5 ವರ್ಷದಲ್ಲಿ ರಾಜ್ಯಕ್ಕೆ 2.42 ಲಕ್ಷ ಕೋಟಿ ಅನುದಾನ: ಸದಾನಂದಗೌಡ
ನವದೆಹಲಿ, ಜೂನ್ 19: ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯದ ಅಭಿವೃದ್ಧಿಗೆ ಒಟ್ಟು 2.42 ಲಕ್ಷ ಕೋಟಿ ಅನುದಾನ ದೊರಕಿರುವುದಾಗಿ ಕೇಂದ್ರ ಸಚಿವ ಸದಾನಂದಗೌಡ ತಿಳಿಸಿದರು.
ನವದೆಹಲಿಯಲ್ಲಿರುವ ತಮ್ಮ ನಿವಾಸದಲ್ಲಿ ರಾಜ್ಯದ ಎಲ್ಲ ಸಂಸದರೊಂದಿಗೆ ಸಭೆ ನಡೆಸಿದ ಅವರು, ಇಷ್ಟು ಮೊತ್ತದ ಹಣ ರಾಜ್ಯಕ್ಕೆ ದೊರಕಿರುವುದು ಇತಿಹಾದಲ್ಲಿಯೇ ಮೊದಲು ಎಂದರು.
ರಾಹುಲ್ ಭೇಟಿ ಮಾಡಿ ಸೋಲಿನ ಕಾರಣ ಕೊಟ್ಟ ಸಿದ್ದರಾಮಯ್ಯ!
ಸಾಧಾರಣವಾಗಿ ಎಲ್ಲರ ರಾಜ್ಯಗಳ ಸಂಸದರು ಕೇಂದ್ರದಲ್ಲಿ ತಮ್ಮ ತಮ್ಮ ಹಿತಾಸಕ್ತಿ ಬಂದಾಗ ಪಕ್ಷಭೇದ ಮರೆತು ರಾಜ್ಯದ ಹಿತಾಸಕ್ತಿ ಕಾಪಾಡುವ ಕೆಲಸ ಮಾಡುತ್ತಾರೆ. ಕ್ಷೇತ್ರದ ವಿಚಾರಕ್ಕೆ ಬಂದಾಗ ಆ ಕ್ಷೇತ್ರಕ್ಕೆ ಸಂಬಂಧಿಸಿದ ಹಿರಿಯರು ಸಚಿವರನ್ನು ಕಂಡು ಪರಿಹಾರ ಮಾರ್ಗೋಪಾಯಗಳನ್ನು ಕಂಡುಕೊಳ್ಳುತ್ತಾರೆ ಎಂದರು.
ರಾಜ್ಯದ ಬೇರೆ ಬೇರೆ ವಿಚಾರಗಳ ಬಗ್ಗೆ ಲೋಕಸಭೆಯಲ್ಲಿ ಮಾಡುವ ಪ್ರಸ್ತಾಪ, ಮಂತ್ರಿಯೊಡನೆ ಮಾಡುವ ಮಾತುಕತೆಗಳು ಸುಸೂತ್ರವಾಗಿ ನಡೆದರೆ ರಾಜ್ಯಕ್ಕೆ ಬರುವ ಎಲ್ಲ ಅನುದಾನಗಳು ಏಕರೂಪವಾಗಿ ಕೇಂದ್ರದಿಂದ ಬರಲು ಅನುಕೂಲವಾಗುತ್ತದೆ. ಈ ಹಿಂದೆಯೂ ನಾವು ಒಟ್ಟಿಗೆ ಸೇರುವ ಪ್ರಯತ್ನ ಮಾಡಿದ್ದೇವೆ. ಕಳೆದ ಬಾರಿ ನೀರಿನ ಸಮಸ್ಯೆ ಬಂದಾಗ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಇಲ್ಲೇ ಎಲ್ಲರೂ ಸೇರಿದ್ದೆವು. 35 ಜನ ಸಭೆಯಲ್ಲಿ ಉಪಸ್ಥಿತರಿದ್ದು ಮಾತುಕತೆ ನಡೆಸಿದ್ದವು. ಕೃಷ್ಣಬೈರೇಗೌಡರು ಬಂದಾಗಲೂ ನಾವೆಲ್ಲ ಸದಸ್ಯರು ಸೇರಿ ಅನುದಾನದ ಬಗ್ಗೆ ಬೇರೆ ಬೇರೆ ಮಂತ್ರಿಗಳೊಂದಿಗೆ ಸಮಾಲೋಚನೆ ಮಾಡಿದ್ದೇವೆ,. ಕರ್ನಾಟಕದ ಅಭಿವೃದ್ಧಿಯ ಬಗ್ಗೆ ರಾಜಕೀಯ ಮೀರಿ ಕೆಲಸ ಮಾಡಿದ್ದೇವೆ. ಯಶಸ್ಸೂ ಕಂಡಿದ್ದೇವೆ ಎಂದು ಹೇಳಿದರು.
