ಉಮೇಶ್ ಕತ್ತಿ ಸಚಿವ ಸ್ಥಾನಕ್ಕೆ ಕೊಕ್ಕೆ ಇಟ್ಟ ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ
ನವದೆಹಲಿ, ಡಿಸೆಂಬರ್ 13: ಸಚಿವ ಸ್ಥಾನಕ್ಕೆ ಪಕ್ಷದಲ್ಲಿ ಆಂತರಿಕವಾಗಿ, ಬಹಿರಂಗವಾಗಿ ಒತ್ತಡ ಹೇರುತ್ತಿರುವ ಹಿರಿಯ ಬಿಜೆಪಿ ಶಾಸಕ ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ದೊರೆಯುವುದು ಅಸಾಧ್ಯ ಎನಿಸುತ್ತಿದೆ. ಇದಕ್ಕೆ ಸಾಕ್ಷ್ಯ ಒದಗಿಸುತ್ತಿದೆ ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ.
ಇಂದು ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಣ ಸವದಿ ಅವರಿಗೆ ಉಮೇಶ್ ಕತ್ತಿ ಅವರು ಸಚಿವ ಸ್ಥಾನದ ಬೇಡಿಕೆ ಇಟ್ಟ ಬಗ್ಗೆ ಪ್ರಶ್ನೆ ಎದುರಾಯಿತು.
ಡಿಸಿಎಂ ಸ್ಥಾನಗಳನ್ನು ಕೈಬಿಡುವಂತೆ ಸ್ವಪಕ್ಷದ ಶಾಸಕರಿಂದಲೇ ಒತ್ತಾಯ
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮಣ ಸವದಿ, 'ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ಕೊಟ್ಟರೆ, ಬೆಳಗಾವಿ ಜಿಲ್ಲೆಗೆ ಆರು ಸಚಿವ ಸ್ಥಾನ ಕೊಟ್ಟಂತಾಗುತ್ತದೆ' ಎಂದರು.
'ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ಕೊಟ್ಟರೆ ಬೆಂಗಳೂರು ಬಿಟ್ಟರೆ ಹೆಚ್ಚು ಸಚಿವ ಸ್ಥಾನ ಬೆಳಗಾವಿ ಜಿಲ್ಲೆಗೆ ನೀಡಿದಂತಾಗುತ್ತದೆ' ಎಂದರು.
'ಉಪಚುನಾವಣೆಯಲ್ಲಿ ಬೆಳಗಾವಿಯ ಮೂರು ಅಭ್ಯರ್ಥಿಗಳು ಗೆದ್ದಿದ್ದಾರೆ, ಅವರಿಗೆ ಸಚಿವ ಸ್ಥಾನ ಸಿಗಲಿದೆ. ಉಮೇಶ್ ಕತ್ತಿ ಅವರಿಗೂ ಸಚಿವ ಸ್ಥಾನ ಕೊಟ್ಟರೆ ಜಿಲ್ಲೆಯ ಒಟ್ಟು ಆರು ಮಂದಿಗೆ ಸಚಿವ ಸ್ಥಾನ ಕೊಟ್ಟಂತಾಗುತ್ತದೆ ಎಂದರು.
ಡಿಸಿಎಂ ಹುದ್ದೆ ಬೇಡ, ನಾನು ಸಿಎಂ ಹುದ್ದೆ ಆಕಾಂಕ್ಷಿ: ಉಮೇಶ್ ಕತ್ತಿ
'ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ವಹಿಸಿದ ಕೆಲಸವನ್ನು ಶ್ರದ್ದೆಯಿಂದ ಮಾಡುವುದಷ್ಟೇ ನನ್ನ ಕೆಲಸ ಎಂದು ಹೇಳಿದರು. ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿಗಳ ಪರಮಾಧಿಕಾರ. ಯಾರನ್ನು ತೆಗೆದುಕೊಳ್ಳಬೇಕು, ಬಿಡಬೇಕು ಎಂಬುದು ಅವರ ವಿವೇಚನೆಗೆ ಬಿಟ್ಟಿದ್ದು. ಡಿಸಿಎಂ ಹುದ್ದೆ ಸೃಷ್ಟಿ ಪಕ್ಷದ ವರಿಷ್ಠರ ನಿರ್ಣಯ' ಎಂದು ಹೇಳಿದರು.
ಬಿಜೆಪಿ ಸರ್ಕಾರ ರಚನೆ ಆದಂದಿನಿಂದಲೂ ಉಮೇಶ್ ಕತ್ತಿ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಮೊದಲ ಹಂತದ ಸಂಪುಟ ವಿಸ್ತರಣೆ ಮಾಡಿದಾಗ ಕತ್ತಿ ಅವರಿಗೆ ಅವಕಾಶ ನಿರಾಕರಿಸಲಾಗಿದ್ದು, ಈ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಉಮೇಶ್ ಕತ್ತಿ ಅವರು ಒಟ್ಟು ಎಂಟು ಬಾರಿ ಶಾಸಕರಾಗಿದ್ದಾರೆ.