ದೆಹಲಿಯ ಕಾರ್ನಲ್ಲಿ ವೈದ್ಯರಿಬ್ಬರ ಮೃತದೇಹ ಪತ್ತೆ
ನವದೆಹಲಿ, ಡಿಸೆಂಬರ್ 4: ದೆಹಲಿಯ ರೋಹಿನಿ ಪ್ರದೇಶದ ಸೆಕ್ಟರ್ 13ರ ಹೊರವಲಯದಲ್ಲಿ ನಿಲ್ಲಿಸಲಾಗಿದ್ದ ಕಾರ್ ಒಂದರಲ್ಲಿ ಬುಧವಾರ ಬೆಳಿಗ್ಗೆ ಇಬ್ಬರು ವೈದ್ಯರ ಮೃತದೇಹ ಪತ್ತೆಯಾಗಿದೆ. ಇಬ್ಬರ ದೇಹದಲ್ಲಿಯೂ ಗುಂಡು ಹೊಕ್ಕಿರುವುದು ಕಂಡುಬಂದಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಓಂಪ್ರಕಾಶ್ ಕುಕ್ರೇಜಾ (65) ಮತ್ತು ಸುದೀಪ್ತಾ ಮುಖರ್ಜಿ (55) ಎಂದು ಪೊಲೀಸರು ಗುರುತಿಸಿದ್ದಾರೆ. ವೈದ್ಯ ಓಂಪ್ರಕಾಶ್ ಮೊದಲು ಮಹಿಳೆಯ ಮೇಲೆ ಗುಂಡು ಹಾರಿಸಿದ್ದಾರೆ. ಬಳಿಕ ತಮಗೆ ತಾವೇ ಗುಂಡು ಹಾರಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಪಶುವೈದ್ಯೆ ಕೊಲೆ ಪ್ರಕರಣ: ಹೆತ್ತವರ ಮನಮಿಡಿವ ಮಾತುಗಳು
ಓಂಪ್ರಕಾಶ್ ಮತ್ತು ಸುದೀಪ್ತಾ ಇಬ್ಬರೂ ಒಂದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಓಂಪ್ರಕಾಶ್ ಅಲ್ಲಿನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ವಿವಾಹಿತರಾಗಿದ್ದ ಓಂಪ್ರಕಾಶ್, ಸುದೀಪ್ತಾ ಅವರನ್ನು ಮದುವೆಯಾಗಲು ಬಯಸಿದ್ದರು. ಅದು ಸಾಧ್ಯವಾಗದೆ ಇದ್ದರೂ ಇಬ್ಬರ ನಡುವೆ ಅಕ್ರಮ ಸಂಬಂಧ ಇತ್ತು. ಈ ಸಂಬಂಧವೇ ಈ ಘಟನೆಗೆ ಕಾರಣ ಎಂದು ಹೇಳಲಾಗಿದೆ.
ಮೃತರು ನಿರ್ವಾಣ ನರ್ಸಿಂಗ್ ಹೋಂ ಎಂಬ ಆಸ್ಪತ್ರೆ ನಡೆಸುತ್ತಿದ್ದರು. ಮೊದಲು ಓಂಪ್ರಕಾಶ್ ಅವರು ಸುದೀಪ್ತಾ ಅವರ ಎದೆಗೆ ಗುಂಡು ಹಾರಿಸಿದ್ದಾರೆ. ನಂತರ ತಮ್ಮ ತಲೆಗೆ ಗುಂಡು ಹಾರಿಸಿಕೊಂಡಿದ್ದಾರೆ. ಓಂಪ್ರಕಾಶ್ ಅವರ ಬಳಿ ಪರವಾನಗಿ ಹೊಂದಿದ್ದ ಪಿಸ್ತೂಲು ಸಿಕ್ಕಿದೆ.
ಅಮೆರಿಕದಲ್ಲಿ ಅಪರಿಚಿತ ವ್ಯಕ್ತಿಯ ಗುಂಡೇಟಿಗೆ ಬಲಿಯಾದ ಮೈಸೂರಿನ ಯುವಕ
ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.