ಕೇಂದ್ರ ಸಚಿವ ಸಂಪುಟ ವಿಸ್ತರಣೆ: ಪ್ರಧಾನಿ ಮೋದಿಗೆ ಎದುರಾಯ್ತು ಮತ್ತೊಂದು ಸವಾಲು!
ದೆಹಲಿ, ಜು. 07: ಇಂದು ಸಂಜೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟಕ್ಕೆ ನೂತನ ಸದಸ್ಯರು ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ. ಸಂಜೆ 05.30ಕ್ಕೆ ನೂತನ ಸಚಿವರ ಪ್ರಮಾಣವಚ ಕಾರ್ಯಕ್ರಮ ನಡೆಯಲಿದೆ ಎಂಬ ಖಚಿತ ಮಾಹಿತಿ ಸಿಕ್ಕಿದೆ. ಆದರೂ ಕೂಡ ಕೇಂದ್ರ ಸರ್ಕಾರ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಬಗ್ಗೆ ಭಾರಿ ಗೌಪ್ಯತೆ ಕಾಯ್ದುಕೊಂಡಿದೆ. ಪ್ರಧಾನಿ ಮೋದಿ ಸಂಪುಟ ಸೇರಲಿರುವ ಸಂಸದರಿಗೆ ದೆಹಲಿಗೆ ಬರುವಂತೆ ನಿನ್ನೆ(ಜು.06)ಯೇ ಸೂಚಿಸಲಾಗಿದ್ದು ಎಲ್ಲರೂ ದೆಹಲಿಗೆ ಬಂದಿದ್ದಾರೆ.
ಕರ್ನಾಟಕದಿಂದಲೂ ಬಿಜೆಪಿ ಸಂಸದರು ದೆಹಲಿಗೆ ಆಗಮಿಸಿದ್ದು ಮೂವರು ಸಂಸದರಿಗೆ ಮಂತ್ರಿಮಂಡಲ ಸೇರುವ ಅವಕಾಶ ಸಿಗಲಿದೆ ಎಂಬ ಮಾಹಿತಿಯಿದೆ. ಆದರೆ ದೆಹಲಿಗೆ ಬಂದಿರುವ ಸಂಸದರೂ ಕೂಡ ಗೌಪ್ಯತೆ ಕಾಪಾಡಿಕೊಂಡಿದ್ದು ತಮಗೆ ಬಂದಿರುವ ಕರೆಯ ಬಗ್ಗೆ ಬಾಯಿಬಿಡುತ್ತಿಲ್ಲ. ಆದರೂ 'ಒನ್ಇಂಡಿಯಾ ಕನ್ನಡ'ಕ್ಕೆ ಸಿಕ್ಕಿರುವ ಖಚಿತ ಮಾಹಿತಿಯ ಪ್ರಕಾರ ಮೂವರು ಸಂಸದರಿಗೆ ಕೇಂದ್ರ ಮಂತ್ರಿಸ್ಥಾನ ಸಿಗುವ ಸಾಧ್ಯತೆಯಿದೆ. ಈಗಾಗಲೇ ಅವರೆಲ್ಲರೂ ದೆಹಲಿಗೂ ಆಗಮಿಸಿದ್ದಾರೆ. ಇಂದು ಮಧ್ಯಾಹ್ನದ ಹೊತ್ತಿಗೆ ಪ್ರಮಾಣ ವಚನ ಸ್ವೀಕರಿಸಲಿರುವವರ ಪಟ್ಟಿ ಅಧಿಕೃತವಾಗಿ ರಾಷ್ಟ್ರಪತಿ ಭವನಕ್ಕೆ ರವಾನೆಯಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಸಂಪುಟ ಪುನಾರಚನೆ: ಕರ್ನಾಟಕಕ್ಕೆ ಸ್ವಲ್ಪ ಸಿಹಿ-ಸ್ವಲ್ಪ ಕಹಿ ಸುದ್ದಿ!
ಈ ನಡುವೆ ಎದುರಾಗಿರುವ ಮತ್ತೊಂದು ಸವಾಲಿಗೂ ಸಂಪುಟ ವಿಸ್ತರಣೆ ಮೂಲಕ ಪರಿಹಾರ ಕಂಡುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ಆ ಸವಾಲು ಏನು? ಅದಕ್ಕೆ ಮೋದಿ ಕಂಡುಕೊಂಡ ಪರಿಹಾರ ಏನು? ಮುಂದಿದೆ ಮಾಹಿತಿ!
