ಮೋದಿಯವರೇ ನೀವು ಭಾರತೀಯ ಸೇನೆ ಪರವೋ ಚೀನಾ ಪರವೋ: ರಾಹುಲ್ ಗಾಂಧಿ
ನವದೆಹಲಿ, ಸಪ್ಟೆಂಬರ್.16: ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯಿಂದ ಯಾವುದೇ ಒಳನುಸುಳುವಿಕೆ ಪ್ರಯತ್ನವೂ ನಡೆದಿಲ್ಲ ಎಂದ ಕೇಂದ್ರ ಸರ್ಕಾರವನ್ನು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.
ಭಾರತ-ಚೀನಾದ ಪೂರ್ವ ಭಾಗದ ಲಡಾಖ್ ಗಡಿಯಲ್ಲಿ ಸಂಘರ್ಷದಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಇದರ ನಡುವೆ "ಕೇಂದ್ರ ಸರ್ಕಾರ, ಪ್ರಧಾನಮಂತ್ರಿ ಮತ್ತು ಕೇಂದ್ರ ಸಚಿವರ ನಡುವಳಿಕೆ ಮತ್ತು ಹೇಳಿಕೆಗಳ ಬಗ್ಗೆ ಒಮ್ಮೆ ಗಮನ ಕೊಟ್ಟು ಅರ್ಥ ಮಾಡಿಕೊಳ್ಳಿ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಚೀನಾದಿಂದ ಗಡಿ ನುಸುಳುವಿಕೆ ಪ್ರಯತ್ನ ನಡೆದಿಲ್ಲ ಎಂದ ಕೇಂದ್ರ ಸರ್ಕಾರ
ಕೇಂದ್ರ ನಾಯಕರು ಚೀನಾದ ಬಗ್ಗೆ ನೀಡುತ್ತಿರುವ ಹೇಳಿಕೆಯ ಕಾಲಾನುಕ್ರಮವನ್ನು ಒಮ್ಮೆ ಗಮನಿಸಿ.
* ಪ್ರಧಾನಮಂತ್ರಿಗಳು ಯಾರೊಬ್ಬರೂ ಗಡಿ ದಾಟಿಲ್ಲ ಎಂದು ಹೇಳಿಕೆ ನೀಡುತ್ತಾರೆ
* ನಂತರ, ಚೀನಾ ಮೂಲದ ಬ್ಯಾಂಕಿನಿಂದ ದೊಡ್ಡ ಪ್ರಮಾಣದ ಸಾಲವನ್ನು ಪಡೆದುಕೊಳ್ಳಲಾಗುತ್ತದೆ
* ತದನಂತರ, ರಕ್ಷಣಾ ಸಚಿವರು ಚೀನಾ ನಮ್ಮ ಭೂಪ್ರದೇಶವನ್ನು ಅತಿಕ್ರಮಿಸಿ ಎಂದು ಹೇಳುತ್ತಾರೆ
* ಇದೀಗ, ಕೇಂದ್ರ ಗೃಹ ಖಾತೆ ಸಚಿವಾಲಯವು ಚೀನಾದಿಂದ ಯಾವುದೇ ಒಳನುಸುಳುವಿಕೆ ಪ್ರಯತ್ನ ನಡೆದಿಲ್ಲ ಎನ್ನುತ್ತಿದೆ
"ಮೋದಿ ಸರ್ಕಾರವು ಭಾರತೀಯ ಸೇನೆಯ ಜೊತೆಗಿದ್ದಾರೋ ಅಥವಾ ಚೀನಾದ ಜೊತೆಗಿದ್ದಾರೋ? ಪ್ರಧಾನಿ ಮೋದಿಯವರೇ ಏಕೆ ಇಷ್ಟೊಂದು ಭಯ" ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಚೀನಾ ಗಡಿ ನುಸುಳಿಲ್ಲ ಎಂದ ಕೇಂದ್ರ ಗೃಹ ಸಚಿವಾಲಯ:
ಕಳೆದ ಆರು ತಿಂಗಳಿನಿಂದ ಭಾರತ ಚೀನಾ ಗಡಿಯಲ್ಲಿ ಯಾವುದೇ ರೀತಿ ಒಳನುಸುಳುವಿಕೆಯ ಪ್ರಯತ್ನ ನಡೆದಿಲ್ಲ ಎಂದು ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯನಾದ್ ರಾಯ್ ಅವರು ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ್ದಾರೆ. ಜಮ್ಮು-ಕಾಶ್ಮೀರದ ಗಡಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ 594 ಬಾರಿ ಪಾಕಿಸ್ತಾನ ಸೇನೆಯಿಂದ ಒಳನುಸುಳುವಿಕೆ ಪ್ರಯತ್ನ ನಡೆದಿದೆ. ಈ ಪೈಕಿ 312 ಬಾರಿ ನಡೆಸಿದ ಒಳನುಸುಳುವಿಕೆಯ ಪ್ರಯತ್ನ ಯಶಸ್ವಿಯಾಗಿದೆ ಎಂದು ಗೃಹ ಸಚಿವಾಲಯವು ಮಾಹಿತಿ ನೀಡಿದೆ.