ಕೇಂದ್ರದ ಎದೆಯಲ್ಲಿ ಭಯ: ರೈತರ ಬೆದರಿಸಲು ಶೌಚಾಲಯ, ನೀರು, ವಿದ್ಯುತ್ ವ್ಯತ್ಯಯ!?
ನವದೆಹಲಿ, ಫೆಬ್ರವರಿ.04: ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಪ್ರತಿನಿತ್ಯ ಬದುಕುವುದೇ ಕಷ್ಟ ಎನ್ನುವಂತಾ ವಾತಾವರಣ ಸೃಷ್ಟಿಯಾಗಿದೆ. ದೆಹಲಿಯ ಗಡಿಯಲ್ಲಿ ಪ್ರತಿಭಟನಾ ಸ್ಥಳ ಮತ್ತು ಸುತ್ತಮುತ್ತಲಿನ ರಸ್ತೆಗಳ ಚಿತ್ರಣ ಸಂಪೂರ್ಣ ಬದಲಾಗಿದೆ.
ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರನ್ನು ತಡೆಯುವುದಕ್ಕೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಸಿಮೆಂಟ್ ರಸ್ತೆ ಮೇಲೆ ಕಬ್ಬಿಣದ ಸರಳು, ಕಾಂಕ್ರೀಟ್ ಗೋಡೆಗಳು, ಸಿಮೆಂಟ್ ರಸ್ತೆಗಳಲ್ಲಿ ತಲೆ ಎತ್ತಿರುವ ಮೊಳೆಗಳು ಇದರ ಜೊತೆಗೆ ಹಂತ ಹಂತವಾಗಿ ಬ್ಯಾರಿಕೇಡ್ ಹಾಕಲಾಗಿದೆ.
ದೆಹಲಿ ಹಿಂಸಾಚಾರ: ಕೆಂಪುಕೋಟೆಯಲ್ಲಿ ಸಿಖ್ ಧ್ವಜ ಹಾರಿಸಿದ ಆರೋಪಿ ಬಂಧನ
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಕುಡಿಯುವ ನೀರು, ವಿದ್ಯುತ್, ಶೌಚಾಲಯ ಸೇರಿದಂತೆ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೇ ಪರದಾಡುವಂತಾ ಸ್ಥಿತಿ ನಿರ್ಮಾಣವಾಗಿದೆ. ಸಂದಿಗ್ಧ ಸ್ಥಿತಿಯಲ್ಲಿರುವ ರೈತರ ನೋವಿನ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.
ಬಟ್ಟೆ ತೊಳೆಯುವುದಕ್ಕೆ ನೀರು, ವಿದ್ಯುತ್ ಕೊರತೆ
ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಬಟ್ಟೆಗಳನ್ನು ತೊಳೆಯುವುದಕ್ಕಾಗಿಯೇ ಅಲ್ಲಿ ವಾಶಿಂಗ್ ಮಷಿನ್ ವೊಂದನ್ನು ತೆಗೆದುಕೊಂಡು ಹೋಗಲಾಗಿದೆ. ಸದ್ಯದ ಸ್ಥಿತಿಯಲ್ಲಿ ಪ್ರತಿನಿತ್ಯ 100 ಜನರ ಬಟ್ಟೆ ತೊಳೆಯಬೇಕಿತ್ತು. ಆದರೆ ನೀರು ಸಿಗುತ್ತಿಲ್ಲ, ವಿದ್ಯುತ್ ಸರಿಯಾಗಿ ಪೂರೈಕೆ ಆಗುತ್ತಿಲ್ಲ. ಈ ಹಿನ್ನೆಲೆ 100 ಜನರ ಬದಲಿಗೆ ಒಂದು ದಿನಕ್ಕೆ ಕೇವಲ 10 ಜನರ ಬಟ್ಟೆಗಳನ್ನು ಮಾತ್ರ ತೊಳೆಯುವಂತಾ ಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಹೇಳುತ್ತಿದ್ದಾರೆ.
