"ದೇಶದಲ್ಲಿ ಅತ್ಯಾಚಾರ ಪ್ರಕರಣ ಹೆಚ್ಚಾಗಲು ನಿರುದ್ಯೋಗವೇ ಕಾರಣ"
ನವದೆಹಲಿ, ಸಪ್ಟೆಂಬರ್.30: ಭಾರತದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುವುದಕ್ಕೆ ನಿರುದ್ಯೋಗ ಸಮಸ್ಯೆಯೇ ಮುಖ್ಯ ಕಾರಣ ಎನ್ನುವ ಮೂಲಕ ಸುಪ್ರೀಂಕೋರ್ಟ್ ನಿವೃತ್ತ ನ್ಯಾ. ಮಾರ್ಕಂಡೇಯ ಕಟ್ಜು ವಿವಾದದ ಕಿಡಿ ಹೊತ್ತಿಸಿದ್ದಾರೆ.
ಉತ್ತರ ಪ್ರದೇಶದ ಹತ್ರಾಸ್ ನಲ್ಲಿ 19 ವರ್ಷದ ಯುವತಿ ಮೇಲಿನ ಅತ್ಯಾಚಾರ ಪ್ರಕರಣದ ಬಗ್ಗೆ ಉಲ್ಲೇಖಿಸಿದ ನಿವೃತ್ತ ನ್ಯಾ.ಮಾರ್ಕಂಡೇಯ ಕಟ್ಜು, ಘಟನೆ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ. ಕ್ರೌರ್ಯ ತೋರಿದ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಟ್ವೀಟ್ ಮಾಡಿದ್ದು, ಅತ್ಯಾಚಾರ ಪ್ರಕರಣ ಹೆಚ್ಚಾಗಲು ಕಾರಣವನ್ನು ವಿವರಿಸಿದ್ದಾರೆ.
ಹತ್ರಾಸ್ ಅತ್ಯಾಚಾರ ಪ್ರಕರಣದ ತನಿಖೆಗೆ ವಿಶೇಷ ತಂಡ ರಚನೆ
'ಪುರುಷರಲ್ಲಿ ಲೈಂಗಿಕತೆಯು ಹೇಗೆ ಒಂದು ನೈಸರ್ಗಿಕ ಪ್ರಚೋದನೆ' ಎಂದು ವಿವರಿಸಿದ ಅವರು, ಪುರುಷರು ಸಾಮಾನ್ಯವಾಗಿ ಮದುವೆಯ ಮೂಲಕ ಈ ಪ್ರಚೋದನೆಯನ್ನು ತಣಿಸಿಕೊಳ್ಳಬಹುದು. ಆದರೆ ನಿರುದ್ಯೋಗ ಹೆಚ್ಚಾದ ಹಿನ್ನೆಲೆ ಪುರುಷರು ಮದುವೆ ಆಗುವುದಕ್ಕೆ ಕಷ್ಟವಾಗುತ್ತಿದೆ. ಹೀಗಾಗಿ ಲೈಂಗಿಕ ಪ್ರಚೋದನೆಯನ್ನು ತೀರಿಸಿಕೊಳ್ಳುವುದಕ್ಕೆ ಮುಂದಾಗುವುದರಿಂದ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ನಿವೃತ್ಯ ನ್ಯಾ. ಮಾರ್ಕಂಡೇಯ ಕಟ್ಜು ಟ್ವೀಟ್ ಮಾಡಿದ್ದಾರೆ.
— Markandey Katju (@mkatju) September 30, 2020
ಮಾರ್ಕಂಡೇಯ ಕಟ್ಜು ಟ್ವೀಟ್ ನಲ್ಲಿ ಇರುವುದೇನು:
"ಲೈಂಗಿಕತೆಯು ಪುರುಷರಲ್ಲಿ ಸಹಜ ಪ್ರಚೋದನೆಯಾಗಿದೆ. ಕೆಲವೊಮ್ಮೆ ಆಹಾರವನ್ನು ಬಿಟ್ಟರೆ, ಮುಂದಿನ ಅವಶ್ಯಕತೆಯೇ ಲೈಂಗಿಕತೆಯಾಗಿರುತ್ತದೆ. ಭಾರತದಂತ ಸಂಪ್ರದಾಯವಾದಿ ಸಮಾಜದಲ್ಲಿ ಸಾಮಾನ್ಯವಾಗಿ ವಿವಾಹದ ಮೂಲಕ ಮಾತ್ರ ಪರಸ್ಪರರು ಲೈಂಗಿಕತೆ ಹೊಂದಬಹುದು. ಆದರೆ ವಯಸ್ಸಿಗೆ ಬಂದ ಪುರುಷರು ನಿರುದ್ಯೋಗದಿಂದ ವಿವಾಹವಾಗುತ್ತಿಲ್ಲ. ಇದರಿಂದ ಲೈಂಗಿಕತೆಯಿಂದ ವಂಚಿತರಾಗುತ್ತಿರುವ ಪುರುಷರಿಂದ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ" ಎಂದು ಮಾರ್ಕಂಡೇಯ ಕಟ್ಜು ಟ್ವೀಟ್ ಮಾಡಿದ್ದಾರೆ.
ಅತ್ಯಾಚಾರಕ್ಕೆ ಕಡಿವಾಣ ಹಾಕಬೇಕಿದ್ದಲ್ಲಿ ಉದ್ಯೋಗ ಸೃಷ್ಟಿಸಿ:
"ನಾನು ಮತ್ತೊಮ್ಮೆ ನನ್ನ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡುವುದಕ್ಕೆ ಬಯಸುತ್ತೇನೆ. ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದನ್ನು ನಾನೂ ಸಹ ವಿರೋಧಿಸುತ್ತೇನೆ. ಆದರೆ ದೇಶದಲ್ಲಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ಇಂಥ ಪ್ರಕರಣಗಳು ಹೆಚ್ಚಾಗುವ ಲಕ್ಷಣಗಳೇ ಹೆಚ್ಚಾಗಿ ಕಾಣುತ್ತಿವೆ. ಹಾಗಾಗಿ ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕಬೇಕು ಎಂದಿದ್ದಲ್ಲಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಿ, ಉದ್ಯೋಗ ಸೃಷ್ಟಿಸುವತ್ತ ಹೆಚ್ಚು ಗಮನ ಹರಿಸಬೇಕಿದೆ" ಎಂದು ಅವರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.