ಎಲ್ಲರೂ ಒಟ್ಟಾಗಿ ನಮ್ಮ ಬೇಡಿಕೆ ಮುಂದಿಟ್ಟು ನಮ್ಮ ಕೆಲಸ ಮಾಡಿದ್ದೇವೆ. ಈಗ ಕರ್ನಾಟಕ ಇನ್ನಷ್ಟು ಅಭಿವೃದ್ಧಿ ಕಾಣುತ್ತಿದೆ. ಮಧ್ಯದಲ್ಲಿದೆ. ಕೇರಳದ ಕಾಸರಗೋಡಿನ ವಿಚಾರ, ಮಹಾರಾಷ್ಟ್ರದೊಂದಿಗಿನ ನೀರಾವರಿ, ಗಡಿ ಮತ್ತು ಭಾಷೆ ಸಮಸ್ಯೆ, ಗೋವಾದೊಂದಿಗೆ ಕಳಸಾಬಂಡೂರಿ, ಆಂಧ್ರಪ್ರದೇಶದೊಂದಿಗೆ ಕೃಷ್ಣ, ತಮಿಳುನಾಡಿನೊಂದಿಗೆ ಕಾವೇರಿ- ಹೀಗೆ ಪ್ರತಿನಿತ್ಯ ಹೋರಾಟ ನಡೆಯುತ್ತಿದೆ. ಈ ರಾಜ್ಯಗಳು ಯಾವ ಸಂದರ್ಭದಲ್ಲಿಯೂ ತಮ್ಮ ರಾಜ್ಯದಲ್ಲಿ ವಿಚಾರದಲ್ಲಿ ಒಂದಾಗುತ್ತಾರೆ ಎಂದರು.
ಹಿಂದಿನ ದಿನಗಳಲ್ಲಿ ಎಷ್ಟೋ ಸಂದರ್ಭಗಳಲ್ಲಿ ನಮ್ಮ ಶಕ್ತಿಯನ್ನು ತೋರಿಸಿಕೊಳ್ಳಬೇಕಾದ ಸಂದರ್ಭದಲ್ಲಿ ರಾಜಕೀಯವಾದ ವ್ಯತ್ಯಯಗಳು ನಮ್ಮನ್ನು ಒಟ್ಟಾಗಿರಲು ಬಿಡುತ್ತಿರಲಿಲ್ಲ. ಆದರೆ, ಕಳೆದ ಒಂದು ವರ್ಷದಿಂದ ನಡೆದ ಬೇರೆ ಬೇರೆ ವಿದ್ಯಮಾನಗಳನ್ನು ನೋಡಿದಾಗ ರಾಜ್ಯದ ಹಿತಾಸಕ್ತಿಗೆ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ನಮ್ಮ ಸಾಮೂಹಿಕ ಪ್ರಯತ್ನಗಳು ನಡೆಯುತ್ತಿದೆ. ಕಾವೇರಿ, ಕೃಷ್ಣಾ, ಕಳಸಾ ಬಂಡೂರಿ, ಮೇಕೆದಾಟು ವಿಚಾರಗಳಲ್ಲಿ ಸಾಕಷ್ಟು ಸಮಸ್ಯೆ ಎದುರಿಸಿದ್ದೇವೆ. ಅವುಗಳ ವಿಚಾರದಲ್ಲಿ ಒಗ್ಗಟ್ಟಾಗಿದ್ದೇವೆ ಎಂದು ಹೇಳಿದರು.
ಮೈತ್ರಿಯಿಂದ ಕಾಂಗ್ರೆಸ್ಗೆ ಲಾಭವಿಲ್ಲ, ಸಿದ್ದರಾಮಯ್ಯ ವರದಿ 4 ಅಂಶಗಳು
ರಾಜ್ಯದ ಸಮಸ್ಯೆಗಳು ಬಂದಾಗ ಹೋರಾಟ ಮಾಡುವುದು, ಲೋಕಸಭೆಯಲ್ಲಿ ಒಟ್ಟಾಗಿ ಧ್ವನಿ ಎತ್ತುವುದು, ಅಭಿವೃದ್ಧಿ ಕಾರ್ಯಗಳು ಬಂದಾಗ ಒಂದಾಗಿ ಕೆಲಸ ಮಾಡುವುದನ್ನು ನಾವು ತೋರಿಸಬೇಕಿದೆ. ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲು ಚರ್ಚೆಗಳನ್ನು ನಡೆಸುವುದು ಅಗತ್ಯ. ರಾಜ್ಯದ ಹತ್ತಾರು ಯೋಜನೆಗಳು ಕೇಂದ್ರದಲ್ಲಿರುತ್ತವೆ. ಅವುಗಳನ್ನು ಹೇಗೆ ಯಾವ ಸಂದರ್ಭದಲ್ಲಿ ಅನುಷ್ಠಾನಕ್ಕೆ ತರಬೇಕು ಎಂಬುದನ್ನು ನಿರ್ಧರಿಸಬೇಕು ಸಲಹೆ ಸೂಚನೆಗಳನ್ನು ನೀಡಬೇಕು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಸಭೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್, ಸಚಿವ ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿ ಸೇರಿದಂತೆ ಇತರೆ ಸಂಸದರು ಉಪಸ್ಥಿತರಿದ್ದರು.