ಶೌಚಾಲಯಗಳಿದ್ದರೂ ನೀರು ಸಿಗುತ್ತಿಲ್ಲ"
ರೈತರ ಪ್ರತಿಭಟನಾ ಸ್ಥಳದಲ್ಲಿ ಸ್ಥಾಪಿತ ಮತ್ತು ಸಂಚಾರಿ ಶೌಚಾಲಯಗಳೇನೋ ಇವೆ. ಆದರೆ ರೈತರು ಬಳಸುವುದಕ್ಕೆ ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆಯೇ ಇಲ್ಲ. ನೀರು ಪೂರೈಸುವುದರಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ನೀರು ಇಲ್ಲದ ಮೇಲೆ ಅಂತಹ ಶೌಚಾಲಯಗಳನ್ನು ಹೇಗೆ ತಾನೇ ಬಳಸುವುದಕ್ಕೆ ಸಾಧ್ಯವಾಗುತ್ತದೆ ಎನ್ನುವುದು ಪ್ರತಿಭಟನಾನಿರತ ರೈತರ ಪ್ರಶ್ನೆಯಾಗಿದೆ.
ಕತ್ತಲು ಕವಿದ ಮೇಲೆ ಶೌಚಾಲಯಕ್ಕೆ ಹೋಗುವ ಸ್ಥಿತಿ
ದೆಹಲಿ ಗಡಿಯಲ್ಲಿ ಪ್ರತಿಭಟನೆಗೆ ಕುಳಿತಿರುವ ಮಹಿಳೆಯರಿಗೂ ಶೌಚಾಲಯದ ವ್ಯವಸ್ಥೆಗಳಿಲ್ಲ. ಅಲ್ಲೊಂದು ಇಲ್ಲೊಂದು ಇರುವ ಶೌಚಾಲಯಗಳಿಗೆ ಸರಿಯಾದ ರೀತಿ ನೀರು ಪೂರೈಕೆ ಆಗುತ್ತಿಲ್ಲ. ಹೀಗಾಗಿ ಮಹಿಳೆಯರು ಬಯಲು ಶೌಚಾಲಯವನ್ನೇ ನೆಚ್ಚುಕೊಳ್ಳುವಂತಾಗಿದೆ. ಕತ್ತಲು ಕವಿದ ನಂತರದಲ್ಲೇ ಮಹಿಳೆಯರು ಶೌಚಾಲಯಕ್ಕಾಗಿ ಬಯಲು ಹುಡುಕಿಕೊಂಡು ಹೋಗಬೇಕಿದೆ ಎಂದು ಹರಿಯಾಣ ಮೂಲದ ಪ್ರತಿಭಟನಾ ನಿರತ ರೈತ ಮಹಿಳೆಯೊಬ್ಬರು ಹೇಳಿದ್ದಾರೆ. ಮಹಿಳೆಯರಷ್ಟೇ ಅಲ್ಲ ವೃದ್ಧರು, ಅನಾರೋಗ್ಯ ಪೀಡತರು ಕೂಡಾ ಶೌಚಾಲಯ ವ್ಯವಸ್ಥೆಯಿಲ್ಲದೇ ಪರದಾಡುತ್ತಿದ್ದಾರೆ.