ಮೋದಿ ಸಂಪುಟ ಸೇರಲಿರುವ ಕರ್ನಾಟಕದ ಸಂಸದರು
ರಾಜ್ಯದ ಇಬ್ಬರು ಸಂಸದರಿಗೆ ಸಚಿವ ಸ್ಥಾನ ಪಕ್ಕಾ ಆಗಿದೆ. ಒಂದೊಮ್ಮೆ ಮೂವರಿಗೆ ಅವಕಾಶ ಸಿಕ್ಕಲ್ಲಿ ಈಗಾಗಲೇ ಕ್ಯಾಬಿನೆಟ್ ಸರ್ಜೆಯ ಸಚಿವರಾಗಿರುವ ಕರ್ನಾಟಕ ಮೂಲದ ಒಬ್ಬರನ್ನು ಪ್ರಧಾನಿ ಮೋದಿ ಅವರು ಸಂಪುಟದಿಂದ ಕೈಬಿಡುತ್ತಾರೆ ಎನ್ನಲಾಗಿದೆ. ಹೀಗಾಗಿ ಚಿತ್ರದುರ್ಗದ ಸಂಸದ ಎ. ನಾರಾಯಣಸ್ವಾಮಿ, ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಸಂಪುಟ ಸೇರಲಿದ್ದಾರೆ ಎಂಬ ಮಾಹಿತಿಯಿದೆ. ಸಂಪುಟದಿಂದ ರಾಜ್ಯವನ್ನು ಪ್ರತಿನಿಧಿಸುವ ಒಬ್ಬರನ್ನು ಕೈಬಿಟ್ಟಿಲ್ಲ ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಅವರೂ ಕೂಡ ಪ್ರಧಾನಿ ಮೋದಿ ಸಂಪುಟ ಸೇರಲಿದ್ದಾರೆ.
ಜಾತಿ ಆಧಾರದಲ್ಲಿ ಸಂಪುಟದಲ್ಲಿ ಅವಕಾಶ
2024ರಲ್ಲಿ ನಡೆಯುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ ಮೂವರಿಗೆ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆಯಿದೆ. ಕರ್ನಾಟಕದಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಒಕ್ಕಲಿಗ ಹಾಗೂ ಪರಿಶಿಷ್ಟ ಸಮುದಾಯಕ್ಕೆ ಕೇಂದ್ರ ಸಚಿವ ಸಂಪುಟದಲ್ಲಿ ಅವಕಾಶ ಮಾಡಿಕೊಡಲು ಬಿಜೆಪಿ ಹೈಕಮಾಂಡ್ ತೀರ್ಮಾನ ಮಾಡಿದೆ. ಆ ಮೂಲಕ ಎಲ್ಲ ಸಮುದಾಯಗಳಿಗೆ ಅವಕಾಶ ಮಾಡಿಕೊಟ್ಟಿದ್ದೇವೆ ಎಂಬ ಸಂದೇಶ ರವಾನೆ ಮಾಡಲು ಜೆ.ಪಿ. ನಡ್ಡಾ ನೇತೃತ್ವದ ಬಿಜೆಪಿ ಹೈಕಮಾಂಡ್ ತೀರ್ಮಾನ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಹೊಸ ಸವಾಲಿಗೆ ಮೋದಿ ಸಂಪುಟ ವಿಸ್ತರಣೆ ಉತ್ತರ
ಒಂದೆಡೆ ಕೊರೊನಾವೈರಸ್ ಎರಡನೇ ಅಲೆ ತಂದಿಟ್ಟಿರುವ ಸಂಕಷ್ಟಗಳಿಂದ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಕುಸಿದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಮತ್ತೊಂದೆಡೆ ಹಿಂದುತ್ವದ ಆಧಾರದ ಮೇಲೆಯೆ ರೂಪುಗೊಂಡಿರುವ ಪ್ರಬಲ 'ಶಿವಸೇನೆ' ಕೂಡ ಎನ್ಡಿಎ ಮೈತ್ರಿಕೂಟವನ್ನು ತೊರೆದಿದೆ. ಜೊತೆಗೆ ಶಿರೊಮಣಿ ಅಕಾಲಿ ದಳ ಕೂಡ ಎನ್ಡಿಎದಿಂದ ಹೊರಕ್ಕೆ ನಡೆದಿದೆ.
