ಅತ್ಯಾಚಾರಿಗೇ ಅವಮಾನವಾಗಿದೆ ಎಂದಳು 'ನಿರ್ಭಯಾ'
ನವದೆಹಲಿ, ಜ. 2: ನಗರದಲ್ಲಿ ಎರಡು ವರ್ಷಗಳ ಹಿಂದೆ ಚಲಿಸುವ ಬಸ್ನಲ್ಲಿ ನಡೆದಿದ್ದ ಅಮಾನುಷ ಗ್ಯಾಂಗ್ ರೇಪ್ ವಿರುದ್ಧ ಇಡೀ ದೇಶವೇ ಬೀದಿಗಿಳಿದು ಪ್ರತಿಭಟಿಸಿತ್ತು. ಅತ್ಯಾಚಾರಕ್ಕೊಳಗಾದ ಯುವತಿ ತೀವ್ರ ನಿತ್ರಾಣಳಾಗಿದ್ದರೂ ಬದುಕುವ ಆಸೆ ವ್ಯಕ್ತಪಡಿಸಿದ್ದಳು. ಇದಕ್ಕಾಗಿಯೇ ಆಕೆಗೆ 'ನಿರ್ಭಯಾ' ಎಂಬ ಬಿರುದು ನೀಡಿ, ಅದೇ ಹೆಸರಿನಿಂದ ಕರೆಯಲಾಗುತ್ತಿದೆ.
ಈಚೆಗಷ್ಟೇ ನವ ದೆಹಲಿಯಲ್ಲಿ ಉಬೇರ್ ಟ್ಯಾಕ್ಸಿ ಚಾಲಕನಿಂದ ಅತ್ಯಾಚಾರಕ್ಕೊಳಗಾದ ಯುವತಿ ಅನೇಕ ದಿನಗಳ ನಂತರ ಮೌನ ಮುರಿದಿದ್ದಾರೆ. ಮತ್ತೆ ಆತ್ಮಶಕ್ತಿ ಕ್ರೋಢೀಕರಿಸಿಕೊಂಡು ಸಮಾಜವನ್ನು ಧೈರ್ಯದಿಂದ ಎದುರಿಸಲು ಸಜ್ಜಾಗಿದ್ದಾರೆ. "ಇನ್ನು ಮುಂದೆ ಅತ್ಯಾಚಾರಿಗಳ ವಿರುದ್ಧ ಹೋರಾಟ ಮುಂದುವರಿಸುತ್ತೇನೆ" ಎಂದು ಘೋಷಿಸಿದ್ದಾರೆ. [ಕೆಲವೇ ಗಂಟೆಯಲ್ಲಿ ಅತ್ಯಾಚಾರಿ ಸೆರೆ ಸಿಕ್ಕಿದ್ದು ಹೇಗೆ?]
"ಅತ್ಯಾಚಾರಕ್ಕೊಳಗಾದ ನಂತರ ನೆಮ್ಮದಿಯ ನಿದ್ದೆಯನ್ನೇ ಕಳೆದುಕೊಂಡಿದ್ದೆ. ಆ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಹಾಗೂ ಕಚೇರಿಯಲ್ಲಿ ಸಹೋದ್ಯೋಗಿಗಳು ಮಾನಸಿಕ ಬೆಂಬಲ ನೀಡಿದರು. ಇದರಿಂದ ಮಾನಸಿಕವಾಗಿ ಚೇತರಿಸಿಕೊಂಡಿದ್ದೇನೆ" ಎಂದು ಶ್ಲಾಘಿಸಿದರು.
ಅತ್ಯಾಚಾರಿಗೇ ಅವಮಾನವಾಗಿದೆ : "ಕೆಲವರು ನನ್ನನ್ನು ವ್ಯಂಗ್ಯವಾಗಿ ನೋಡುತ್ತಿರುವುದೂ ನಿಜ. ಆದರೆ, ಅವರಿಗೆ ನಾನು ಬೆದರಲ್ಲ. ನನಗಾದ ಅತ್ಯಾಚಾರವನ್ನು ನಾನು ಅವಮಾನವೆಂದು ಬಗೆದಿಲ್ಲ. ಬದಲಿಗೆ ಅತ್ಯಾಚಾರಗೈದವನಿಗೇ ಅವಮಾನವಾಗಿದೆ ಎಂದು ಬಗೆಯುತ್ತೇನೆ" ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ನಿರ್ಭಯಾಳ ಮೇಲೆ ಅತ್ಯಾಚಾರ ನಡೆದ ಮೇಲೆ ರಚಿಸಿದ ಕಠಿಣ ಕಾನೂನು ಕೂಡ ಅತ್ಯಾಚಾರಿಗಳಲ್ಲಿ ಭಯ ಹುಟ್ಟಿಸುವಲ್ಲಿ ವಿಫಲವಾಗಿದೆ ಎಂದು ಹೇಳಿದ್ದಾರೆ. [ಅತ್ಯಾಚಾರಿ ಟ್ಯಾಕ್ಸಿ ಚಾಲಕನ ಬಂಧನ]
ನನ್ನ ಮೇಲೆ ನಡೆದ ಅತ್ಯಾಚಾರದಿಂದ ನಾನು ಗಲಿಬಿಲಿಗೊಂಡಿಲ್ಲ. ಸಂದರ್ಭವನ್ನು ಧೈರ್ಯದಿಂದಲೇ ಎದುರಿಸಿದ್ದೇನೆ. ಆದ್ದರಿಂದಲೇ ಅತ್ಯಾಚಾರ ಕುರಿತು ಪಾಲಕರಿಗಿಂತ ಮೊದಲು ಪೊಲೀಸರಿಗೆ ತಿಳಿಸಿದ್ದೇನೆ ಎಂದು ಅತ್ಯಾಚಾರ ಸಂತ್ರಸ್ತ ಯುವತಿ ಹೇಳಿಕೊಂಡಿದ್ದಾರೆ.
ಅತ್ಯಾಚಾರ ಪ್ರತಿಭಟಿಸಿ : "ಮಹಿಳೆಯರು ಅತ್ಯಾಚಾರಕ್ಕೊಳಗಾದಾಗ ಮರ್ಯಾದೆಗೆ ಹೆದರಿ ಸುಮ್ಮನುಳಿಯುತ್ತಾರೆ. ಇದರಿಂದ ಅತ್ಯಾಚಾರಿಗಳಿಗೆ ಮತ್ತಷ್ಟು ಧೈರ್ಯ ಬರುತ್ತದೆ. ದೌರ್ಜನ್ಯಕ್ಕೊಳಗಾದ ಮಹಿಳೆಯರು ಪ್ರತಿಭಟಿಸಿದಾಗಲೇ ನೀಚ ಕೃತ್ಯ ಎಸಗುವವರಿಗೆ ಭಯ ಮೂಡುತ್ತದೆ" ಎಂದು ಕರೆ ನೀಡಿದ್ದಾರೆ.