"ಪ್ರಧಾನಿ ಮೋದಿ ಸರ್ಕಾರದ ಎದೆಯಲ್ಲಿ ಹೆಚ್ಚಿದ ಢವಢವ"
"ದೆಹಲಿಯಲ್ಲಿ ಕೃಷಿ ಸಂಬಂಧಿತ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಉಗ್ರ ಸ್ವರೂಪದ ಹೋರಾಟದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಎದೆಯಲ್ಲಿ ಢವಢವ ಹೆಚ್ಚಾಗಿದೆ. ಹೀಗಾಗಿ ಮೊದಲು ಇಂಟರ್ ನೆಟ್ ಸೇವೆ ಕಡಿತಗೊಳಿಸಿದರು. ಇದೀಗ ಪ್ರತಿಭಟನಾನಿರತ ರೈತರಿಗೆ ನೀರು, ವಿದ್ಯುತ್, ಶೌಚಾಲಯಗಳ ಸೌಲಭ್ಯವನ್ನು ನೀಡದೇ ಬೆದರಿಸುವ ಕೆಲಸವನ್ನು ಮಾಡಲಾಗುತ್ತಿದೆ. ರೈತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಕೇಂದ್ರ ಸರ್ಕಾರ ಸೋತಿದೆ ಎಂದು ಪ್ರತಿಭಟನಾನಿರತ ಪಂಜಾಬ್ ರೈತ ಹರ್ವಿಂದರ್ ಸಿಂಗ್ ಬಿಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರೈತರಿಗೆ ನೆರವು ನೀಡುವುದಕ್ಕೂ ಬಿಡುತ್ತಿಲ್ಲ
ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಕೆಲವು ಖಾಸಗಿ ಕಂಪನಿಗಳು ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕಾರ್ಯವನ್ನು ಮಾಡುತ್ತಿವೆ. ಆದರೆ ಅಷ್ಟರಿಂದ ರೈತರು ಎದುರಿಸುತ್ತಿರುವ ಸಮಸ್ಯೆಗಳು ಬಗೆಹರಿಯುವುದಿಲ್ಲ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರವು ರೈತರಿಗೆ ನೆರವು ನೀಡುವುದಾಗಿ ಭರವಸೆ ನೀಡಿದೆಯಾದರೂ ಅತಿಹೆಚ್ಚು ಬ್ಯಾರಿಕೇಡ್ ಗಳನ್ನು ಹಾಕಿರುವುದರಿಂದ ವಾಹನಗಳ ಸಂಚಾರವೂ ಸಾಧ್ಯವಾಗುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಘಾಜಿಪುರ್ ಗಡಿ ಪ್ರದೇಶದಲ್ಲಿ ಪೊಲೀಸ್ ಕಾವಲು
ಉತ್ತರ ಪ್ರದೇಶ ಮತ್ತು ದೆಹಲಿಯ ಗಡಿ ಪ್ರದೇಶದಲ್ಲಿರುವ ಘಾಜಿಪುರ್ ಗಡಿಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಪ್ರಾದೇಶಿಕ ಸಶಸ್ತ್ರ ಸಂರಚನೆ ಮತ್ತು ರಾಪಿಡ್ ಆಕ್ಟನ್ ಫೋರ್ಸ್ ಮತ್ತು ಪೊಲೀಸರು ಸೇರಿದಂತೆ ಸಾವಿರಾರು ಭದ್ರತಾ ಸಿಬ್ಬಂದಿಯನ್ನು ಘಾಜಿಪುರ್ ಗಡಿಯಲ್ಲಿ ನಿಯೋಜಿಸಲಾಗಿದೆ. ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನದಿಂದ ಭಾರತೀಯ ಕಿಸಾನ್ ಒಕ್ಕೂಟದ ರೈತರು ಇದೇ ಘಾಜಿಪುರ್ ಗಡಿ ಪ್ರದೇಶಕ್ಕೆ ಹರಿದು ಬರುತ್ತಿದ್ದಾರೆ. ಈ ಹಿನ್ನೆಲೆ ಸ್ಥಳದಲ್ಲಿ ಪರಿಸ್ಥಿತಿ ಮೇಲೆ ನಿಗಾ ವಹಿಸುವುದಕ್ಕಾಗಿ ಡ್ರೋನ್ ಕ್ಯಾಮರಾಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹೆದ್ದಾರಿಗೆ ಅಡ್ಡಲಾಗಿ ರೈತರನ್ನು ತಡೆಯುವ ನಿಟ್ಟಿನಲ್ಲಿ ಸಾಲು ಸಾಲಾಗಿ ವಿವಿಧ ಹಂತಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಒಂದರ ಮುಂದೆ ಒಂದರಂತೆ ನಾಲ್ಕೈದು ಸಾಲಿನಲ್ಲಿ ಬ್ಯಾರಿಕೇಡ್ ಹಾಕಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಕಬ್ಬಿಣದ ಸೆರಳುಗಳು ಸಿಂಘು ಗಡಿಯ ರಸ್ತೆ ಮೇಲೆ ತಲೆ ಎತ್ತಿವೆ
ದೆಹಲಿ ಪೊಲೀಸ್ ಸಿಬ್ಬಂದಿ ಭದ್ರತೆ ನಡುವೆ ಫೆಬ್ರವರಿ.01ರ ಸೋಮವಾರ ಸಿಮೆಂಟ್ ಗೋಡೆಗಳ ನಿರ್ಮಾಣ ಮಾಡಲಾಯಿತು. ಮುಖ್ಯ ಹೆದ್ದಾರಿಯ ಸಮೀಪದಲ್ಲೇ ಸಿಮೆಂಟ್ ತಡೆಗೋಡೆಗಳು ಮತ್ತು ಅದರ ನಡುವೆ ಕಬ್ಬಿಣದ ಸರಳುಗಳನ್ನು ಕೊಕ್ಕೆ ರೀತಿಯಲ್ಲಿ ಹಾಕಲಾಗಿದೆ. ಇನ್ನೊಂದು ಕಡೆಯಲ್ಲಿ ದೆಹಲಿ ಮತ್ತು ಹರಿಯಾಣಕ್ಕೆ ಹೊಂದಿಕೊಂಡಿರುವ ಸಿಂಘು ಗಡಿಯನ್ನು ತಾತ್ಕಾಲಿಕ ಸೀಮೆಂಟ್ ತಡೆಗೋಡೆಗಳ ಮೂಲಕ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಸಿಂಘು ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಹೆದ್ದಾರಿಯಲ್ಲಿ ತಾತ್ಕಾಲಿಕ ಗೋಡೆಯನ್ನು ನಿರ್ಮಿಸಲಾಗಿದೆ. ಇದರ ಹೊರತಾಗಿ ಹೆದ್ದಾರಿಯಿಂದ ಸ್ವಲ್ಪ ಒಳಭಾಗದ ಬೀದಿಗೆ ಅಡ್ಡಲಾಗಿ ಸಣ್ಣ ಕಂದಕಗಳನ್ನು ಸಹ ಅಗೆದು ಹಾಕಲಾಗಿದೆ. ಇದಲ್ಲದೇ ಎರಡೂ ಬದಿಗಳಲ್ಲಿ ಸಿಮೆಂಟ್ ಬ್ಯಾರಿಕೇಡ್ಗಳನ್ನು ಹಾಕಲಾಯಿತು.
ಸೀಮೆಂಟ್ ರಸ್ತೆ ಮೇಲೆ ಕಬ್ಬಿಣದ ಮೊಳೆಗಳು
ಹರಿಯಾಣ ಮತ್ತು ದೆಹಲಿ ಟಿಕ್ರಿ ಗಡಿ ಪ್ರದೇಶದಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ತಡೆಯುವ ಉದ್ದೇಶದಿಂದ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಸೀಮೆಂಟ್ ರಸ್ತೆಯ ಮೇಲೆ ರಸ್ತೆಗೆ ತೆರೆದುಕೊಂಡಿರುವಂತೆ ಕಬ್ಬಿಣದ ಸರಳುಗಳನ್ನು ಹಾಕಲಾಗಿದೆ. ಈ ರಸ್ತೆಯ ಮೇಲೆ ವಾಹನ ಸಂಚರಿಸುವುದಕ್ಕೆ ಸಾಧ್ಯವಿಲ್ಲದ ರೀತಿಯಲ್ಲಿ ರಸ್ತೆಯನ್ನು ತಾತ್ಕಾಲಿಕವಾಗಿ ಮಾರ್ಪಾಡು ಮಾಡಲಾಗಿದೆ.