ಕೇಂದ್ರ ತನಿಖಾ ತಂಡದ ಅಧಿಕಾರಿಗಳನ್ನೂ ಬಿಟ್ಟಿಲ್ಲ ಕೊವಿಡ್-19
ನವದೆಹಲಿ, ಜೂನ್.01: ನೊವೆಲ್ ಕೊರೊನಾ ವೈರಸ್ ಸೋಂಕು ಯಾರ ಹೆಗಲನ್ನೂ ಬಿಡುವಂತೆ ಕಾಣುತ್ತಿಲ್ಲ. ಕಾರ್ಮಿಕರಿಂದ ಮಾಲೀಕರು, ರೋಗಿಗಳಿಂದ ವೈದ್ಯರು, ಸಿಬ್ಬಂದಿಯಿಂದ ಮುಖ್ಯಸ್ಥವರೆಗೂ ಕೊವಿಡ್-19 ಸೋಂಕು ಅಂಟಿಕೊಳ್ಳುತ್ತಿದೆ.
ಕಳೆದ ಮೂರು ದಿನಗಳಲ್ಲಿ ನವದೆಹಲಿಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೇಂದ್ರ ತನಿಖಾ ತಂಡ(CBI)ದ ಇಬ್ಬರು ಅಧಿಕಾರಿಗಳಿಗೂ ಕೊರೊನಾ ವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ. ಮೇ.29ರಂದು ಒಂದು ಹಾಗೂ ಸೋಮವಾರ ಮತ್ತೊಬ್ಬ ಅಧಿಕಾರಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ಖಾತ್ರಿಯಾಗಿದೆ.
ನವದೆಹಲಿ: ಔಷಧಿ ಕಂಡು ಹಿಡಿಯಲು ಹೊರಟ ವಿಜ್ಞಾನಿಗೆ ಕೊರೊನಾ ವೈರಸ್!
ಕೇಂದ್ರ ಕಚೇರಿಯಿಂದ ಹೊರಭಾಗದಲ್ಲಿರುವ ಜನರ ಸಂಪರ್ಕದಿಂದ ಅಧಿಕಾರಿಗಳಿಗೆ ಕೊರೊನಾ ವೈರಸ್ ಸೋಂಕು ತಗಲಿರಬಹುದು ಎಂದು ಹೇಳಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಇಬ್ಬರು ಸೋಂಕಿತ ಅಧಿಕಾರಿಗಳನ್ನು ಮುಂದಿನ 14 ದಿನಗಳ ಕಾಲ ಕ್ವಾರೆಂಟೈನ್ ನಲ್ಲಿ ಇರಿಸಲಾಗಿದೆ.
ಕಠಿಣ ಮುನ್ನಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ
ನವದೆಹಲಿಯಲ್ಲಿರುವ ಸಿಬಿಐ ಅಧಿಕಾರಿಗಳ ಕೇಂದ್ರ ಕಚೇರಿಯಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಠಿಣ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಲಾಗಿತ್ತು. ಇದರ ನಡುವೆಯೂ ಇಬ್ಬರು ಅಧಿಕಾರಿಗಳಿಗೆ ಸೋಂಕು ತಗಲಿದೆ. ಇದೀಗ ಕಚೇರಿಯ ಹಲವೆಡೆ ಸ್ಯಾನಿಟೈಸ್ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಎಂಟ್ರಿ ಮತ್ತು ಎಕ್ಸಿಟ್ ಗೇಟ್ ಗಳಲ್ಲಿ ಸ್ಯಾನಿಟೈಸರ್ ಬಳಕೆ
ಕೊರೊನಾ ವೈರಸ್ ಸೋಂಕು ಹರಡದಂತೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಕೇಂದ್ರ ಕಚೇರಿಯ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಸ್ಯಾನಿಟೈಸರ್ ಗಳನ್ನು ಇರಿಸಲಾಗಿದೆ. ಕಚೇರಿಗೆ ಆಗಮಿಸುವ ಪ್ರತಿಯೊಬ್ಬ ಅಧಿಕಾರಿಗಳನ್ನು ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸಲಾಗುತ್ತಿದೆ. ನಂತರ ತಪಾಸಣೆ ನಡೆಸಿ, ಕೈಗಳನ್ನು ಸ್ಯಾನಿಟೈಸರ್ ಗಳಿಂದ ಶುದ್ಧಗೊಳಿಸಿದ ನಂತರವಷ್ಟೇ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ.
ಕೇಂದ್ರ ತನಿಖಾ ತಂಡದ ಕಾರ್ಯಕ್ಕೆ ಅಡ್ಡಿಯಿಲ್ಲ
ಇಬ್ಬರು ಸಿಬಿಐ ಅಧಿಕಾರಿಗಳಿಗೆ ಕೊರೊನಾ ವೈರಸ್ ಸೋಂಕು ತಗಲಿದಾಕ್ಷಣ ಆತಂಕಪಡುವ ಅಗತ್ಯವಿಲ್ಲ. ಕೇಂದ್ರ ತನಿಖಾ ತಂಡದ ಕಾರ್ಯದಲ್ಲಿ ಯಾವುದೇ ಬದಲಾವಣೆಯಿಲ್ಲ. ಬದಲಿಗೆ ತೀವ್ರ ಜಾಗರೂಕತೆಯಿಂದ ಅಧಿಕಾರಿಗಳು ಎಂದಿನಂತೆ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಸಿಬಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೊರೊನಾ ವೈರಸ್ ಹೊಡೆತಕ್ಕೆ ಕಾನೂನು ವ್ಯವಸ್ಥೆಗೂ ಧಕ್ಕೆ
ಕೊರೊನಾ ವೈರಸ್ ಸೋಂಕು ಹರಡುವಿಕೆ ಭೀತಿಯಲ್ಲಿ ಭಾರತದಲ್ಲಿ ಸಾಲು ಸಾಲಾಗಿ ಲಾಕ್ ಡೌನ್ ಗಳನ್ನು ಘೋಷಿಸಲಾಯಿತು. ಇದರಿಂದ ಮೊದಲಿದ್ದ ಕಾನೂನು ಸುವ್ಯವಸ್ಥೆಯನ್ನು ಯಥಾವತ್ತಾಗಿ ಕಾಪಾಡಿಕೊಂಡು ಹೋಗುವುದಕ್ಕೆ ಆಗಲಿಲ್ಲ. ಹೀಗಾಗಿ ಕಾನೂನು ವ್ಯವಸ್ಥೆಯೂ ಹೊಡೆತ ಬಿದ್ದಿದೆ. ಇದನ್ನು ನಿಭಾಯಿಸುವ ನಿಟ್ಟಿನಲ್ಲಿ ತಾವೂ ಕೂಡಾ ಕೊರೊನಾ ವಾರಿಯರ್ಸ್ ರೀತಿಯಲ್ಲಿ ಹೋರಾಟ ನಡೆಸಬೇಕಿದೆ ಎಂದು ಸಿಬಿಐ ಅಧಿಕಾರಿಗಳು ಹೇಳುತ್ತಿದ್ದಾರೆ.