ರಾಜ್ಯಸಭೆಯಲ್ಲಿಂದು ತ್ರಿವಳಿ ತಲಾಖ್ ಮಸೂದೆ ಮಂಡನೆ ನಿರೀಕ್ಷೆ
ನವದೆಹಲಿ, ಆಗಸ್ಟ್ 10: ತ್ರಿವಳಿ ತಲಾಖ್ ತಿದ್ದುಪಡೆ ಮಸೂದೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದ ಮರುದಿನ, ಅಂದರೆ ಇಂದು(ಆ.10) ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಮಂಡನೆಯಾಗಲಿದೆ.
ಕಳೆದ ಡಿಸೆಂಬರ್ 29 ರಂದು ಲೋಕಸಭೆಯು ತ್ರಿವಳಿ ತಲಾಖ್ ಮಸೂದೆಯನ್ನು ಮಂಡಿಸಿತ್ತು. ಇದರ ಪ್ರಕಾರ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಅಥವಾ ಮತ್ತಾವುದೇ ಮಾಧ್ಯಮದ ಮೂಲಕ ಮೌಖಿಕ ಅಥವಾ ಲಿಕಿತವಾಗಿ ಮುಸ್ಲಿಂ ಪತಿ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡುವುದನ್ನು ಅಸಿಂಧು ಎಂಮದು ಘೋಷಿಸಲಾಗಿತ್ತು. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ವಿರೋಧಿಸಿದ್ದರೆ, ಬಹುಪಾಲು ಜನ ಸ್ವಾಗತಿಸಿದ್ದರು.
ಈ ಕಾಯ್ದೆ ಇಂದು ರಾಜ್ಯಸಭೆಯಲ್ಲಿ ಮಂಡನೆಯಾಗಬೇಕಿದೆ.
ತ್ರಿವಳಿ ತಲಾಕ್ : ಮುಸ್ಲಿಂ ಮಹಿಳೆ ರಕ್ಷಣಾ ಮಸೂದೆಯಲ್ಲೇನಿದೆ?
ನಿನ್ನೆಯಷ್ಟೇ 'ಮುಸ್ಲಿಂ ಮಹಿಳೆಯ ರಕ್ಷಣೆಯ ಹಕ್ಕು-2017 ಕಾಯ್ದೆಯನ್ನು ಮಂಡಿಸಲಾಗಿದ್ದು, ಈ ಕಾಯ್ದೆಯಲ್ಲಿ ಮೂರು ತಿದ್ದುಪಡಿಯನ್ನು ತರಲಾಗಿದೆ. ತ್ರಿವಳಿ ತಲಾಖ್ ನೀಡುವುದನ್ನು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸಲು ಒಪ್ಪಿಗೆ ಸೂಚಿಸಲಾಗಿದೆ.
ಮುಂಗಾರು ಅಧಿವೇಶನದ ಕೊನೆಯ ದಿನವಾಗಿರುವುದರಿಂದ, ಇಂದಿನ ಅಧಿವೇಶನ ಹಲವು ಕಾರಣಗಳಿಂದ ಮಹತ್ವದ್ದೆನ್ನಿಸಿದೆ. ಇದು ಪ್ರಸ್ತುತ ಎನ್ ಡಿಎ ಸರ್ಕಾರದ ಈ ಅವಧಿಯ ಕೊನೆಯ ಮುಂಗಾರು ಅಧಿವೇಶನವೂ ಹೌದು!