ಲಾಕ್ಡೌನ್ ವೇಳೆ 198 ವಲಸೆ ಕಾರ್ಮಿಕರ ಅಪಘಾತದಲ್ಲಿ ಸಾವು
ದೆಹಲಿ, ಜೂನ್ 2: ಕೊರೊನಾ ವೈರಸ್ ಲಾಕ್ಡೌನ್ ವೇಳೆ ದೇಶಾದ್ಯಂತ 198 ಜನ ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಸೇವ್ ಲೈಫ್ ಫೌಂಡೇಶನ್ ತಿಳಿಸಿದೆ.
Recommended Video
ಮಾರ್ಚ್ 25 ರಿಂದ ಮೇ 31 ರವರೆಗೂ ದೇಶಾದ್ಯಂತ 1461 ಅಪಘಾತಗಳು ನಡೆದಿದೆ ಎಂದು ವರದಿ ಹೇಳುತ್ತಿದೆ. ಒಟ್ಟು 750 ಜನರು ಈ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ಅದರಲ್ಲಿ 198 ಜನರು ವಲಸೆ ಕಾರ್ಮಿಕರು ಇದ್ದಾರೆ. 1390 ಜನರು ಅಪಘಾತಗಳಿಂದ ಗಾಯಗೊಂಡಿದ್ದಾರೆ ಎಂದು ರಸ್ತೆ ಸುರಕ್ಷತೆ ಎನ್ಜಿಒ ಸೇವ್ಲೈಫ್ ಫೌಂಡೇಶನ್ ಮಾಹಿತಿ ನೀಡಿದೆ.
ಲಾಕ್ಡೌನ್ ವೇಳೆ ಅಪಘಾತದಿಂದ ನೂರಾರು ವಲಸೆ ಕಾರ್ಮಿಕರು ಸಾವು
ಮನೆಗೆ ಹಿಂತಿರುಗುವ ವೇಳೆ ಶೇಕಡಾ 26.4% ರಷ್ಟು ವಲಸೆ ಕಾರ್ಮಿಕರು ಸಾವನ್ನಪ್ಪಿದ್ದರೆ, ಅಗತ್ಯ ಪೂರೈಕೆಗಳಲ್ಲಿ ತೊಡಗಿಕೊಂಡಿದ್ದ 5.3% ರಷ್ಟು ಕಾರ್ಮಿಕರು ಮೃತಪಟ್ಟಿದ್ದಾರೆ. ಇನ್ನುಳಿದಂತೆ ಇತರೆ ಕಾರಣಗಳಿಂದ ಸಂಚರಿಸುತ್ತಿದ್ದ ಶೇಕಡಾ 68.3 ರಷ್ಟು ಜನರು ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸೇವ್ಲೈಫ್ ಫೌಂಡೇಶನ್ ಹೇಳಿದೆ.
ಉತ್ತರ ಪ್ರದೇಶ (94), ಮಧ್ಯಪ್ರದೇಶ (38), ಬಿಹಾರ (16), ತೆಲಂಗಾಣ (11) ಮತ್ತು ಮಹಾರಾಷ್ಟ್ರ (9) ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಅಂತರರಾಜ್ಯ ಸಂಚಾರಕ್ಕೆ ನಿರ್ಬಂಧ ಹೇರಿದ್ದ ಕಾರಣ ಹೆದ್ದಾರಿಯಲ್ಲಿ ಕಾಲ್ನಡಿಗೆ ಮೂಲಕ ಜನರು ಸ್ವಂತ ಊರು ಸೇರಲು ಮುಂದಾಗಿದ್ದರು. ಈ ವೇಳೆಯಲ್ಲಿ ಹೆಚ್ಚು ಆಕ್ಸಿಡೆಂಟ್ ನಡೆದಿದೆ ಎಂದು ವರದಿ ಹೇಳಿದೆ.
ಇನ್ನು ದೇಶದ ಪ್ರಮುಖ ನಗರಗಳಲ್ಲಿ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರು ಸ್ವಂತ ರಾಜ್ಯಗಳಿಗೆ ಹೋಗಲು ಕೇಂದ್ರ ಸರ್ಕಾರ ಶ್ರಮಿಕ್ ರೈಲು ವ್ಯವಸ್ಥೆ ಮಾಡಿತ್ತು. ಇಲ್ಲಿಯವರೆಗೆ 56 ಲಕ್ಷಕ್ಕೂ ಹೆಚ್ಚು ವಲಸಿಗರನ್ನು ಶ್ರಮಿಕ್ ವಿಶೇಷ ರೈಲುಗಳಲ್ಲಿ ಮನೆಗೆ ಕಳುಹಿಸಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.