ಈ ಎಲ್ಲವೂ ಮುಂದಿನ ಚುನಾವಣೆಯಲ್ಲಿ ಬಹಳಷ್ಟು ಪರಿಣಾಮ ಬೀರುವುದನ್ನು ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ಹೈಕಮಾಂಡ್ ಅರಿತಿದೆ. ಹೀಗಾಗಿ ಮೋದಿ ಸಂಪುಟದಲ್ಲಿ ಮಿತ್ರ ಪಕ್ಷಗಳಿಗೆ ಹೆಚ್ಚಿನ ಅವಕಾಶ ಕೊಡಲು ಬಿಜೆಪಿ ತೀರ್ಮಾನಿಸಿದೆ. ಎನ್ಡಿಎ ಮೈತ್ರಿಕೂಟ ತೊರೆಯುತ್ತಿರುವ ಮಿತ್ರರನ್ನು ಹಿಡಿದಿಟ್ಟುಕೊಳ್ಳಲು 'ಮಂತ್ರಿಭಾಗ್ಯ'ದ ಮೂಲಕ ಪರಿಹಾರಕಂಡುಕೊಳ್ಳಲು ಪ್ರಧಾನಿ ಮುಂದಾಗಿದ್ದಾರೆ. ಹೀಗಾಗಿ ಪೂರ್ಣ ಪ್ರಮಾಣದ ಸಂಪುಟ ರಚನೆ ಆದರೂ ಆಶ್ಚರ್ಯಪಡಬೇಕಾಗಿಲ್ಲ ಎಂಬ ವಿಶ್ಲೇಷಣೆಗಳು ನಡೆದಿವೆ.
ಪೂರ್ಣ ಪ್ರಮಾಣದ ಸಚಿವ ಸಂಪುಟ?
ಸದ್ಯ ಕೇಂದ್ರ ಸಚಿವ ಸಂಪುಟದಲ್ಲಿ ಪ್ರಧಾನಿ ಮೋದಿ ಸೇರಿದಂತೆ 53 ಸದಸ್ಯರಿದ್ದರು. ಆದರೆ ಕ್ಯಾಬಿನೆಟ್ ದರ್ಜೆ ಸಚಿವರಾಗಿದ್ದ ಥಾವರಚಂದ್ ಗೆಹ್ಲೋಟ್ ಅವರನ್ನು ಕರ್ನಾಟಕದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಹೀಗಾಗಿ ಸಂಪುಟ ಸದಸ್ಯರ ಸಂಖ್ಯೆ 52ಕ್ಕೆ ಇಳಿದಿದೆ. ಸಂಸದರ ಸಂಖ್ಯೆಗೆ ಅನುಗುಣವಾಗಿ ಒಟ್ಟು 81 ಸಚಿವರ ನೇಮಕಕ್ಕೆ ಅವಕಾಶವಿದೆ.
'ಕನಿಷ್ಠ ಸರ್ಕಾರದೊಂದಿಗೆ ಗರಿಷ್ಠ ಆಡಳಿತ' ಧ್ಯೇಯದೊಂದಿಗೆ ಅಧಿಕಾರ ಆರಂಭಿಸಿದ್ದ ಪ್ರಧಾನಿ ಮೋದಿ ಅವರು ಈ ಸಲ ಪೂರ್ಣ ಪ್ರಮಾಣದ ಸಂಪುಟ ರಚನೆ ಮಾಡದಿದ್ದರೂ, ಇನ್ನೂ 18-20 ಸದಸ್ಯರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿಯಿದೆ. ಹೀಗಾಗಿ ಇಂದು ನಡೆಯುವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಕನಿಷ್ಠ 70 ಸಚಿವರು ಇರಲಿದ್ದಾರೆ. ಆ ಮೂಲಕ ಕೊರೊನಾ ವೈರಸ್ ಸಂಕಷ್ಟದಿಂದ ಎದುರಾಗಿರುವ ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸಲು ಪ್ರಧಾನಿ ಮೋದಿ ತೀರ್ಮಾನ ಮಾಡಿದ್ದಾರೆ. ಮತ್ತೊಂದೆಡೆ ಮಿತ್ರ ಪಕ್ಷಗಳನ್ನು ಸಂಬಾಳಿಸಲು ಮೊದಲ ಬಾರಿನ ಪ್ರಯತ್ನ ಆರಂಭಿಸಿದ್ದಾರೆ ಎನ್ನಲಾಗಿದೆ.