ಮಹಾರಾಷ್ಟ್ರ ಸಚಿವರ ವಿರುದ್ಧ ಅತ್ಯಾಚಾರ ಆರೋಪಕ್ಕೆ ದೊಡ್ಡ ತಿರುವು; ಮಹಿಳೆ ವಿರುದ್ಧವೇ ಕೇಸ್
ನವದೆಹಲಿ, ಜನವರಿ 15: ಮಹಾರಾಷ್ಟ್ರ ಸಚಿವ ಧನಂಜಯ್ ಮುಂಡೆ ವಿರುದ್ಧ ಗಾಯಕಿ ಮಾಡಿದ್ದ ಅತ್ಯಾಚಾರ ಆರೋಪಕ್ಕೆ ಹೊಸ ತಿರುವು ಸಿಕ್ಕಿದೆ. ಎರಡು ದಿನಗಳ ಹಿಂದಷ್ಟೇ ಎನ್ ಸಿಪಿ ಮುಖಂಡ ಧನಂಜಯ್ ಮುಂಡೆ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದ್ದು, ಆರೋಪ ಮಾಡಿದ್ದ ಗಾಯಕಿ ವಿರುದ್ಧ ಗುರುವಾರ ಬಿಜೆಪಿ ಮುಖಂಡ ಕೃಷ್ಣ ಹೆಗ್ಡೆ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಗಾಯಕಿ ರೇಣು ತಮ್ಮ ಹಿಂದೆ ಬಿದ್ದು, ಮೆಸೇಜ್ ಮಾಡುತ್ತಾ, ತನ್ನ ಬಳಿ ಸಂಬಂಧ ಬೆಳೆಸುವಂತೆ 2010ರಿಂದಲೂ ಪೀಡಿಸುತ್ತಿರುವುದಾಗಿ ಕೃಷ್ಣ ಹೆಗ್ಡೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಎನ್ ಸಿಪಿ ಮುಖಂಡ ಧನಂಜಯ ಮುಂಡೆ ವಿರುದ್ಧ ಗಾಯಕಿ ಅತ್ಯಾಚಾರ ಆರೋಪ
ಮಂಗಳವಾರ ಮಹಾರಾಷ್ಟ್ರ ಸಚಿವ ಧನಂಜಯ್ ಮುಂಡೆ ವಿರುದ್ಧ 38 ವರ್ಷದ ಗಾಯಕಿ ರೇಣು ಅತ್ಯಾಚಾರ ಆರೋಪ ಮಾಡಿದ್ದರು. ತನಗೆ ಬಾಲಿವುಡ್ ನಲ್ಲಿ ಅವಕಾಶ ನೀಡುವುದಾಗಿ ಭರವಸೆ ಕೊಟ್ಟು ಸಚಿವರು ಹಲವು ಬಾರಿ ಅತ್ಯಾಚಾರ ನಡೆಸಿರುವುದಾಗಿ ಆರೋಪಿಸಿದ್ದರು. ಆನಂತರ, ರೇಣು ಸಹೋದರಿ ಜೊತೆ ತಾವು ಸಂಬಂಧ ಹೊಂದಿದ್ದು, ಇವರಿಬ್ಬರೂ ಸೇರಿ ತಮ್ಮನ್ನು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿರುವುದಾಗಿ ಧನಂಜಯ್ ಹೇಳಿಕೊಂಡಿದ್ದರು. ಈ ಕುರಿತು ತಾವು ನವೆಂಬರ್ ತಿಂಗಳಿನಲ್ಲಿಯೇ ದೂರು ನೀಡಿರುವುದಾಗಿ ತಿಳಿಸಿದ್ದರು.
ಈ ಹೇಳಿಕೆ ನೀಡಿದ ಧನಂಜಯ್ ಅವರನ್ನು ಉಚ್ಛಾಟನೆ ಮಾಡುವಂತೆ ಸಿಎಂ ಉದ್ಧವ್ ಠಾಕ್ರೆ ಅವರಿಗೆ ಬಿಜೆಪಿ ಮಹಿಳಾ ಸದಸ್ಯರು ಬೇಡಿಕೆ ಇಟ್ಟಿದ್ದರು. ಎನ್ ಸಿಪಿ ಮುಖಂಡ ಶರದ್ ಪವಾರ್ ಕೂಡ ಈ ಆರೋಪ ಗಂಭೀರ ಎಂದು ಪರಿಗಣಿಸಿ, ಪಕ್ಷದ ಮುಖಂಡರೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದರು. ಇದೀಗ ಬಿಜೆಪಿ ಮುಖಂಡ ಕೃಷ್ಣ ಹೆಗ್ಡೆ ಗಾಯಕಿ ರೇಣು ವಿರುದ್ಧವೇ ದೂರು ನೀಡಿರುವುದು ಪ್ರಕರಣಕ್ಕೆ ದೊಡ್ಡ ತಿರುವು ನೀಡಿದೆ.