ರೈತರ ಆಕ್ರೋಶದ ಕಿಚ್ಚಿಗೆ ಹೊತ್ತಿಉರಿದ ಟ್ರ್ಯಾಕ್ಟರ್ ಸಾಕ್ಷಿ ಎಂದ ಸಿಎಂ
ನವದೆಹಲಿ, ಸಪ್ಟೆಂಬರ್.28: ಕೇಂದ್ರ ಸರ್ಕಾರವು ಜಾರಿಗೊಳಿಸಿದ ಕೃಷಿ ಸಂಬಂಧಿತ ಕಾಯ್ದೆಗಳಲ್ಲಿ ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಬಗ್ಗೆ ಏಕೆ ಉಲ್ಲೇಖಿಸಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಪ್ರಶ್ನೆ ಮಾಡಿದ್ದಾರೆ.
ಎನ್ ಡಿ ಟಿವಿಗೆ ಮಾತನಾಡಿದ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಸೋಮವಾರ ನವದೆಹಲಿ ಇಂಡಿಯಾ ಗೇಟ್ ಬಳಿ ಟ್ರ್ಯಾಕ್ಟರ್ ಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ರೈತರ ಆಕ್ರೋಶದ ಕಿಚ್ಚಿಗೆ ಅದೊಂದು ಘಟನೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.
ರೈತರನ್ನು ಕೆರಳಿಸಿದ ಕೃಷಿ ಮಸೂದೆ ಮತ್ತು ರಾಜ್ಯಗಳ ವಿರೋಧದ ವಿವರ
ಪಂಜಾಬ್ ಸರ್ಕಾರವು ರಾಜ್ಯದ ರೈತರಿಗಾಗಿ 5000 ಕೋಟಿ ರೂಪಾಯಿ ಯೋಜನೆಯನ್ನು ನೀಡಿದೆ. ಆದರೆ ಇದೀಗ ರೈತರ ಬೆಳೆಯನ್ನು ಯಾರು ಖರೀದಿಸುತ್ತಾರೆ ಎನ್ನುವುದೇ ಅರ್ಥವಾಗುತ್ತಿಲ್ಲ. ರೈತರ ಮಕ್ಕಳು ಅನಾರೋಗ್ಯಕ್ಕೆ ತುತ್ತಾದ ಸಂದರ್ಭದಲ್ಲಿ ಮಧ್ಯವರ್ತಿಗಳಿಲ್ಲದೇ ಹೋದರೆ ಅವರು ಹಣ ಹೊಂದಿಸುವುದಾದರೂ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.
ಹೋರಾಟಗಾರರಿಗೆ ಅಮರೀಂದರ್ ಸಿಂಗ್ ಬೆಂಬಲ
ಸ್ವಾತಂತ್ರ್ಯ ಹೋರಾಟಗಾರ ಶಹೀದ್ ಭಗತ್ ಸಿಂಗ್ ಪೂರ್ವಜರ ಗ್ರಾಮ ಖಟ್ಕರ್ ಕಾಲನ್ ನಲ್ಲಿ ಧರಣಿ ನಡೆಸಿದ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಕೃಷಿ ಸಂಬಂಧಿತ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ವ್ಯಕ್ತಪಡಿಸಿದರು. "ಅದು ನನ್ನ ಟ್ರ್ಯಾಕ್ಟರ್ ಆಗಿದ್ದು, ನಾನು ಅದನ್ನು ಸುಡಲು ಬಯಸಿದರೆ ನಿಮಗೇನು ಸಮಸ್ಯೆ ಎಂದು ನಗುನಗುತ್ತಲೇ ಪ್ರಶ್ನೆ ಮಾಡಿದ್ದಾರೆ.
ಕೃಷಿ ಮಸೂದೆ ವಿರೋಧಿ ಹೋರಾಟದ ಕೇಂದ್ರ ಬಿಂದು
ಕೃಷಿ ಸಂಬಂಧಿತ ಕಾಯ್ದೆ ವಿರೋಧಿ ಹೋರಾಟದ ಕೇಂದ್ರ ಬಿಂದುವಾಗಿ ಪಂಜಾಬ್ ಗುರುತಿಸಿಕೊಂಡಿದೆ. ಪಂಜಾಬ್ ಸಿಎಂ ಅಮರೀಂದರ್ ಸಿಂಗ್, ಕೇಂದ್ರ ಸರ್ಕಾರದ ವಿರುದ್ಧ ಧರಣಿ ಕುಳಿತ ದೇಶದ ಮೊದಲ ಮುಖ್ಯಮಂತ್ರಿ ಎನಿಸಿದ್ದಾರೆ. ಹೊಸ ಕಾನೂನು ರೈತರಿಗೆ ಹೊಸ ಮಾರುಕಟ್ಟೆಗಳನ್ನು ತೆರೆಯುತ್ತವೆ ಎಂದು ಕೇಂದ್ರ ಹೇಳುತ್ತಿದ್ದು, ರಾಜ್ಯವು ಈ ವಿಷಯವನ್ನು ನ್ಯಾಯಾಲಯಕ್ಕೆ ಕೊಂಡೊಯ್ಯಬಹುದು ಎಂದು ಅವರು ಸಲಹೆ ನೀಡಿದ್ದಾರೆ.
