯನ್ನು ಇಲ್ಲಿ ಪ್ರಚಾರ ಮಾಡಿಕೊಳ್ಳಬಹುದು ಎಂದು ಯೋಚಿಸುತ್ತಿದ್ದೀರಿ" ಎಂದಿದ್ದರು.
"ನಿಮ್ಮ ನಗರದ ಹೊರಗೆ ಹದಿನೇಳು ದಿನಗಳಿಂದ ಕುಳಿತು ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಒಳ್ಳೆಯ ರೀತಿ ಬೆಂಬಲ ನೀಡುವ ಬದಲು ನೀವು ಹಾಗೂ ನಿಮ್ಮ ಪಕ್ಷ ರಾಜಕೀಯ ಮಾಡುವುದರಲ್ಲಿ ತೊಡಗಿದೆ" ಎಂದು ಆರೋಪಿಸಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಕೇಜ್ರಿವಾಲ್, "ಪ್ರತಿಭಟನೆಯ ಆರಂಭದಿಂದಲೂ ನಾನು ರೈತರ ಪರ ನಿಂತಿದ್ದೇನೆ. ಸ್ಟೇಡಿಯಂಗಳನ್ನು ತಾತ್ಕಾಲಿಕ ಜೈಲುಗಳನ್ನಾಗಿ ಪರಿವರ್ತಿಸುವುದನ್ನು ತಡೆದಿದ್ದೇನೆ. ಕೇಂದ್ರ ಸರ್ಕಾರದೊಂದಿಗೆ ಹೋರಾಡುತ್ತಿದ್ದೇನೆ. ನಿಮ್ಮ ರೀತಿ ಕೇಂದ್ರದೊಂದಿಗೆ ಕೈ ಜೋಡಿಸಿ, ನಿಮ್ಮ ಮಗನ ಇಡಿ ಪ್ರಕರಣವನ್ನು ಮುಚ್ಚಿಹಾಕಲು ರೈತ ಚಳವಳಿಯನ್ನೇ ಮಾರಾಟ ಮಾಡಿಲ್ಲ" ಎಂದು ತಿರುಗೇಟು ನೀಡಿದ್ದರು.