ಐಪಿಎಲ್ 7ಗೂ ಬುಕ್ಕಿಗಳ ಕಾಟ : ಗವಾಸ್ಕರ್
ಐಪಿಎಲ್ಗೆ ಬೆಟ್ಟಿಂಗ್ ಭೂತದಿಂದ ಮುಕ್ತಿ ಸಿಗುವ ಹಾಗೆ ಕಾಣುತ್ತಿಲ್ಲ, ಬುಕ್ಕಿಗಳ ಕಾಟ ಮಿತಿಮೀರಿದೆ. ಸುಪ್ರೀಂಕೋರ್ಟ್ ಮಧ್ಯ ಪ್ರವೇಶದಿಂದಾಗಿ ಸುನಿಲ್ ಗವಾಸ್ಕರ್ ಅವರು ಐಪಿಎಲ್ ಸಾರಥ್ಯ ವಹಿಸಿಕೊಂಡರೂ, ಬುಕ್ಕಿಗಳ ಕಾಟ ತಪ್ಪಿಲ್ಲ. ಅವರೇ ತಿಳಿಸಿರುವಂತೆ ಪ್ರಸಕ್ತ ಐಪಿಎಲ್ ಸೀಸನ್ 7ರಲ್ಲಿ ಪಾಲ್ಗೊಂಡಿರುವ ಇಬ್ಬರು ಆಟಗಾರರನ್ನು ಬುಕ್ಕಿಯೋರ್ವ ಸಂಪರ್ಕಿಸಿದ್ದಾನೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಸುನಿಲ್ ಗವಾಸ್ಕರ್ ಅವರು ಭ್ರಷ್ಟಾಚಾರ ತಡೆ ಘಟಕದ ಅಧಿಕಾರಿಗಳಿಗೆ ಮತ್ತು ಭದ್ರತಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮೂಲಗಳ ಪ್ರಕಾರ ಬೆಟ್ಟಿಂಗ್ ವಿಚಾರ ಮಾಧ್ಯಮಗಳಿಗೆ ಲೀಕ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ನ್ಯೂಜಿಲೆಂಡ್ ದೇಶದ ಕ್ರಿಕೆಟಿಗ ಬ್ರೆಂಡನ್ ಮೆಕಲಮ್ ಅವರ ಪ್ರಕರಣದ ತನಿಖೆ ವೇಳೆ ಬುಕ್ಕಿಯೊಬ್ಬ ಇಬ್ಬರು ಆಟಗಾರರಿಗೆ ಹಣದ ಆಮಿಷ ತೋರಿದ ವಿಚಾರ ಬಹಿರಂಗಗೊಂಡಿದೆ. ಆದರೆ ಬುಕ್ಕಿ ಸಂಪರ್ಕಿಸಿದ್ದ ಆಟಗಾರರ ಬಗೆಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಈ ವಿಚಾರ ಐಪಿಎಲ್ನಲ್ಲಿ ಪಾಲ್ಗೊಂಡಿರುವ ಯಾವುದೇ ತಂಡದ ಆಟಗಾರನಿಂದ ಬಹಿರಂಗಗೊಂಡಿಲ್ಲ ಎಂದು ಗವಾಸ್ಕರ್ ಸ್ಪಷ್ಟಪಡಿಸಿದ್ದಾರೆ.
'ನಮ್ಮಲ್ಲಿ ಆಂತರಿಕ ತನಿಖಾಧಿಕಾರಿಗಳಿದ್ದು, ಈ ಸಮಯದಲ್ಲಿ ಎಲ್ಲ ತಂಡಗಳೊಂದಿಗೆ ಅವರು ನಿರಂತರ ಸಂಪರ್ಕದಲ್ಲಿದ್ದಾರೆ. ಅಕ್ರಮದ ಕುರಿತು ಯಾವುದೇ ವಿಚಾರವನ್ನು ಆಟಗಾರರು ಈ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಬಹುದು ಮತ್ತು ಅವರ ಮಾಹಿತಿಯನ್ನು ಅಧಿಕಾರಿಗಳು ಗೌಪ್ಯವಾಗಿಡುತ್ತಾರೆ. ಹೀಗಾಗಿ ಆಟಗಾರರು ಯಾವುದೇ ಸಂಕೋಚವಿಲ್ಲದೆ, ಮುಜುಗರವಿಲ್ಲದೆ ಮಾಹಿತಿ ಹಂಚಿಕೊಳ್ಳಬಹುದು' ಎಂದು ಹೇಳಿದರು.
ಒಟ್ಟಾರೆ ಕಳೆದ 6 ಸೀಸನ್ಗಳಿಂದಲೂ ಬುಕ್ಕಿಗಳ ಕಾಟದಿಂದ ಬಳಲಿದ್ದ ಐಪಿಎಲ್ ಅನ್ನು ಸುಪ್ರೀಂಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಬಳಿಕ ಐಪಿಎಲ್ ಹಂಗಾಮಿ ಅಧ್ಯಕ್ಷರಾಗಿ ಗವಾಸ್ಕರ್ ಅವರು ನೇಮಕಗೊಂಡು ಅವರ ಅಧ್ಯಕ್ಷತೆಯಲ್ಲಿ ಐಪಿಎಲ್ ಸೀಸನ್ 7 ನಡೆಯುತ್ತಿದ್ದು, ಇದರ ಮೇಲೂ ಬುಕ್ಕಿಗಳ ಕೆಂಗಣ್ಣು ಬಿದ್ದಿರುವುದು ಕ್ರಿಕೆಟ್ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಎನ್ ಶ್ರೀನಿವಾಸನ್ ಅವರು ಮತ್ತೊಮ್ಮೆ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಮರಳಲು ಸತತ ಪ್ರಯತ್ನ ನಡೆಸುತ್ತಿದ್ದು ಕೋರ್ಟ್ ಅನುಮತಿ ನೀಡಿಲ್ಲ. (ಪಿಟಿಐ)