ರಾಜಸ್ತಾನ ವಿಧಾನಸಭೆ ಬಿಜೆಪಿ ಟಿಕೆಟ್ ಬಗ್ಗೆ ಕೊನೆಯಾಗದ ಚರ್ಚೆ
ರಾಜಸ್ತಾನ ವಿಧಾನಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಇನ್ನೂ ಕೆಲ ದಿನ ಅಂತಿಮವಾಗುವಂತೆ ಕಾಣುತ್ತಿಲ್ಲ. ಇನ್ನಷ್ಟು ಸುತ್ತಿನ ಚರ್ಚೆ ನಡೆದ ನಂತರ ಹೆಸರು ಆಖೈರು ಮಾಡುವ ಸಾಧ್ಯತೆ ಇದೆ. ಕ್ಷೇತ್ರವಾರು ಸಮೀಕ್ಷೆಯೇನೋ ಪೂರ್ಣಗೊಂಡಿದೆ. ಅದಕ್ಕೆ ಸಂಬಂಧಿಸಿದ ಸಂಪೂರ್ಣ ದತ್ತಾಂಶವೂ ಕಲೆಹಾಕಲಾಗಿದೆ. ಆದರೆ ಅಭ್ಯರ್ಥಿಗಳ ಆಯ್ಕೆ ಇನ್ನಷ್ಟು ತಡವಾಗಲಿದೆ.
ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ರಾಜಸ್ತಾನದ ಉಸ್ತುವಾರಿಯಾಗಿ ಮಾಡಲಾಗಿದೆ. ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಅವರು ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ವರ್ಚಸ್ಸು ಹೆಚ್ಚಿಸುವುದನ್ನು ಅವರು ಆದ್ಯತೆ ಮೇಲೆ ಮಾಡುತ್ತಿದ್ದಾರೆ ಎನ್ನುತ್ತವೆ ಮೂಲಗಳು. ಪಕ್ಷದೊಳಗಿನ ಸಾಮಾಜಿಕ ಮಾಧ್ಯಮ ಘಟಕ, ಮಾಧ್ಯಮ ಘಟಕ, ವಕ್ತಾರರು ಒಟ್ಟಾರೆ ಪಕ್ಷಕ್ಕೆ ಆಂತರಿಕವಾಗಿ ಬಲ ತುಂಬಲು ಜಾವಡೇಕರ್ ಶ್ರಮಿಸುತ್ತಿದ್ದಾರೆ.
ರಾಜಸ್ಥಾನದಲ್ಲಿ ಬಿಜೆಪಿಗೆ ಶಾಪವಾಗಲಿದೆ ಬಂಡಾಯದ ಬಿಸಿ!
ಎಲ್ಲಕ್ಕಿಂತ ಮುಖ್ಯವಾಗಿ ಕೇಸರಿ ಪಕ್ಷಕ್ಕೆ ಗೆಲ್ಲುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದೆ. ಈ ಗುಂಪಿಗೆ ಅಷ್ಟು, ಆ ಗುಂಪಿಗೆ ಇಷ್ಟು ಎಂದು ಸುಮ್ಮನೆ ಟಿಕೆಟ್ ಹಂಚಿಕೆ ಮಾಡುವುದು ಬೇಕಿಲ್ಲ. ಆ ಕಾರಣದಿಂದಲೇ ಪ್ರತಿ ಅಭ್ಯರ್ಥಿಯೂ ಜಾವಡೇಕರ್ ಪಾಲಿಗೆ ಗಂಭೀರ ಆಯ್ಕೆಯಾಗಲಿದ್ದಾರೆ ಎನ್ನುತ್ತವೆ ಮೂಲಗಳು.
ವಸುಂಧರಾ ರಾಜೇ-ಓಂ ಮಾಥುರ್ ಭೇಟಿ
ಅಂತಿಮ ಹಂತದ ಆಯ್ಕೆಗೂ ಮುನ್ನ ಇನ್ನಷ್ಟು ಸುತ್ತಿನ ಚರ್ಚೆ ಆಗಬೇಕಿದೆ ಎನ್ನುತ್ತಾರೆ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಓಂ ಮಾಥುರ್. ಪಕ್ಷದ ಅಧ್ಯಕ್ಷ ಅಮಿತ್ ಶಾರನ್ನು ದೆಹಲಿಯಲ್ಲಿ ಭೇಟಿ ಆಗುವ ಮುನ್ನ ಜೈಪುರದಲ್ಲಿ ಮಾಥುರ್ ರನ್ನು ಮುಖ್ಯಮಂತ್ರಿ ವಸುಂಧರಾ ರಾಜೇ ಭೇಟಿ ಆಗಿದ್ದಾರೆ.
ಒಮ್ಮತದ ತೀರ್ಮಾನವೇ ತೆಗೆದುಕೊಳ್ತೀವಿ
ಆ ಭೇಟಿ ನಂತರ ಮಾತನಾಡಿದ ಮಾಥುರ್, ಟಿಕೆಟ್ ಹಂಚಿಕೆ ವಿಚಾರವಾಗಿ ಇನ್ನೂ ಒಮ್ಮತದ ತೀರ್ಮಾನಕ್ಕೆ ಬಂದಿಲ್ಲ. ಬಿಜೆಪಿಯಲ್ಲಿ ಯಾವಾಗಲೂ ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ. ಒಟ್ಟಿನಲ್ಲಿ ಪಕ್ಷದಲ್ಲಿ ಗೊಂದಲ ಹಾಗೇ ಮುಂದುವರಿದಿರುವುದು ಸತ್ಯ.
ರಾಜಸ್ಥಾನದಲ್ಲಿ ಬಿಜೆಪಿಗೆ ಬಹುದೊಡ್ಡ ತಲೆನೋವಾಗಲಿರುವ ರಾಮ್ ರಹೀಮ್!
ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜತೆಗೂ ಚರ್ಚೆ
ಸದ್ಯದಲ್ಲೇ ಪಕ್ಷದ ರಾಷ್ಟ್ರಾಧ್ಯಕ್ಷರನ್ನು ಭೇಟಿಯಾಗಿ, ಚರ್ಚೆ ನಡೆಸುತ್ತೇವೆ. ಟಿಕೆಟ್ ಘೋಷಣೆಗೂ ಮುನ್ನ ಇನ್ನಷ್ಟು ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆ ಇದೆ ಎಂದು ಮಾಥುರ್ ಹೇಳಿದ್ದಾರೆ. ಇನು ವಸುಂಧರಾ ರಾಜೇ ಅವರ ಭೇಟಿಗೂ ಮುನ್ನ ಮಾಥುರ್, ರಾಜಸ್ತಾನ ಸರಕಾರದ ಸಚಿವ ರಾಜೇಂದ್ರ ರಾಥೋಡ್ ನನ್ನು ಸಹ ಭೇಟಿಯಾಗಿದ್ದು, ದೀರ್ಘ ಕಾಲದ ಚರ್ಚೆ ನಡೆಸಿದ್ದಾರೆ.
ಟೈಮ್ಸ್ ನೌ ಸಮೀಕ್ಷೆ: ರಾಜಸ್ಥಾನದಲ್ಲಿ ಪುಟಿದೇಳಲಿದೆ ಕಾಂಗ್ರೆಸ್, ಕುಸಿಯಲಿದೆ ಬಿಜೆಪಿ
79 ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ
ಇಬ್ಬರೂ ನಾಯಕರು ಪಕ್ಷದ ರಾಷ್ಟ್ರಾಧ್ಯಕ್ಷರನ್ನು ಭೇಟಿ ಮಾಡಲು ದೆಹಲಿಯಲ್ಲಿ ಇದ್ದಾರೆ. ರಾಜಸ್ತಾನ ವಿಧಾನಸಭೆಯ 79 ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ಆಗಿದೆ. ಆದರೆ ಚರ್ಚೆ ಮುಂದುವರಿದಿದೆ. ರಾಜಸ್ತಾನದಲ್ಲಿ ಚುನಾವಣೆ ಪ್ರಚಾರದ ನೇತೃತ್ವದ ವಹಿಸಿರುವ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ರನ್ನು ಅಮಿತ್ ಶಾ ಭೇಟಿ ಆಗಿ, ಚರ್ಚೆ ನಡೆಸಲಿದ್ದಾರೆ. ಇನ್ನು ಪಕ್ಷದ ರಾಷ್ಟ್ರೀಯ ಸಂಘಟನಾ ಜಂಟಿ ಪ್ರಧಾನ ಕಾರ್ಯದರ್ಶಿ ವಿ.ಸತೀಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್ ಜತೆಗೂ ಟಿಕೆಟ್ ಹಂಚಿಕೆ ಮಾತ್ರವಲ್ಲದೆ ರಾಜಸ್ತಾನದ ಒಟ್ಟಾರೆ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಲಿದ್ದಾರೆ.