ಪಾಕ್ ಉಗ್ರರ ಬೆದರಿಕೆ - ಅರ್ನಬ್ ಗೋಸ್ವಾಮಿಗೆ ಬಿಗಿ ಭದ್ರತೆ
ನವದೆಹಲಿ, ಅಕ್ಟೋಬರ್ 17: ಟೈಮ್ಸ್ ನೌ ಸುದ್ದಿ ವಾಹಿನಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿಗೆ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಯಿಂದ ಬೆದರಿಕೆಯಿದ್ದು, ಸರಕಾರದಿಂದ 'ವೈ' ದರ್ಜೆಯ ರಕ್ಷಣೆ ನೀಡಲಾಗುವುದು. ಈ ದರ್ಜೆಯಡಿ ಇಪ್ಪತ್ತು ರಕ್ಷಣಾ ಸಿಬ್ಬಂದಿ ಹಾಗೂ ಇಬ್ಬರು ಅಧಿಕಾರಿಗಳು ರಕ್ಷಣೆ ಒದಗಿಸಲಾಗುವುದು. ಇದಕ್ಕೆ ಅರ್ನಬ್ ಅವರಿಂದ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ.
ಆಯಾ ವ್ಯಕ್ತಿಯ ಹುದ್ದೆ ಹಾಗೂ ಬೆದರಿಕೆಯ ಆಧಾರದಲ್ಲಿ ಸರಕಾರವು ರಕ್ಷಣೆ ಒದಗಿಸುತ್ತದೆ. ಮೊದಲನೆಯದು ಹುದ್ದೆ ಅಂದರೆ ಸಂಪುಟ ಸಚಿವರು, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಹೀಗೆ. ಇನ್ನು ಎರಡನೆಯದು- ವ್ಯಕ್ತಿಗೆ ಬಂದ ಬೆದರಿಕೆ ಯಾವ ಮಟ್ಟದ್ದು ಎಂದು ಗುಪ್ತಚರ ಇಲಾಖೆ ಪರಿಶೀಲಿಸಿ, ನಿರ್ಧಾರ ಕೈಗೊಳ್ಳುತ್ತದೆ.[ರಾಹುಲ್ ಸಂದರ್ಶಿಸಿದ ಅರ್ನಬ್ ಗೋಸ್ವಾಮಿ ಯಾರು]
ಗುಪ್ತಚರ ಇಲಾಖೆಯು ಅರ್ನಬ್ ಗೋಸ್ವಾಮಿಯವರಿಗೆ ಬಂದ ಬೆದರಿಕೆಯನ್ನು ಪರಾಂಬರಿಸಿದ ನಂತರ ರಕ್ಷಣೆ ನೀಡಲು ನಿರ್ದರಿಸಲಾಗಿದೆ. ಇಲಾಖೆ ಶಿಫಾರಸಿನ ಪ್ರಕಾರ ನಡೆದುಕೊಳ್ತೇವೆ. ಟೈಮ್ಸ್ ನೌನಲ್ಲಿ ಉಗ್ರರ ವಿರುದ್ಧ ಅರ್ನಬ್ ನೀಡಿದ ಹೇಳಿಕೆ ಕಾರಣಕ್ಕೆ ಪಾಕ್ ಮೂಲದ ಉಗ್ರ ಸಂಘಟನೆಯಿಂದ ಬೆದರಿಕೆಯಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅರ್ನಬ್ ಗೋಸ್ವಾಮಿ ಮುಂಬೈನಲ್ಲಿ ವಾಸವಿದ್ದು, ಅವರ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಮಹಾರಾಷ್ಟ್ರ ಪೊಲೀಸ್ ಇಲಾಖೆಗೆ ಕೇಂದ್ರ ಸರಕಾರ ಕೇಳುವ ಸಾಧ್ಯತೆ ಇದೆ. 'ಜೆಡ್ ಪ್ಲಸ್' (40 ರಕ್ಷಣಾ ಸಿಬ್ಬಂದಿ ಜೊತೆಗೆ ಎರಡು ಬೆಂಗಾವಲು ವಾಹನ), "ಜೆಡ್'(30 ರಕ್ಷಣಾ ಸಿಬ್ಬಂದಿ ಜೊತೆಗೆ ಬೆಂಗಾವಲು ವಾಹನ), 'ವೈ' (ಇಪ್ಪತ್ತು ರಕ್ಷಣಾ ಸಿಬ್ಬಂದಿ) ಮತ್ತು 'ಎಕ್ಸ್' (ನಾಲ್ವರು ರಕ್ಷಣಾ ಸಿಬ್ಬಂದಿ) ಈ ರೀತಿ ಸರಕಾರವು ನಾಲ್ಕು ದರ್ಜೆಯ ರಕ್ಷಣೆ ಒದಗಿಸುತ್ತದೆ.[ಮೋದಿ ಜತೆಗಿನ ಅರ್ನಬ್ ಗೋಸ್ವಾಮಿ ಸಂದರ್ಶನ ಇಲ್ಲಿದೆ]
ಕೇಂದ್ರ ಸರಕಾರದಿಂದ ಈ ರೀತಿ ರಕ್ಷಣೆ ದೊರೆಯುತ್ತಿರುವ ಮೊದಲ ಪತ್ರಕರ್ತರೇನಲ್ಲ ಅರ್ನಬ್ ಗೋಸ್ವಾಮಿ. ಜೀ ನ್ಯೂಸ್ ನ ಸುಧೀರ್ ಚೌಧರಿ (ಎಕ್ಸ್ ದರ್ಜೆ), ಸಮಾಚಾರ್ ಪ್ಲಸ್ ನ ಉಮೇಶ್ ಕುಮಾರ್ (ವೈ ದರ್ಜೆ), ಅಶ್ವಿನಿ ಕುಮಾರ್ ಚೋಪ್ರಾ (ಜೆಡ್ ಪ್ಲಸ್ ದರ್ಜೆ) ಅವರಿಗೆ ರಕ್ಷಣೆ ಒದಗಿಸಲಾಗಿದೆ.
ಚೋಪ್ರಾ ದೆಹಲಿಯಲ್ಲಿ ಪಂಜಾಬ್ ಕೇಸರಿ ಎಂಬ ಪತ್ರಿಕೆ ನಡೆಸುತ್ತಾರೆ. ಜೊತೆಗೆ ಬಿಜೆಪಿಯ ಲೋಕಸಭೆ ಸದಸ್ಯರೂ ಹೌದು. ಮೂರು ದಶಕಗಳ ಹಿಂದಿನಿಂದ ಅವರಿಗೆ ಈ ರಕ್ಷಣೆ ಒದಗಿಸಲಾಗಿದೆ. ಉಗ್ರರು ಪಂಜಾಬ್ ನಲ್ಲಿ ಚೋಪ್ರಾ ಅವರ ತಂದೆ ಹಾಗೂ ತಾತನನ್ನು ಕೊಂದಿದ್ದರು. ಆ ನಂತರ ಅವರಿಗೆ ರಕ್ಷಣೆ ನೀಡಲಾಗಿದೆ.