ದೆಹಲಿ: ನವೆಂಬರ್ 9ರ ಮಧ್ಯರಾತ್ರಿಯಿಂದ ಎಲ್ಲಾ ರೀತಿಯ ಪಟಾಕಿಗಳಿಗೆ ನಿಷೇಧ
ನವದೆಹಲಿ, ನವೆಂಬರ್ 09: ದೆಹಲಿ-ಎನ್ಸಿಆರ್ನಲ್ಲಿ ನವೆಂಬರ್ 9ರ ಮಧ್ಯರಾತ್ರಿಯಿಂದ ಎಲ್ಲಾ ರೀತಿಯ ಪಟಾಕಿಗಳ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಆದೇಶ ಹೊರಡಿಸಿದೆ.
ನವೆಂಬರ್ 9ರ ಮಧ್ಯರಾತ್ರಿಯಿಂದ ನವೆಂಬರ್ 30ರವರೆಗೂ ಪಟಾಕಿಗಳಿಗೆ ನಿಷೇಧ ಹೇರಲಾಗಿದೆ.ದೇಶದ ಯಾವ್ಯಾವ ರಾಜ್ಯ ಅಥವಾ ನಗರಗಳಲ್ಲಿ ವಾಯುಮಾಲಿನ್ಯ ಹೆಚ್ಚಿದೆ ಅಂತಹ ನಗರಗಳಲ್ಲಿ ಪಟಾಕಿ ಬಳಕೆಯನ್ನು ನಿಷೇಧಿಸಲಾಗಿದೆ.
ಹೊಗೆಗೂಡಾದ ದೆಹಲಿ, ಪ್ರತಿ ದಿನ ಕ್ಷೀಣಿಸುತ್ತಿದೆ ವಾಯುಗುಣಮಟ್ಟ
ಯಾವ ನಗರಗಳಲ್ಲಿ ಗಾಳಿಯ ಗುಣಮಟ್ಟ ಉತ್ತಮವಾಗಿದ್ದು, ವಾಯು ಮಾಲಿನ್ಯ ಕಡಿಮೆ ಇರುವುದೋ ಅಂತಹ ನಗರಗಳಲ್ಲಿ ಪಟಾಕಿ ಮಾರಾಟಕ್ಕೆ ಅನುಮತಿ ನೀಡಲಾಗುವುದು.
ಕಳೆದ ಕೆಲವು ದಿನಗಳಿಂದ ವಾಯುಮಾಲಿನ್ಯ ದಿಂದಾಗಿ ದೆಹಲಿ,ಎನ್ಸಿಆರ್ನಲ್ಲಿ ಜನರ ಸ್ಥಿತಿ ಗಂಭೀರವಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿ ಪ್ರಕಾರ ಸೋಮವಾರ ದೆಹಲಿಯ ಗಾಳಿಯ ಗುಣಮಟ್ಟ ಮತ್ತಷ್ಟು ಕ್ಷೀಣಿಸಿದೆ. ದೆಹಲಿಯ ಆನಂದ್ ಇಲಾಖೆಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ 484 ಎಕ್ಯೂಐ, ಮುಂಡಕಾದಲ್ಲಿ 470, ಓಖ್ಲಾದಲ್ಲಿ 465, ವಾಜಿರ್ಪುರದಲ್ಲಿ 468 ಎಕ್ಯೂಐ ಇದೆ.
ರಾಷ್ಟ್ರ ರಾಜಧಾನಿ ದೆಹಲಿಯ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು ವಾಯುಗುಣಮಟ್ಟ ಅತ್ಯಂತ ಕಳಪೆಮಟ್ಟಕ್ಕೆ ಬಂದು ತಲುಪಿದೆ. ಸೋಮವಾರ ಬೆಳಗ್ಗೆ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು ಜನರು ಹೈರಾಣಾಗಿದ್ದಾರೆ. ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆಯಾದರು ಪರಿಸ್ಥಿತಿಯನ್ನು ತಹಬದಿಗೆ ತರುವ ಸರಕಾರದ ಪ್ರಯತ್ನ ಫಲನೀಡುತ್ತಿಲ್ಲ.