ಕಾನೂನು ಉಲ್ಲಂಘಿಸುವುದಕ್ಕಾಗಿ ಅಲ್ಲ ನಾವು ಇರುವುದು
"ಕೇಂದ್ರ ಸರ್ಕಾರವು ಈಗಾಗಲೇ ರಾಜ್ಯದ ಜಿಎಸ್ ಟಿಯನ್ನೂ ತನ್ನ ವ್ಯಾಪ್ತಿಗೆ ತೆಗೆದುಕೊಂಡಿದೆ. ಕೃಷಿಯು ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಒಳಪಡಲಿದ್ದು, ಅದರ ಮೇಲೆ ನಮ್ಮ ಕಾನೂನು ತಜ್ಞರ ತಂಡವು ಕಾರ್ಯ ನಿರ್ವಹಿಸುತ್ತಿದೆ. ಆದರೆ ಕೇಂದ್ರ ಸರ್ಕಾರವು ನಮ್ಮನ್ನು ಗೊಂದಕ್ಕೀಡು ಮಾಡಲು ಹೊರಟಿದೆ. ಕಾನೂನು ಉಲ್ಲಂಘಿಸುವ ಕೆಲಸವನ್ನು ನಾವು ಮಾಡುವುದಿಲ್ಲ, ರೂಲ್ಸ್ ಬ್ರೇಕ್ ಮಾಡವುದಕ್ಕೆ ನಾವು ಇರುವುದಲ್ಲ. ಬದಲಿಗೆ ಹೊಸ ಮಾರ್ಗವನ್ನು ಹುಡುಕುತ್ತಿದ್ದೇವೆ. ಸಂಸತ್ ನಲ್ಲಿ ಅಂಗೀಕರಿಸಲ್ಪಟ್ಟ ಕಾಯ್ದೆಯನ್ನು ನಾವು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುತ್ತೇವೆ" ಎಂದು ಅಮರೀಂದರ್ ಸಿಂಗ್ ಹೇಳಿದ್ದಾರೆ.
ದೆಹಲಿಯ ಇಂಡಿಯಾ ಗೇಟ್ ಬಳಿ ಟ್ರ್ಯಾಕ್ಟರ್ ಗೆ ಬೆಂಕಿ
ಕೃಷಿ ಸಂಬಂಧಿತ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅನುಮೋದನೆ ನೀಡುತ್ತಿದ್ದರೆ ಪ್ರತಿಭಟನೆ ಕಿಚ್ಚು ಹೊತ್ತಿಕೊಂಡಿತ್ತು. ಸೋಮವಾರ ಬೆಳಗ್ಗೆ 7.15 ರಿಂದ 7.30ರ ಸಂದರ್ಭದಲ್ಲಿ ದೆಹಲಿ ಕೇಂದ್ರ ಭಾಗವಾಗಿರುವ ಇಂಡಿಯಾ ಗೇಟ್ ಬಳಿ ನೆರೆದ 15 ರಿಂದ 20 ಮಂದಿ ಪ್ರತಿಭಟನಾಕಾರರು ಟ್ರ್ಯಾಕ್ಟರ್ ಗೆ ಬೆಂಕಿ ಹಚ್ಚಿದ್ದರು. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹೊತ್ತಿ ಉರಿದ ಟ್ರ್ಯಾಕ್ಟರ್ ನ್ನು ಅಲ್ಲಿಂದ ತೆರವುಗೊಳಿಸಿದ್ದಾರೆ. ಟ್ರ್ಯಾಕ್ಟರ್ ಗೆ ಬೆಂಕಿ ಹಚ್ಚಿದವರ ಗುರುತು ಪತ್ತೆ ಮಾಡುವ ನಿಟ್ಟಿನಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.