ಟೂಲ್ಕಿಟ್ ಪ್ರಕರಣ: ರಮಣ್, ಪಾತ್ರಾ ವಿರುದ್ದದ ತನಿಖೆ ತಡೆ ಪ್ರಶ್ನಿಸಿದ ಅರ್ಜಿ ವಜಾ
ನವದೆಹಲಿ, ಸೆಪ್ಟೆಂಬರ್ 22: ಛತ್ತೀಸ್ಗಢ ಸರ್ಕಾರವು ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಮುಖಂಡ ಸಂಬಿತ್ ಪಾತ್ರಾ ಹಾಗೂ ಛತ್ತೀಸ್ಗಢ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ವಿರುದ್ದದ ತನಿಖೆಗೆ ಛತ್ತೀಸ್ಗಢ ಹೈಕೋರ್ಟ್ ತಡೆ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಹಿಮಾ ಕೊಹ್ಲಿ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠವು ಛತ್ತೀಸ್ಗಢ ಸರ್ಕಾರದ ಈ ಅರ್ಜಿಯನ್ನು ವಜಾ ಮಾಡಿದ್ದಾರೆ.
ಪ್ರಧಾನಿ ಯುಎಸ್ ಪ್ರವಾಸ: 'ಸಂಬಂಧ ಗಟ್ಟಿಗೊಳಿಸಲು ಉತ್ತಮ ಅವಕಾಶ' ಎಂದ ಮೋದಿ
ಛತ್ತೀಸ್ಗಢ ಎನ್ಎಸ್ಯುಐ ಅಧ್ಯಕ್ಷ ಆಕಾಶ್ ಶರ್ಮಾ, ಬಿಜೆಪಿ ಮುಖಂಡ ಸಂಬಿತ್ ಪಾತ್ರಾ ಹಾಗೂ ಛತ್ತೀಸ್ಗಢ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ವಿರುದ್ದ ಟೂಲ್ ಕಿಟ್ ಬಗ್ಗೆ ಸುಳ್ಳು ಟ್ವೀಟ್ ಮಾಡಿದ್ದಾರೆ ಎಂದು ಆರೋಪ ಮಾಡಿ ಪ್ರಕರಣ ದಾಖಲು ಮಾಡಿದ ಒಂದು ದಿನದ ನಂತರ ಇವರಿಬ್ಬರ ವಿರುದ್ದವೂ ಎಫ್ಐಆರ್ ದಾಖಲು ಮಾಡಲಾಗಿದೆ. ಛತ್ತೀಸ್ಗಢ ಎನ್ಎಸ್ಯುಐ ಅಧ್ಯಕ್ಷ ಆಕಾಶ್ ಶರ್ಮಾ, "ರಮಣ್ ಸಿಂಗ್ ಹಾಗೂ ಸಂಬಿತ್ ಪಾತ್ರಾ ಕಾಂಗ್ರೆಸ್ ದೇಶವನ್ನು ಅಪಮಾನ ಮಾಡುವ ನಿಟ್ಟಿನಲ್ಲಿ ಟೂಲ್ ಕಿಟ್ ಅನ್ನು ರಚನೆ ಮಾಡಿದೆ ಎಂದು ಆರೋಪ ಮಾಡಿ ದೂರು ದಾಖಲು ಮಾಡಿದ್ದರು.
ಶರ್ಮಾ ದೂರಿನಂತೆ ಪೊಲೀಸರು ರಮಣ್ ಸಿಂಗ್ ವಿರುದ್ದ ಐಪಿಸಿ ಸೆಕ್ಷನ್ 504 (ಶಾಂತಿಗೆ ಭಂಗ ತರುವ ಉದ್ದೇಶದ ಅಪಮಾನ) 505 (ಸಾರ್ವಜನಿಕ ಕಿಡಿಗೇಡಿತನ), 469 (ಫೋರ್ಜರಿ) ಮತ್ತು 188 (ಸಾರ್ವಜನಿಕ ಅಧಿಕಾರಿಯ ಆದೇಶ ಪಾಲನೆಗೆ ಅವಿಧೇಯತೆ) ಅಡಿಯಲ್ಲಿ ಪ್ರಕರಣಗಳನ್ನು ದಾಖಲು ಮಾಡಿದ್ದಾರೆ.
'ನಮ್ಮ ಲಸಿಕೆ ಪ್ರಮಾಣಪತ್ರದಲ್ಲಿ ಯಾವುದೇ ಸಮಸ್ಯೆ ಇಲ್ಲ': ಯುಕೆಗೆ ಭಾರತ
ಹಾಗೆಯೇ "ಬಿಜೆಪಿ ನಾಯಕರುಗಳು ಈ ಟೂಲ್ ಕಿಟ್ ವಿಚಾರದಲ್ಲಿ ಸುಳ್ಳು ಮಾಹಿತಿಯನ್ನು ಹರಡುತ್ತಿದ್ದಾರೆ, ಸುಳ್ಳು ಆರೋಪವನ್ನು ಮಾಡುತ್ತಿದ್ದಾರೆ," ಎಂದು ಆಕಾಶ್ ಶರ್ಮಾ ಆರೋಪಿಸಿದ್ದಾರೆ. ಈ ವಿಚಾರದಲ್ಲಿ ಬಿಜೆಪಿ ನಾಯಕರು ಛತ್ತೀಸ್ಗಢ ಹೈಕೋರ್ಟ್ ಮೆಟ್ಟಿಲು ಏರಿದ್ದರು.
