ವಂಶವಾದ ಆರೋಪ ತಪ್ಪಿಸಲು ರಾಜೀನಾಮೆಗೆ ಮುಂದಾದ ಕೇಂದ್ರ ಸಚಿವ
ಅಧಿಕಾರ ಸಿಕ್ಕಿತೆಂದರೆ ತನಗೊಂದು ತನ್ನ ಮಕ್ಕಳಿಗೊಂದು ಇಡೀ ಕುಟುಂಬಕ್ಕೂ ಇರಲಿ ಎನ್ನುವ ರಾಜಕಾರಣಿಗಳ ಮಧ್ಯೆ ಕೇಂದ್ರ ಸಚಿವ ಬೀರೇಂದರ್ ಸಿಂಗ್ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.
ಪುತ್ರ ಬ್ರಿಜೇಂದರ್ ಸಿಂಗ್ ಗೆ ಹರಿಯಾಣದ ಹಿಸಾರ್ನಿಂದ ಬಿಜೆಪಿ ಟಿಕೆಟ್ ಅಂತಿಮಗೊಳ್ಳುತ್ತಿದ್ದಂತೆ ಕೇಂದ್ರ ಉಕ್ಕು ಸಚಿವ ಸ್ಥಾನ ಹಾಗೂ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಬೀರೇಂದರ್ ನಿರ್ಧರಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
2022ರವರೆಗೂ ರಾಜ್ಯಸಭಾ ಸದಸ್ಯತ್ವ ಹೊಂದಿರುವ ಬೀರೇಂದರ್ ತಮ್ಮ ರಾಜೀನಾಮೆ ಅಂಗೀಕರಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗೆ ಪತ್ರ ಬರೆದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ವಂಶವಾದ ವಿರೋಧಿಸಿ ಬಿಜೆಪಿ ದೊಡ್ಡಬ ಪ್ರಚಾರ ಮಾಡುತ್ತಿದೆ. ಚುನಾವಣಾ ಪ್ರಮುಖ ವಿಷಯವಾಗಿ ಇದು ಮಾರ್ಪಟ್ಟಿದೆ.
ಈ ಹಂತದಲ್ಲಿ ಬಿಜೆಪಿಗೆ ಮುಜುಗರವಾಗಬಾರದು ಎನ್ನುವ ಕಾರಣಕ್ಕೆ ಹಾಲಿ ಹುದ್ದೆಗಳನ್ನು ತ್ಯಜಿಸಲು ನಿರ್ಧರಿಸಿರುವುದಾಗಿ ಬೀರೇಂದರ್ ಸಿಂಗ್ ತಿಳಿಸಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಂಶವಾದದ ಬಗ್ಗೆ ಕಿಡಿಕಾರುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷಗಳ ಕುಟುಂಬ ರಾಜಕೀಯವನ್ನು ಲೇವಡಿ ಮಾಡುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್, ಸಮಾಜವಾದಿ, ಟಿಡಿಪಿ, ಸೇರಿ ಇತರೆ ಪಕ್ಷಗಳು ಒಂದೇ ಕುಟುಂಬದ ಆಸ್ತಿಗಳಾಂತಾಗಿವೆ ಎಂದು ಪ್ರತಿ ಸಮಾವೇಶದಲ್ಲೂ ಮೋದಿ ಆರೋಪಿಸುತ್ತಿದ್ದಾರೆ.