ಟೋಲ್ ರದ್ದತಿ ವಿಳಂಬ, ದೇಶಾದ್ಯಂತ ಲಾರಿ ಮುಷ್ಕರ
ನವದೆಹಲಿ, ಆಗಸ್ಟ್, 29 : ಟೋಲ್ ರದ್ದತಿ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಅಖಿಲ ಭಾರತ ವಾಹನಗಳ ಸಂಘಟನೆ (AIMTC) ದೇಶಾದ್ಯಂತ ಅಕ್ಟೋಬರ್ 1 ರಿಂದ ಮುಷ್ಕರ ನಡೆಸಲು ತೀರ್ಮಾನ ತೆಗೆದುಕೊಂಡಿದೆ.
ಸುದೀರ್ಘ ಕಾಲದಿಂದ ಇರುವ ಟಿಡಿಎಸ್ ಮತ್ತು ಟೋಲ್ ರದ್ದತಿ ಬೇಡಿಕೆಯನ್ನು ಪೂರೈಸಲು ಸಾರಿಗೆ ಸಚಿವಾಲಯ ವಿಫಲವಾದ ಕಾರಣ ಎಐಎಂಟಿಸಿ ಪ್ರತಿಭಟನೆ ಕೈಗೊಳ್ಳಲು ಮುಂದಾಗಿದೆ. ಇದರಲ್ಲಿ 93 ಲಕ್ಷ ಸರಕು ಸಾಗಾಣೆ ವಾಹನ, 50 ಲಕ್ಷ ಬಸ್ ಮತ್ತು ಪ್ರವಾಸಿ ವಾಹನಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿದೆ ಎಂದು ಎಐಎಂಟಿಸಿ ಅಧ್ಯಕ್ಷ ಭೀಮ್ ವಾದ್ವಾ ಹೇಳಿದ್ದಾರೆ.[ಸ್ಥಳೀಯರು ಟೋಲ್ ಕಟ್ಟಬೇಕಿಲ್ಲ: ಹೈಕೋರ್ಟ್]
ಏನಿದು ಟೋಲ್ ಸಮಸ್ಯೆ?
ಟೋಲ್ ಪ್ಲಾಜಾಗಳನ್ನು ತೆರವುಗೊಳಿಸಿದರೆ ತಡೆ ರಹಿತ ಸಾರಿಗೆ ಸಂಚಾರ ಸಾಧ್ಯವಾಗಲಿದೆ. ಟೋಲ್ ನಲ್ಲಿ ಕಾಯುವುದರಿಂದ ಉಳಿಯುವ ಇಂಧನ ವರ್ಷಕ್ಕೆ 87,000 ಕೋಟಿ ಆಗುತ್ತದೆ. ಅಂದರೆ ದೇಶದ ಜಿಡಿಪಿಯ 3% ಉಳಿತಾಯವಾಗಲಿದೆ.
ಟೋಲ್ ಸಂಗ್ರಹ ಅವೈಜ್ಞಾನಿಕ?
ಅವೈಜ್ಞಾನಿಕ ಟೋಲ್ ಟ್ರಾಕ್ ಸಂಗ್ರಹದಿಂದ ಚಾಲಕರು ತೊಂದರೆ ಎದುರಿಸುತ್ತಿದ್ದಾರೆ. ಇದನ್ನು ತಡೆಗಟ್ಟಲು ರಾಷ್ಟ್ರೀಯ ಪರವಾನಗಿ ಮಾದರಿಯಲ್ಲಿ ವರ್ಷಕ್ಕೆ ಒಂದು ಬಾರಿ ಅಥವಾ 4 ಬಾರಿ ಮಾತ್ರ ಟೋಲ್ ಸಂಗ್ರಹಿಸಬೇಕು ಎಂದು ಸಂಘಟನೆ ಬೇಡಿಕೆ ಇರಿಸಿದೆ. ಆದರೆ ಇದಕ್ಕೆ ಸರ್ಕಾರ ಒಪ್ಪುತ್ತಿಲ್ಲ. ಪ್ರಸ್ತುತ ಸರ್ಕಾರಕ್ಕೆ ಟೋಲ್ ನಿಂದ 14,000 ಕೋಟಿ ಆದಾಯ ಸಂಗ್ರಹವಾಗುತ್ತಿದೆ.
ವಾಹನಗಳಿಗೆ ಏಕರೂಪ ಶುಲ್ಕ ವಿಧಿಸಿ
ಸಾರ್ವಜನಿಕ ಸೇವಾ ವಾಹನಗಳ ಮೇಲೆ ಏಕರೂಪ ಉತ್ಪಾದನಾ ಶುಲ್ಕ ಜಾರಿಗೆ ತರಬೇಕೆಂದು ಇತ್ತೀಚೆಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ನೀತಿ ಜಾರಿಗೆ ಬಂದಲ್ಲಿ ಎಲ್ಲಾ ವಾಹನಗಳಿಗೂ ಒಂದೇ ದರದ ಉತ್ಪಾದನಾ ಶುಲ್ಕ ನಿಗದಿಯಾಗಲಿದೆ.
ಜನಸಾಮಾನ್ಯರ ಮೇಲೆ ಹೊರೆ
ಎಐಎಂಟಿಸಿ ಅಕ್ಟೋಬರ್ ಒಂದರಿಂದ ಲಾರಿ ಮುಷ್ಕರ ಕೇಂಗೊಂಡಲ್ಲಿ ಸರಕು ಸಾಗಾಣಿಕೆ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದ್ದು, ಇದರಿಂದ ಜನಸಾಮಾನ್ಯರ ಮೇಲೆ ಭಾರೀ ಹೊರೆ ಬೀಳುವ ಸಂಭವವಿದೆ. ಹಾಗಾಗಿ ಕೇಂದ್ರ ಸರ್ಕಾರ ಟೋಲ್ ರದ್ದತಿ ಬಗ್ಗೆ ಶೀಘ್ರ ಕ್ರಮ ಕೈಗೊಂಡು ಜನಸಾಮಾನ್ಯರಿಗೆ ಏರ್ಪಡುವ ತೊಂದರೆ ತಪ್ಪಿಸುವತ್ತ ಗಮನ ಹರಿಸಬೇಕಾಗಿದೆ.