ಬ್ಯಾಂಕ್ ಮುಷ್ಕರ: ATM ಸೇವೆ, ಹಣ ಡಿಪಾಸಿಟ್, ವಿತ್ ಡ್ರಾ ಎಲ್ಲವೂ ಬಂದ್!
ನವದೆಹಲಿ, ಮಾರ್ಚ್ 15: ಬ್ಯಾಂಕಿನಿಂದ ಹಣ ತೆಗೆದುಕೊಳ್ಳಬೇಕೇ. ಎಟಿಎಂಗಳಲ್ಲಿ ಹಣ ವಿತ್ ಡ್ರಾ ಮಾಡಿಕೊಳ್ಳಬೇಕೇ. ಬ್ಯಾಂಕಿಂಗ್ ವ್ಯವಹಾರಗಳೇನೇ ಇದ್ದರೂ ಇನ್ನೆರೆಡು ದಿನ ಅದಕ್ಕೆಲ್ಲ ಫುಲ್ ಸ್ಟಾಪ್ ಇಡುವುದೇ ಉತ್ತಮ. ಏಕೆಂದರೆ ದೇಶದಲ್ಲಿ ಬ್ಯಾಂಕ್ ನೌಕರರು ಎರಡು ದಿನ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ.
ಸಾರ್ವಜನಿಕ ವಲಯದ ಎರಡು ಬ್ಯಾಂಕ್ ಗಳನ್ನು ಖಾಸಗೀಕರಣಗೊಳಿಸುವ ಪ್ರಸ್ತಾವನೆಯನ್ನು ವಿರೋಧಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್(ಯುಎಫ್ಬಿಯು) ಮಾರ್ಚ್ 15 ಮತ್ತು ಮಾರ್ಚ್ 16ರಂದು ಮುಷ್ಕರಕ್ಕೆ ಕರೆ ನೀಡಿದೆ. ಈ ಅವಧಿಯಲ್ಲಿ ಬ್ಯಾಂಕಿಂಗ್ ಸೇವೆಗಳು ಅಲಭ್ಯವಾಗಿರಲಿವೆ.
4 ದಿನ ಬ್ಯಾಂಕ್ ರಜೆ: ಮಾರ್ಚ್ 15 ಮತ್ತು 16ರಂದು ಭಾರತ್ ಬಂದ್
ಭಾರತದಾದ್ಯಂತ 10 ಲಕ್ಷ ಬ್ಯಾಂಕ್ ನೌಕರರು ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ(ಎಐಬಿಇಎ)ವು ತಿಳಿಸಿದೆ. ಇದರಿಂದ ಭಾರತೀಯ ಸ್ಟೇಟ್ ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರದಂತಾ ಸಾರ್ವಜನಿಕ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗಲಿದೆ.
ಈಗಾಗಲೇ ಗ್ರಾಹಕರನ್ನು ಎಚ್ಚರಿಸಿರುವ ಬ್ಯಾಂಕ್
ಒಂದು ವೇಳೆ ಬ್ಯಾಂಕ್ ನೌಕರರ ಮುಷ್ಕರ ಮುಂದುವರಿದರೆ ಬ್ಯಾಂಕಿನ ವಹಿವಾಟುಗಳಲ್ಲಿ ವ್ಯತ್ಯಯವಾಗಲಿದೆ ಎಂದು ಬ್ಯಾಂಕ್ ಆಫ್ ಮಹಾರಾಷ್ಟ್ರ ಈಗಾಗಲೇ ತಮ್ಮ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಇದರ ಹೊರತಾಗಿ ಸಾಮಾನ್ಯ ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಬ್ಯಾಂಕ್ ತಿಳಿಸಿದೆ.
ಯಾವ ಯಾವ ಬ್ಯಾಂಕಿಂಗ್ ಸೇವೆಗಳು ಅಲಭ್ಯ?
ಹಣ ಡಿಪಾಸಿಟ್ ಮಾಡುವುದು, ಹಣ ವಿತ್ ಡ್ರಾ ಮಾಡಿಕೊಳ್ಳುವುದು, ಚೆಕ್ ಕ್ಲಿಯರೆನ್ಸ್, ಸಾಲ ಮಂಜೂರಾತಿ ಪ್ರಕ್ರಿಯೆಗಳಿಗೆ ಮುಷ್ಕರದಿಂದ ಅಡ್ಡಿಯಾಗಲಿದೆ. ಈ ಮೊದಲು ತುಂಬಿಸಿರುವ ಹಣ ಖಾಲಿ ಆಗುವವರೆಗೂ ಎಟಿಎಂಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ತದನಂತರ ಎಟಿಎಂಗಳಲ್ಲೂ ಹಣ ಸಿಗುವುದು ಅನುಮಾನವಾಗಿದೆ.
