ಮುಂಗಾರು ಅಧಿವೇಶನ: ಉಭಯ ಸದನಗಳನ್ನು ನಡೆಸಲು ಬಿಡಲ್ಲ ಎಂದಿದ್ದೇಕೆ ಟಿಎಂಸಿ?
ನವದೆಹಲಿ, ಜುಲೈ 20: "ಪೆಗಾಸಸ್ ಬೇಹುಗಾರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಕ್ತ ಚರ್ಚೆಗೆ ಸರ್ಕಾರ ಅವಕಾಶ ನೀಡುವವರೆಗೂ ಲೋಕಸಭೆ ಮತ್ತು ರಾಜ್ಯಸಭೆ ಅಧಿವೇಶನ ನಡೆಸುವುದಕ್ಕೆ ತೃಣಮೂಲ ಕಾಂಗ್ರೆಸ್ ಪಕ್ಷವು ಅನುಮತಿಸುವುದಿಲ್ಲ," ಎಂದು ಟಿಎಂಸಿ ಸಂಸದ ದೆರೆಕ್ ಒಬ್ರಿಯನ್ ಎಚ್ಚರಿಕೆ ನೀಡಿದ್ದಾರೆ.
"ಕೇಂದ್ರ ಸರ್ಕಾರವು ಕೊರೊನಾವೈರಸ್ ವಿಚಾರವನ್ನೇ ಇಟ್ಟುಕೊಂಡು ರಾಜಕೀಯ ಮಾಡುವುದಕ್ಕೆ ನೋಡುತ್ತಿದೆ. ರೈತರ ಬಗ್ಗೆ ನಾವು ಚರ್ಚೆಗೆ ಬಯಸುವುದಿಲ್ಲ, ಕೃಷಿ ಕಾಯ್ದೆಗಳ ರದ್ದು ವಿಷಯವನ್ನೂ ಪ್ರಸ್ತಾಪಿಸಬೇಕಾಗಿಲ್ಲ. ನಾಳೆ ಪೆಗಾಸಸ್ ಹಗರಣದ ಬಗ್ಗೆ ಚರ್ಚೆ ನಡೆಸಬೇಕು, ಇಲ್ಲದೇ ಹೋದರೆ ಮುಂದಿನ ಆಗಸ್ಟ್ 13ರವರೆಗೂ ಟಿಎಂಸಿ ಸಂಸತ್ ಅಧಿವೇಶನಕ್ಕೆ ಹಾಜರಾಗುವುದಿಲ್ಲ," ಎಂದು ಹೇಳಿದರು.
ಪೆಗಾಸಸ್ ಬೇಹುಗಾರಿಕೆ: "ದೇಶದ ಪ್ರಗತಿ ಸಹಿಸದವರಿಂದ ಗೂಢಚರ್ಯೆ ಆರೋಪ"
"ತೃಣಮೂಲ ಕಾಂಗ್ರೆಸ್ ಪಕ್ಷದ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಸಂಸತ್ ಎದುರಿನ ಗಾಂಧಿ ಪ್ರತಿಮೆ ಎದುರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಪೆಗಾಸಸ್ ಬೇಹುಗಾರಿಕೆ ಮೂಲಕ ಟಿಎಂಸಿ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ವಿರೋಧ ಪಕ್ಷದ ನಾಯಕರು ಮತ್ತು ಪತ್ರಕರ್ತರ ಮೊಬೈಲ್ ಹ್ಯಾಕ್ ಮಾಡಿರುವುದರ ಬಗ್ಗೆ ಉಭಯ ಸದನಗಳಲ್ಲಿ ಮುಕ್ತ ಚರ್ಚೆ ನಡೆಸಬೇಕಿದೆ," ಎಂದು ಟಿಎಂಸಿ ಸಂಸದ ದೆರೆಕ್ ಒಬ್ರಿಯನ್ ತಿಳಿಸಿದ್ದಾರೆ.
ದೇಶದಲ್ಲಿ ಯಾರ ವಿರುದ್ಧ ಪೆಗಾಸಸ್ ಬೇಹುಗಾರಿಕೆ?
ಇಸ್ರೇಲ್ ಮೂಲದ ಪೆಗಾಸಸ್ ತಂತ್ರಾಂಶವನ್ನು ಬಳಸಿಕೊಂಡು ಭಾರತದಲ್ಲಿ ಬೇಹುಗಾರಿಕೆ ನಡೆಸಲಾಗುತ್ತಿದೆ ಎಂಬ ಆರೋಪ ತೀವ್ರ ಚರ್ಚೆಯನ್ನು ಹುಟ್ಟು ಹಾಕಿದೆ. ದೇಶದ ಪ್ರಮುಖ ರಾಜಕಾರಣಿಗಳು, ಕೇಂದ್ರ ಸಚಿವರು, ನ್ಯಾಯಾಧೀಶರು ಹಾಗೂ ಪತ್ರಕರ್ತರ ಮೊಬೈಲ್ ಸಂಖ್ಯೆ ಹ್ಯಾಕ್ ಮಾಡಲಾಗುತ್ತಿದೆ ಎಂದ ಆರೋಪವಿದೆ. ಈ ಬೇಹಾಗಾರಿಕೆಗೆ ಒಳಗಾದವರ ಪಟ್ಟಿಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಟಿಎಂಸಿ ಮುಖಂಡ ಅಭಿಷೇಕ್ ಬ್ಯಾನರ್ಜಿ, ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್, ಕೇಂದ್ರ ಸಚಿವರಾದ ಪ್ರಹ್ಲಾದ್ ಪಟೇಲ್ ಮತ್ತು ಅಶ್ವಿನಿ ವೈಷ್ಣವ್ ಜೊತೆಗೆ 40 ಮಂದಿ ಪತ್ರಕರ್ತರ ಹೆಸರು ಕೂಡ ಸೇರಿದೆ.
ಸೋಮವಾರ ಪೆಗಾಸಸ್ ಬಗ್ಗೆ ಶಾ ಉತ್ತರ:
ಇಸ್ರೇಲಿನ ಪೆಗಾಸಸ್ ತಂತ್ರಾಂಶದ ಮೂಲಕ ಬೇಹುಗಾರಿಕೆ ನಡೆಸಿ ಭಾರತದ ಪ್ರತಿಪಕ್ಷ ನಾಯಕರು, ಪತ್ರಕರ್ತರು, ಸುಪ್ರೀಂಕೋರ್ಟ್ ನ್ಯಾಯಾಧೀಶರು ಸೇರಿದಂತೆ 300ಕ್ಕೂ ಹೆಚ್ಚು ಜನರ ಮೇಲೆ ಕಣ್ಣಿರಿಸಲಾಗಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರಿಸಿದ್ದರು. "ಕಳೆದ 2017 ರಿಂದ 2019ರ ಅವಧಿಯಲ್ಲಿ ಸ್ನೋಬಾಲ್ ಸ್ಕ್ಯಾಂಡಲ್ ಮೂಲಕ ಬೇಹುಗಾರಿಕೆ ನಡೆಸಿ ಮೊಬೈಲ್ ಸಂಖ್ಯೆಗಳನ್ನು ಕದಿಯಲಾಗಿತ್ತು. ಭಾರತದಲ್ಲಿ 300ಕ್ಕೂ ಹೆಚ್ಚು ಜನರ ಮೊಬೈಲ್ ಮೇಲೆ ಬೇಹುಗಾರಿಕೆ ನಡೆಸಲಾಗಿತ್ತು ಎಂಬ ಆರೋಪವಿದ್ದರೂ ಯಾವುದೇ ಸಾಕ್ಷಾಧಾರಗಳು ಇರಲಿಲ್ಲ," ಎಂದು ಸಚಿವ ಅಮಿತ್ ಶಾ ಉಲ್ಲೇಖಿಸಿದ್ದರು.