ಜಯಲಲಿತಾ, ಅಣ್ಣಾದುರೈಗೆ ಭಾರತರತ್ನ ನೀಡಲು ತ.ನಾಡು ಸರಕಾರ ಮನವಿ
ನವದೆಹಲಿ, ಅಕ್ಟೋಬರ್ 8: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಸಿ.ಎನ್.ಅಣ್ಣಾದುರೈ ಹಾಗೂ ದಿವಂಗತ ಮುಖ್ಯಮಂತ್ರಿ ಜಯಲಲಿತಾಗೆ ಮರಣೋತ್ತರವಾಗಿ ಭಾರತರತ್ನ ಗೌರವ ನೀಡಬೇಕು ಎಂಬುದೂ ಸೇರಿ ಇಪ್ಪತ್ತು ಬೇಡಿಕೆಗಳನ್ನು ಈಡೇರಿಸುವಂತೆ ತ.ನಾಡು ಮುಖ್ಯಮಂತ್ರಿ ಎಡಪ್ಪಡಿ ಪಳನಿಸ್ವಾಮಿ ಪ್ರಧಾನಿಗೆ ಸೋಮವಾರ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಎಡಪ್ಪಡಿ ಪಳನಿಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಮಧ್ಯೆ ಅಧಿಕಾರಕ್ಕಾಗಿ ತಿಕ್ಕಾಟ ಆಗುತ್ತಿದೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ನಂತರ, ಮಧ್ಯಾಹ್ನದ ಮೇಲೆ ಪಳನಿಸ್ವಾಮಿ ಎಐಎಡಿಎಂಕೆ ಎಲ್ಲ ಸಂಸದರ ಜತೆಗೆ ಚರ್ಚೆ ನಡೆಸಲಿದ್ದಾರೆ.
ಜಯಲಲಿತಾಗೆ ಭಾರತರತ್ನ ಕೊಡಿ, ಸಂಸತ್ ನಲ್ಲಿ ಪುತ್ಥಳಿ ಸ್ಥಾಪಿಸಿ
ಇನ್ನೇನು ಸಂಸತ್ ನ ಚಳಿಗಾಲದ ಅಧಿವೇಶನ ನಡೆಯಲಿದೆ. ಆ ಸಂದರ್ಭದಲ್ಲಿ ರಫೇಲ್ ಯುದ್ಧ ವಿಮಾನ ಖರೀದಿ ವಿಚಾರವಾಗಿ ಕೇಂದ್ರ ಸರಕಾರವು ವಿರೋಧ ಪಕ್ಷಗಳಿಂದ ಭಾರೀ ಟೀಕೆ ಎದುರಿಸುವ ಸಾಧ್ಯತೆಗಳಿವೆ. ಇಂಥ ಸನ್ನಿವೇಶದಲ್ಲಿ ಮೂವತ್ತೇಳು ಸಂಸದರು ಹಾಗೂ ಹದಿಮೂರು ರಾಜ್ಯಸಭಾ ಸದಸ್ಯರನ್ನು ಹೊಂದಿರುವ ಎಐಎಡಿಎಂಕೆ ಪಕ್ಷದ ಬೆಂಬಲ ಬಿಜೆಪಿಗೆ ಬಹಳ ನಿರ್ಣಾಯಕವಾಗಿದೆ.
ಮೂವತ್ತೇಳು ಪುಟಗಳ ಮನವಿ ಪತ್ರ
ಮೂವತ್ತೇಳು ಪುಟಗಳ ಮನವಿ ಪತ್ರವನ್ನು ಪಳನಿಸ್ವಾಮಿ ಅವರು ಪ್ರಧಾನ ಮಂತ್ರಿಗಳಿಗೆ ಸಲ್ಲಿಸಿದ್ದಾರೆ. ದ್ರಾವಿಡ ಪಕ್ಷಗಳ ಸಿದ್ಧಾಂತವಾದಿ ಸ್ಥಾಪಕ ಸಿ.ಎನ್.ಅಣ್ಣಾದುರೈ ಎಂದು ಅವರನ್ನು ಬಣ್ಣಿಸಿದ್ದಾರೆ. ಇನ್ನು ಜಯಲಲಿತಾ ಅವರ ಆಡಳಿತಾವಧಿಯಲ್ಲಿ ತಮಿಳುನಾಡಿನ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿ ಅತ್ಯುತ್ತಮವಾಗಿತ್ತು ಎಂದಿದ್ದಾರೆ.
ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ
ಸಿ.ಎನ್.ಅಣ್ಣಾದುರೈ ಹಾಗೂ ಜಯಲಲಿತಾ ಅವರಿಗೆ ದೇಶದ ಅತ್ಯುನ್ನತ ಗೌರವವಾದ ಭಾರತರತ್ನ ದೊರೆಯಬೇಕು ಎಂದು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಸೆಪ್ಟೆಂಬರ್ ಒಂಬತ್ತನೇ ತಾರೀಕು ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಸ್ವೀಕರಿಸಲಾಗಿದೆ. ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಜಯಲಲಿತಾ ಕೊನೆಯ ದಿನಗಳ ಬಗ್ಗೆ ಕಾರು ಡ್ರೈವರ್ ಬಿಚ್ಚಿಟ್ಟ ಸತ್ಯ
ಎಂ.ಜಿ.ರಾಮಚಂದ್ರನ್ ಹೆಸರನ್ನು ಇಡಬೇಕು
ಚೆನ್ನೈ ಸೆಂಟ್ರಲ್ ಸ್ಟೇಷನ್ ಗೆ ಜನ್ಮ ಶತಮಾನ ವರ್ಷವಾದ ಪುರುಚ್ಚಿ ತಲೈವರ್ ಡಾ.ಎಂ.ಜಿ.ರಾಮಚಂದ್ರನ್ ಹೆಸರನ್ನು ಇಡಬೇಕು. ಮದುರೈ ಜಿಲ್ಲೆಯ ಥೊಪ್ಪೂರಿನಲ್ಲಿ ಆದಷ್ಟು ಶೀಘ್ರವಾಗಿ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸ್ಥಾಪನೆ ಕೆಲಸಗಳನ್ನು ಪೂರೈಸಬೇಕು ಎಂದು ಪ್ರಮುಖವಾದ ಬೇಡಿಕೆ ಇಡಲಾಗಿದೆ.
ತಮಿಳುನಾಡು ರಾಜಕಾರಣಿಗಳಿಗೆ ಹಿಂದಿನಿಂದಲೂ ಪ್ರಾಶಸ್ತ್ಯ
ತಮಿಳುನಾಡು ರಾಜಕಾರಣಿಗಳಿಗೆ ಬಹಳ ಹಿಂದಿನಿಂದಲೂ ಪ್ರಾಶಸ್ತ್ಯ ಸಿಕ್ಕಿದೆ. ಸಿ.ರಾಜಗೋಪಾಲಾಚಾರಿ, ಕಾಮರಾಜ ನಾಡಾರ್, ಡಾ.ಎಂ.ಜಿ.ರಾಮಚಂದ್ರನ್ ಇವರೆಲ್ಲರಿಗೂ ಭಾರತ ರತ್ನ ಗೌರವ ಸಿಕ್ಕಿದೆ. ಇದೀಗ ಅಣ್ಣಾದುರೈ ಹಾಗೂ ಜಯಲಲಿತಾ ಅವರಿಗೆ ಭಾರತ ರತ್ನ ಗೌರವ ಸಿಗಬೇಕು ಎಂಬ ಒತ್ತಡ ಕೇಳಲು ಆರಂಭವಾಗಿದೆ.