ಎಂದಿನಂತೆ ಕಾರ್ಯ ನಿರ್ವಹಿಸಲಿರುವ ಖಾಸಗಿ ಬ್ಯಾಂಕ್
ಸಾರ್ವಜನಿಕ ವಲಯದ ಬ್ಯಾಂಕ್ ನೌಕರರು ಮಾತ್ರ ಮುಷ್ಕರಕ್ಕೆ ಕರೆ ನೀಡಿರುವುದರಿಂದ ಖಾಸಗಿ ಬ್ಯಾಂಕ್ ವಹಿವಾಟಿನಲ್ಲಿ ಯಾವುದೇ ರೀತಿ ವ್ಯತ್ಯಾಸ ಕಂಡು ಬರುವುದಿಲ್ಲ. ಐಸಿಐಸಿಐ ಬ್ಯಾಂಕ್, ಹೆಚ್ ಡಿಎಫ್ ಸಿ ಬ್ಯಾಂಕ್, ಕೊಟಕ್ ಮಹಿಂದ್ರಾ ಬ್ಯಾಂಕ್, ಇಂಡಿಸ್ ಇಂಡಿ ಬ್ಯಾಂಕ್ ಗಳು ಯಥಾಸ್ಥಿತಿಯಲ್ಲಿ ಕಾರ್ಯ ನಿರ್ವಹಿಸಲಿವೆ.
ಭಾರತದಲ್ಲಿ ಬ್ಯಾಂಕ್ ಮುಷ್ಕರಕ್ಕೆ ಕರೆ ಕೊಟ್ಟಿದ್ದು ಯಾರು?
ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಗೆ ಸಂಬಂಧಿಸಿದ 9 ಪ್ರಮುಖ ಒಕ್ಕೂಟಗಳು ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿವೆ. ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ(AIBEA), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ(AIBOC), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ(AIBOA), ಬ್ಯಾಂಕ್ ನೌಕರರ ರಾಷ್ಟ್ರೀಯ ಒಕ್ಕೂಟ (NCBE), ಭಾರತದ ರಾಷ್ಟ್ರೀಯ ಬ್ಯಾಂಕ್ ನೌಕರರ ಒಕ್ಕೂಟ (INBEF), ಭಾರತೀಯ ರಾಷ್ಟ್ರೀಯ ಬ್ಯಾಂಕ್ ಅಧಿಕಾರಿಗಳ ಕಾಂಗ್ರೆಸ್ (INBOC), ಬ್ಯಾಂಕ್ ನೌಕರರ ಒಕ್ಕೂಟ (BEFI), ಬ್ಯಾಂಕ್ ಅಧಿಕಾರಿಗಳ ರಾಷ್ಟ್ರೀಯ ಸಂಸ್ಥೆ (NOBO), ಬ್ಯಾಂಕ್ ಕಾರ್ಮಿಕರ ರಾಷ್ಟ್ರೀಯ ಸಂಸ್ಥೆ (NOBW)ಗಳು ಮುಷ್ಕರಕ್ಕೆ ಕರೆ ನೀಡಿವೆ.
ಬ್ಯಾಂಕ್ ನೌಕರರ ಮುಷ್ಕರ ನಡೆಸುತ್ತಿರುವುದು ಏಕೆ?
ಕಳೆದ ಫೆಬ್ರವರಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದರು. ದೇಶದಲ್ಲಿ 1.75 ಲಕ್ಷ ಕೋಟಿ ರೂ. ಗಳಿಸುವ ಸರ್ಕಾರದ ಹೂಡಿಕೆಯ ಭಾಗವಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವುದಾಗಿ ಘೋಷಿಸಿದ್ದರು. ಕೇಂದ್ರವು ಕಳೆದ ವರ್ಷ 10 ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ನಾಲ್ಕು ಬ್ಯಾಂಕ್ ಗಳೊಂದಿಗೆ ವಿಲೀನಗೊಳಿಸಿತ್ತು. 2017ರಲ್ಲಿ 27 ಇದ್ದ ಸಾರ್ವಜನಿಕರ ಬ್ಯಾಂಕ್ ಗಳ ಸಂಖ್ಯೆಯು ಮಾರ್ಚ್ ವೇಳೆಗೆ 12 ಕ್ಕೆ ಇಳಿಸಿತು.