ಬಜೆಟ್ ಅಧಿವೇಶನ; ವಿರೋಧ ಪಕ್ಷಗಳಿಗೆ ಕೇಂದ್ರ ಸಚಿವರ ಮನವಿ
ನವದೆಹಲಿ, ಜನವರಿ 29: ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ ಆರಂಭಗೊಂಡಿದ್ದು, ಉಭಯ ಸದನಗಳನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ ಮಾಡಿದ್ದಾರೆ. ಆದರೆ ರಾಷ್ಟ್ರಪತಿಗಳ ಭಾಷಣ ಬಹಿಷ್ಕರಿಸಿ ಹಲವು ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿವೆ.
ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಎಂದು ರೈತರ ಪರವಾಗಿ ಲೋಕಸಭೆಯಲ್ಲಿ ಒತ್ತಾಯಿಸಿದ್ದು, ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಲಾಗಿದೆ. ಕಾಂಗ್ರೆಸ್, ಎನ್ಸಿಪಿ, ಶಿವಸೇನಾ, ಡಿಎಂಕೆ, ಟಿಎಂಸಿ, ಸಿಪಿಐ, ಸಿಪಿಎಂ, ಆರ್ಜೆಡಿ ಪಕ್ಷಗಳು ಸೇರಿದಂತೆ ಸುಮಾರು 20 ವಿರೋಧ ಪಕ್ಷಗಳು ರಾಷ್ಟ್ರಪತಿಗಳ ಭಾಷಣವನ್ನು ಬಹಿಷ್ಕರಿಸಿವೆ. ಶಿವಸೇನೆ ಸದಸ್ಯರೂ ಕುಳಿತಲ್ಲಿಂದಲೇ ಘೋಷಣೆ ಕೂಗಿದ್ದಾರೆ.
ಇಂದಿನಿಂದ ಬಜೆಟ್ ಅಧಿವೇಶನ: ಹೇಗಿರಲಿದೆ ಈ ಬಾರಿಯ ಕಲಾಪ?
ಈ ಸಂಗತಿ ನಡೆಯುತ್ತಿದ್ದಂತೆ ಕೇಂದ್ರ ಸಂಸತ್ತಿನ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ವಿರೋಧ ಪಕ್ಷಗಳಿಗೆ ಮನವಿ ಮಾಡಿದ್ದಾರೆ. ರಾಷ್ಟ್ರಪತಿಗಳ ಕಚೇರಿಗೆ ಗೌರವ ನೀಡಿ ಎಂದು ಕೇಳಿಕೊಂಡಿದ್ದಾರೆ. ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸುವ ಬದಲು ರಾಷ್ಟ್ರಪತಿಗಳ ಭಾಷಣದ ಬಗ್ಗೆ ಅಥವಾ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ಮಾಡಿ, ಸಂಸತ್ತಿನ ಮುಂದೆ ಬೇಡಿಕೆಗಳನ್ನು ಸಲ್ಲಿಸಿ ಎಂದಿದ್ದಾರೆ.
ಸಂಸತ್ತಿನಲ್ಲಿ ಯಾವುದೇ ವಿಷಯಗಳ ಕುರಿತು ವಿರೋಧ ಪಕ್ಷಗಳು ಚರ್ಚಿಸಬಹುದು. ಸಂಸತ್ತಿನ ಹೊರಗೆ ಪ್ರತಿಭಟನೆ ಮಾಡಿ. ಆದರೆ ಸಂಸತ್ತಿಗೆ ಬಂದು ಅಧಿವೇಶನದಲ್ಲಿ ಪಾಲ್ಗೊಳ್ಳಿ ಎಂದು ಹೇಳಿದರು. ಇದೇ ಸಂದರ್ಭ ಶಿರೋಮಣಿ ಅಖಾಲಿ ದಳದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್, ವಿರೋಧ ಪಕ್ಷಗಳ ಮಾತು ಕೇಳಿ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಗೆ ಆಗ್ರಹಿಸಿದ ಸಂಗತಿಯೂ ನಡೆಯಿತು.
ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯ ಮೂರನೇ ಬಜೆಟ್ ಫೆಬ್ರವರಿ 1ರಂದು ಮಂಡನೆಯಾಗಲಿದ್ದು, ಇಂದಿನಿಂದ ಬಜೆಟ್ ಅಧಿವೇಶನ ಆರಂಭಗೊಳ್ಳಲಿದೆ. ಬಜೆಟ್ ಅಧಿವೇಶನದ ಮೊದಲ ಭಾಗ ಜನವರಿ 29 ರಿಂದ ಫೆಬ್ರವರಿ 15 ರವರೆಗೆ ಮತ್ತು ಎರಡನೇ ಭಾಗವು ಮಾರ್ಚ್ 8 ರಿಂದ ಏಪ್ರಿಲ್ 8 ರವರೆಗೆ ಇರುತ್ತದೆ.