ದೆಹಲಿಯನ್ನು ಆವರಿಸಿದ ವಿಷಕಾರಿ 'ಹೊಂಜು'; ಶಾಲೆಗಳಿಗೆ ರಜಾ ಘೋಷಣೆ
ನವದೆಹಲಿ, ನವೆಂಬರ್ 3: ದಟ್ಟವಾದ 'ಹೊಂಜು' (ಹೊಗೆ+ಮಂಜು) ಮುಸುಕಿದ ಕಾರಣಕ್ಕೆ ಭಾನುವಾರ ದೆಹಲಿ ವಿಮಾನ ನಿಲ್ದಾಣದಿಂದ ಮೂವತ್ತೇಳು ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಯಿತು. ವಾಯು ಗುಣಮಟ್ಟವು 'ಗಂಭೀರ' ಸ್ಥಿತಿಯನ್ನು ತಲುಪಿತು. ದೆಹಲಿ ವಿಮಾನ ನಿಲ್ದಾಣದ ಆಪರೇಟರ್ ಗಳು ಟ್ವೀಟ್ ಮಾಡಿ, ವಿಮಾನ ಕಾರ್ಯಾಚರಣೆಗೆ ತೊಂದರೆ ಆಗಿದೆ. ಬದಲಾದ ಮಾಹಿತಿಗಾಗಿ ಏರ್ ಲೈನ್ಸ್ ಸಂಸ್ಥೆಗಳನ್ನು ಸಂಪರ್ಕಿಸುವಂತೆ ಸೂಚಿಸಲಾಯಿತು.
ಹವಾಮಾನ ಸರಿಯಿಲ್ಲದ ಕಾರಣಕ್ಕೆ ಬೆಳಗ್ಗೆ ಒಂಬತ್ತು ಗಂಟೆಯಿಂದಲೇ ದೆಹಲಿಯ ವಿಮಾನ ನಿಲ್ದಾಣ ಟರ್ಮಿನಲ್ ಮೂರರ ಕಾರ್ಯಾಚರಣೆಗೆ ಸಮಸ್ಯೆಯಾಗಿದೆ. ಹನ್ನೆರಡು ವಿಮಾನಗಳನ್ನು ಜೈಪುರ್, ಅಮೃತ್ ಸರ್ ಮತ್ತು ಲಖನೌಗೆ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.
'ಗ್ಯಾಸ್ ಚೇಂಬರ್ ಆದ ದೆಹಲಿ!' ಮಾಸ್ಕ್ ನೀಡಿದ ಕೇಜ್ರಿವಾಲ್
ತಕ್ಷಣವೇ ಪರಿಹಾರ ಕಾರ್ಯಾಚರಣೆ ಕೈಗೆತ್ತಿಕೊಳ್ಳುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರಕ್ಕೆ ಟ್ವೀಟ್ ಮಾಡಿದ್ದಾರೆ. ಉತ್ತರ ಭಾರತದಾದ್ಯಂತ ಮಾಲಿನ್ಯದ ಮಟ್ಟ ಅಸಹನೀಯ ಸ್ಥಿತಿ ತಲುಪಿದೆ. ದೆಹಲಿ ಸರ್ಕಾರ ಹಲವು ಕ್ರಮ ಕೈಗೊಂಡಿದೆ. ದೆಹಲಿ ವಾಸಿಗಳು ಹಲವು ತ್ಯಾಗ ಮಾಡಿದ್ದಾರೆ. ಅವರದಲ್ಲದ ತಪ್ಪಿಗೆ ದೆಹಲಿ ಅನುಭವಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
ಶನಿವಾರ ದೆಹಲಿಯ ಕೆಲ ಭಾಗದಲ್ಲಿ ಮಳೆಯಾಗಿ, ಗಾಳಿಯ ವೇಗ ಹೆಚ್ಚಾಗಿದ್ದರಿಂದ 'ತುರ್ತು' ಮಟ್ಟಕ್ಕೆ ಮಾಲಿನ್ಯದ ಪ್ರಮಾಣ ತಲುಪಿತು. ದೆಹಲಿಯಲ್ಲಿ ಅರೋಗ್ಯ ತುರ್ತು ಸ್ಥಿತಿ ಘೋಷಿಸುವಮ್ತೆ ಸುಪ್ರೀಂ ಕೋರ್ಟ್ ನಿಂದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ನವೆಂಬರ್ ಐದನೇ ತಾರೀಕಿನ ತನಕ ಶಾಲೆಗಳಿಗೆ ರಜಾ ಘೋಷಿಸಿದ್ದು ಮತ್ತು ದೆಹಲಿ ಹಾಗೂ ಸುತ್ತಮುತ್ತಲ ನಗರಗಳಲ್ಲಿ ನಿರ್ಮಾಣ ಕಾರ್ಯ ನಡೆಸದಂತೆ ನಿಷೇಧ ಹೇರಲಾಗಿದೆ.