ಈ ಪ್ರಕರಣದ ವಿಚಾರಣೆಯನ್ನು ನಡೆಸಿದ ಛತ್ತೀಸ್ಗಢ ಹೈಕೋರ್ಟ್ ಸಂಬಿತ್ ಪಾತ್ರಾ ಹಾಗೂ ರಮಣ್ ಸಿಂಗ್ ವಿರುದ್ದದ ತನಿಖೆಗೆ ತಡೆಯನ್ನು ನೀಡಿತ್ತು. ಹಾಗೆಯೇ ಛತ್ತೀಸ್ಗಢ ಹೈಕೋರ್ಟ್ ಜೂನ್ 11 ರಂದು ನೀಡಿದ ತನ್ನ ತೀರ್ಪಿನಲ್ಲಿ, "ರಮಣ್ ಸಿಂಗ್ ಹಾಗೂ ಸಂಬಿತ್ ಪಾತ್ರಾ ವಿರುದ್ದ ದಾಖಲಾಗಿರುವ ಎಫ್ಐಆರ್ನಲ್ಲಿ ಮಾಡಿರುವ ಆರೋಪಗಳಲ್ಲಿ ಯಾವುದೇ ಸಾಮಾಜಿಕ ಶಾಂತಿಗೆ ಧಕ್ಕೆ ಉಂಟು ಮಾಡುವ, ಜನರ ನೆಮ್ಮದಿಗೆ ಭಂಗ ತರುವ ವಿಚಾರಗಳು ಕಂಡು ಬಂದಿಲ್ಲ. ಇದು ಬರೀ ಎರಡು ರಾಜಕೀಯ ಪಕ್ಷಗಳ ನಡುವಿನ ಕಾದಾಟ," ಎಂದು ಹೇಳಿತ್ತು.
"ಕೆಟ್ಟ ಉದ್ದೇಶದಿಂದ ಈ ಆರೋಪವನ್ನು ಮಾಡಿ ದೂರು ನೀಡಲಾಗಿದೆ. ಈ ಹಿನ್ನೆಲೆ ತನಿಖೆಯನ್ನು ಮುಂದುವರಿಸಿದರೆ ಕಾನೂನು ಪ್ರಕ್ರಿಯೆಯು ದುರ್ಬಲವಾಗುತ್ತದೆ," ಎಂದು ಕೂಡಾ ನ್ಯಾಯಾಲಯ ನ್ಯಾಯಾಮೂರ್ತಿ ನರೇಂದ್ರ ಕುಮಾರ್ ವ್ಯಾಸ್ ಹೇಳಿದ್ದರು. ಈ ಬಗ್ಗೆ ಛತ್ತೀಸ್ಗಢ ಹೈಕೋರ್ಟ್ ಎರಡು ಮಧ್ಯಂತರ ಪರಿಹಾರದ ಪ್ರತ್ಯೇಕ ಆದೇಶಗಳನ್ನು ನೀಡಿತ್ತು.
ಈ ಹಿನ್ನೆಲೆ ಜೂನ್ 11 ರಂದು ಸುಪ್ರೀಂ ಕೋರ್ಟ್ ಕದ ತಟ್ಟಿದ ಛತ್ತೀಸ್ಗಢ ಸರ್ಕಾರ, "ಹೈಕೋರ್ಟ್ ತಪ್ಪಾಗಿ ರಮಣ್ ಸಿಂಗ್ಗೆ ಮಧ್ಯಂತರ ಪರಿಹಾರವನ್ನು ನೀಡಿದೆ," ಎಂದು ಹೇಳಿದೆ. "ಛತ್ತೀಸ್ಗಢ ಹೈಕೋರ್ಟ್ ವಿನಾಕಾರಣ ಕ್ಷುಲ್ಲಕ ಅರ್ಜಿಯನ್ನು ಮಾನ್ಯ ಮಾಡಿ ತನಿಖೆಗೆ ತಡೆ ನೀಡಿದೆ," ಎಂದು ಛತ್ತೀಸ್ಗಢ ಸರ್ಕಾರ ಹೇಳಿದೆ.
ಛತ್ತೀಸ್ಗಢ ಸರ್ಕಾರವು ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಮುಖಂಡ ಸಂಬಿತ್ ಪಾತ್ರಾ ಹಾಗೂ ಛತ್ತೀಸ್ಗಢ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ವಿರುದ್ದದ ತನಿಖೆಗೆ ಛತ್ತೀಸ್ಗಢ ಹೈಕೋರ್ಟ್ ತಡೆ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಬುಧವಾರ ಸುಪ್ರೀಂ ಕೋರ್ಟ್ ವಜಾ ಮಾಡಿದೆ.
"ನಾವು ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಲು ಬಯಸುವುದಿಲ್ಲ. ಈ ವಿಷಯದಲ್ಲಿ ಹೈಕೋರ್ಟ್ ತೀರ್ಮಾನವನ್ನು ಕೈಗೊಳ್ಳಲಿ. ಈ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ," ಎಂದು ಹೇಳಿದೆ.
(ಒನ್ ಇಂಡಿಯಾ ಸುದ್ದಿ)