ಟೂಲ್ಕಿಟ್ ಪ್ರಕರಣ; ಮತ್ತೆ ದಿಶಾ ರವಿಗೆ ಪೊಲೀಸ್ ಕಸ್ಟಡಿ
ನವದೆಹಲಿ, ಫೆಬ್ರವರಿ 22: ಟೂಲ್ಕಿಟ್ ಪ್ರಕರಣದಲ್ಲಿ ಬಂಧಿತರಾಗಿರುವ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರನ್ನು ಸೋಮವಾರ ದೆಹಲಿ ನ್ಯಾಯಾಲಯ ಒಂದು ದಿನದ ಪೊಲೀಸ್ ಕಸ್ಟಡಿಗೆ ಅವಕಾಶ ನೀಡಿದೆ.
ರೈತರ ಪ್ರತಿಭಟನೆ ಸಂಬಂಧ ಈಚೆಗೆ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಹಂಚಿಕೊಂಡಿದ್ದ ಟೂಲ್ಕಿಟ್ಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಬೆಂಗಳೂರಿನ ದಿಶಾ ರವಿ ಅವರನ್ನು ಬಂಧಿಸಿದ್ದರು. ದಿಶಾ ರವಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಶನಿವಾರ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯ, ತೀರ್ಪನ್ನು ಮಂಗಳವಾರಕ್ಕೆ ಕಾಯ್ದಿರಿಸಿದೆ.
ಟೂಲ್ಕಿಟ್ ಪ್ರಕರಣ; ದಿಶಾ ರವಿಗೆ ಸದ್ಯಕ್ಕೆ ಜಾಮೀನಿಲ್ಲ
ಮೂರು ದಿನಗಳ ನ್ಯಾಯಾಂಗ ಬಂಧನದ ಅವಧಿ ಮುಗಿದ ನಂತರ ಸೋಮವಾರ ದಿಶಾ ರವಿ ನ್ಯಾಯಾಲಯದಲ್ಲಿ ಹಾಜರಾಗಿದ್ದು, ಪೊಲೀಸರು ಈ ಸಂದರ್ಭ ಹೊಸದಾಗಿ ಐದು ದಿನಗಳ ಕಸ್ಟಡಿಗೆ ಮನವಿ ಮಾಡಿದ್ದರು. ಆದರೆ ನ್ಯಾಯಾಲಯ ಒಂದು ದಿನದ ಪೊಲೀಸ್ ಕಸ್ಟಡಿಗೆ ಅವಕಾಶ ನೀಡಿದೆ.
ಈ ಪ್ರಕರಣದಲ್ಲಿ ಮತ್ತಿಬ್ಬರಾದ ನಿಖಿತಾ ಜೇಕಬ್ ಹಾಗೂ ಶಾಂತನು ಮುಲುಕ್ ಅವರನ್ನು ವಿಚಾರಣೆ ನಡೆಸಬೇಕಿರುವುದರಿಂದ ದಿಶಾ ರವಿ ಅವರ ವಿಚಾರಣೆಗೆ ಐದು ದಿನಗಳ ಕಸ್ಟಡಿ ಅಗತ್ಯವಿದೆ ಎಂದು ಪೊಲೀಸರು ಬೇಡಿಕೆ ಇಟ್ಟಿದ್ದರು. ಇದಕ್ಕೆ ದಿಶಾ ಪರ ವಕೀಲ ಸಿದ್ಧಾರ್ಥ ಅಗರ್ವಾಲ್ ವಿರೋಧಿಸಿದ್ದು, ಈಗಾಗಲೇ ಪೊಲೀಸರು ದಿಶಾ ವಿಚಾರಣೆ ನಡೆಸಿದ್ದಾರೆ. ಜೈಲಿನಲ್ಲಿಯೇ ವಿಚಾರಣೆ ನಡೆಸಬಹುದು. ಕಸ್ಟಡಿಗೆ ತೆಗೆದುಕೊಳ್ಳುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದ್ದರು.
ದಿಶಾ ಜಾಮೀನಿನ ಕುರಿತು ಮಂಗಳವಾರ ತೀರ್ಪು ಕೂಡ ಬರಲಿದೆ ಎಂದು ವಾದಿಸಿದರು. ಫೆಬ್ರವರಿ 13ರಂದು ದಿಶಾ ರವಿ ಬಂಧನವಾಗಿದ್ದು, ಪ್ರಾಥಮಿಕವಾಗಿ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು.