ಸಂಸತ್ತಿನಲ್ಲಿ ಐಕ್ಯತೆಗೆ ಟಿಎಂಸಿ ಅಸ್ತು, ಆದರೆ ಕಾಂಗ್ರೆಸ್ ಜೊತೆ ಮಾತ್ರ..
ನವದೆಹಲಿ, ನವೆಂಬರ್ 28: ತೃಣಮೂಲ ಕಾಂಗ್ರೆಸ್ ಈಗ ದೇಶದಲ್ಲಿ ವೇಗವಾಗಿ ತನ್ನ ವ್ಯಾಪ್ತಿಯನ್ನು ವಿಸ್ತಾರ ಮಾಡುತ್ತಿದೆ. ಈಗ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಮುಂಚಿತವಾಗಿ ಭಿನ್ನಾಭಿಪ್ರಾಯವನ್ನು ಸರಿಪಡಿಸಿಕೊಂಡಿರುವ ಟಿಎಂಸಿ ಸಂಯುಕ್ತ ವಿರೋಧ ಪಕ್ಷದ ಭಾಗವಾಗಿ ತಾನು ಉಳಿಯುವುದು ಎಂದು ಭರವಸೆ ನೀಡಿದೆ. ಆದರೆ ಕಾಂಗ್ರೆಸ್ ಜೊತೆಗಿನ ನಂಟು ಇತರೆ ಪಕ್ಷಗಳ ಜೊತೆ ಇರುವಂತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಬಗ್ಗೆ ಪಕ್ಷದ ಹಿರಿಯ ನಾಯಕ ಡೆರೆಕ್ ಓ ಬ್ರಿಯಾನ್ ಮಾಹಿತಿ ನೀಡಿದ್ದಾರೆ. "ಸಾಮಾನ್ಯ ವಿಷಯವೂ ಎಲ್ಲಾ ವಿರೋಧ ಪಕ್ಷಗಳನ್ನು ಜೊತೆಗೂಡಿಸುತ್ತದೆ. ಆದರೆ ಈ ಸಂದರ್ಭದಲ್ಲೇ ಆರ್ಜೆಡಿ, ಡಿಎಂಕೆ, ಆರ್ಜೆಡಿ ಮತ್ತು ಸಿಪಿಎಂ ನಡುವೆ ವ್ಯತ್ಯಾಸವಿದೆ ಎಂದು ನಾನು ಗಮನಿಸಬೇಕು. ಇವೆಲ್ಲವೂ ಕೂಡಾ ಕಾಂಗ್ರೆಸ್ನ ಚುನಾವಣಾ ಮಿತ್ರ ಪಕ್ಷಗಳು. ಎನ್ಸಿಪಿ-ಶಿವಸೇನೆ ಹಾಗೂ ಜೆಎಂಎಂ ಕಾಂಗ್ರೆಸ್ನ ಜೊತೆಯಲ್ಲಿ ಸರ್ಕಾರ ನಡೆಸುತ್ತದೆ," ಎಂದು ತಿಳಿಸಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನ: ಸರ್ಕಾರ ಕರೆದ ಸರ್ವಪಕ್ಷ ಸಭೆಗೆ ಮೋದಿ ಗೈರು
"ಕಾಂಗ್ರೆಸ್ನ ನಮ್ಮ ಚುನಾವಣಾ ಮಿತ್ರ ಪಕ್ಷವಲ್ಲ. ಹಾಗೆಯೇ ನಾವು ಕಾಂಗ್ರೆಸ್ನ ಜೊತೆಗೂಡಿ ಸರ್ಕಾರವನ್ನು ಕೂಡಾ ನಡೆಸುತ್ತಿಲ್ಲ. ಅದು ವ್ಯತ್ಯಾಸವಿದೆ," ಎಂದಿದ್ದಾರೆ. ತೃಣಮೂಲ ಕಾಂಗ್ರೆಸ್ ಒಮ್ಮೆ ಯುಪಿಎನ ಮಿತ್ರ ಪಕ್ಷ ಆಗಿತ್ತು. ಆದರೆ ಬಳಿಕ 2012 ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಈ ಮೈತ್ರಿ ಕೂಟದಿಂದ ಹೊರನಡೆದಿದೆ. 2014 ರವರೆಗೆ ಈ ಸಮಾಜವಾದಿ ಪಕ್ಷ ಹಾಗೂ ಮಾಯಾವತಿಯ ಬಹುಜನ ಸಮಾಜ ಪಕ್ಷದ ಬೆಂಬಲದಿಂದ ಸರ್ಕಾರವು ನಡೆದಿದೆ.
ಚುನಾವಣಾ ಓಟದಲ್ಲಿ ಟಿಎಂಸಿ
ಕಳೆದ ಹಲವು ತಿಂಗಳುಗಳಿಂದ ತೃಣಮೂಲ ಕಾಂಗ್ರೆಸ್ ಪಕ್ಷವು ರಾಜಕೀಯದಲ್ಲಿ ಚುನಾವಣಾ ಓಟದಲ್ಲಿ ತೊಡಗಿದೆ. ಈ ಚುನಾವಣಾ ಓಟದಲ್ಲಿ ಬೇರೆ ಪಕ್ಷಗಳು ಅತೃಪ್ತ ನಾಯಕರುಗಳನ್ನು ತಮ್ಮ ಪಕ್ಷದೆಡೆ ಸೆಳೆದುಕೊಳ್ಳುತ್ತಿದೆ. ಗೋವಾ, ಪಂಜಾಬ್, ಮಣಿಪುರ, ಉತ್ತರ ಪ್ರದೇಶ, ಉತ್ತರಾಖಂಡದಲ್ಲಿ ಮುಂದಿನ ವರ್ಷದಲ್ಲೇ ವಿಧಾನಸಭೆ ಚುನಾವಣೆಯು ನಡೆಯಲಿದ್ದು, ಈ ನಿಟ್ಟಿನಲ್ಲಿ ಟಿಎಂಸಿ ಬಹಳ ಸೂಕ್ಷ್ಮವಾಗಿ ತಂತ್ರಗಾರಿಕೆಯನ್ನು ನಡೆಸುತ್ತಿದೆ. ಮೇಘಾಲಯದಲ್ಲಿ ಟಿಎಂಸಿ ಪ್ರಧಾನ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ನ 12 ಶಾಸಕರು ಟಿಎಂಸಿ ಸೇರುವ ಮೂಲಕ ಈ ಬೆಳವಣಿಗೆಯೂ ನಡೆದಿದೆ. ಇಂದು ತ್ರಿಪುರಾದಲ್ಲಿ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ. ಸಿಪಿಎಂಗಿಂತ ಅಧಿಕ ಮತವನ್ನು ಗಳಿಸುವ ಮೂಲಕ ಟಿಎಂಸಿ ಪ್ರಮುಖ ವಿಪಕ್ಷವಾಗಿದೆ ಎಂದು ಹೇಳಿಕೊಂಡಿದೆ.
ಸರ್ವಪಕ್ಷ ಸಭೆ
ನವೆಂಬರ್ 29 ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರವು ಇಂದು ಸರ್ವ ಪಕ್ಷ ಸಭೆಯನ್ನು ಕರೆದಿತ್ತು. ಆದರೆ ಸರ್ಕಾರ ಕರೆದ ಈ ಸರ್ವ ಪಕ್ಷ ಸಭೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗೈರು ಹಾಜರಾಗಿದ್ದಾರೆ. ಈ ಸಭೆಗೆ ವಿರೋಧ ಪಕ್ಷದ ನಾಯಕರುಗಳು ಹಾಜರಾಗಿದ್ದಾರೆ. ಸಭೆಯಲ್ಲಿ ಕಾಂಗ್ರೆಸ್ನಿಂದ ಮಲ್ಲಿಕಾರ್ಜುನ ಖರ್ಗೆ, ಅಧೀರ್ ಆರ್ ಚೌಧರಿ ಹಾಗೂ ಆನಂದ್ ಶರ್ಮಾ ಹಾಜರಾಗಿದ್ದು, ಟಿಎಂಸಿಯಿಂದ ಸುದೀಪ್ ಬ್ಯಾನರ್ಜಿ ಹಾಗೂ ಡೆರೆಕ್ ಓಬ್ರಿಯಾನ್ ಹಾಜರಾಗಿದ್ದಾರೆ. ಇನ್ನು ಉಳಿದಂತೆ ಟಿಆರ್ ಬಾಲು ಹಾಗೂ ಟಿ ಶಿವ ಡಿಎಂಕೆ ಪಕ್ಷದ ಪರವಾಗಿ ಹಾಗೂ ಶರದ್ ಪವಾರ್ ಎನ್ಸಿಪಿ ಪಕ್ಷದ ಪರವಾಗಿ ಹಾಜರಾಗಿದ್ದಾರೆ. ಇನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಭೆಗೆ ಹಾಜರು ಆಗದ ಬಗ್ಗೆ ಮಾತನಾಡಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, "ಇಂದು ನಡೆ ಸಭೆಗೆ ಪ್ರಧಾನಿ ಮೋದಿ ಹಾಜರಾಗುತ್ತಾರೆ ಎಂದು ನಾವು ನಿರೀಕ್ಷೆ ಹೊಂದಿದ್ದೆವು. ಆದರೆ ಕೆಲವು ಕಾರಣದಿಂದಾಗಿ ಪ್ರಧಾನಿ ಮೋದಿಯು ಈ ಸಭೆಗೆ ಹಾಜರಾಗಿಲ್ಲ," ಎಂದು ತಿಳಿಸಿದ್ದಾರೆ.
"ಸರ್ಕಾರವು ಕೃಷಿ ಕಾಯ್ದೆಯನ್ನು ಹಿಂದಕ್ಕೆ ಪಡೆದಿದೆ. ಆದರೆ ಈ ಘೋಷಣೆಯನ್ನು ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾವು ರೈತರಿಗೆ ಈ ಕೃಷಿ ಕಾಯ್ದೆಯನ್ನು ವಿವರಿಸುವಲ್ಲಿ ವಿಫಲವಾಗಿದ್ದೇವೆ ಎಂದು ಹೇಳಿದ್ದಾರೆ. ಅಂದರೆ ಈ ಕೃಷಿ ಕಾನೂನನ್ನು ಸರ್ಕಾರ ಬೇರೆಯೇ ಹೆಸರಲ್ಲಿ ಭವಿಷ್ಯದಲ್ಲಿ ಜಾರಿಗೆ ತರುವ ಸಾಧ್ಯತೆ ಇದೆ," ಎಂದು ಮಲ್ಲಿಕಾರ್ಜುನ ಖರ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
Recommended Video
(ಒನ್ಇಂಡಿಯಾ ಸುದ್ದಿ)