ಹೊಸ ಸಂಸತ್ ಭವನಕ್ಕೆ ಮೂರು ಸುರಂಗ ಮಾರ್ಗ; ಸಂಪರ್ಕ ಕಲ್ಪಿಸುವುದೆಲ್ಲಿಗೆ?
ನವದೆಹಲಿ, ಮಾರ್ಚ್ 4: ನವದೆಹಲಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸಂಸತ್ ಭವನದಲ್ಲಿ ಮೂರು ಸುರಂಗಗಳನ್ನು ನಿರ್ಮಿಸಲಾಗುತ್ತಿದ್ದು, ಈ ಸುರಂಗಗಳು ಪ್ರಧಾನಿ ನಿವಾಸ, ಉಪ ರಾಷ್ಟ್ರಪತಿ ನಿವಾಸಕ್ಕೆ ಸಂಪರ್ಕ ಕಲ್ಪಿಸಲಿವೆ. ಜೊತೆಗೆ ಸಂಸದರು ತಮ್ಮ ಕೊಠಡಿಗೆ ತೆರಳಲು ಮಾರ್ಗವಾಗಲಿವೆ ಎಂದು ತಿಳಿದುಬಂದಿದೆ.
ತ್ರಿಕೋನಾಕಾರದ ವಿನ್ಯಾಸದಲ್ಲಿ ನಿರ್ಮಾಣವಾಗಲಿರುವ ಸಂಸತ್ ಭವನದಲ್ಲಿ ಹಲವು ವಿಶೇಷತೆಗಳಿದ್ದು, ಈ ವಿಶೇಷತೆಗಳಲ್ಲಿ ಸುರಂಗ ಮಾರ್ಗವೂ ಒಂದಾಗಲಿದೆ. ಗಣ್ಯಾತಿಗಣ್ಯರ ಭದ್ರತೆಗೆ ಅನುಕೂಲವಾಗುವ ದೃಷ್ಟಿಯಿಂದ ಈ ಸುರಂಗ ನಿರ್ಮಾಣ ಮಾಡುತ್ತಿದ್ದು, ಕಟ್ಟಡ ವಿನ್ಯಾಸದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ರೂಪಿಸುವುದಾಗಿ ತಿಳಿದುಬಂದಿದೆ. ಮುಂದೆ ಓದಿ...
862 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ
ನೂತನ ಸಂಸತ್ ಭವನವನ್ನು 862 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಸಂಸತ್ತಿನ ಕಟ್ಟಡ ನಿರ್ಮಾಣ ಹಾಗೂ ಪುನರಾಭಿವೃದ್ಧಿಯನ್ನು ಪೂರ್ಣಗೊಳಿಸಲು ಸರ್ಕಾರ ಸಮಯ ನಿಗದಿಪಡಿಸಿದೆ. ಈ ಯೋಜನೆಯ ರೂವಾರಿ ಸೆಂಟ್ರಲ್ ವಿಸ್ಟಾ ಸಮಿತಿ ತನ್ನ ಕಾರ್ಯವನ್ನು ಈ ನವೆಂಬರ್ನಲ್ಲಿ ಪೂರೈಸಲಿದೆ. ಸಂಸತ್ ಕಟ್ಟಡ ನಿರ್ಮಾಣ ಕೆಲಸ ಮಾರ್ಚ್ 2022ರಲ್ಲಿ ಪೂರ್ಣಗೊಳ್ಳಲಿದೆ. 2022ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಲಿದ್ದು, ಆಗಲೇ ಈ ಕಟ್ಟಡದ ಉದ್ಘಾಟನೆ ನೆರವೇರಿಸಲು ಯೋಜನೆ ರೂಪಿಸಲಾಗಿದೆ.
ನೂತನ ಸಂಸತ್ ಭವನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿ
ಪ್ರಧಾನಿ ಹಾಗೂ ರಾಷ್ಟ್ರಪತಿಗಳ ನಿವಾಸಕ್ಕೆ ಸುರಂಗ
ಸೆಂಟ್ರಲ್ ವಿಸ್ಟಾ ಯೋಜನೆಯಡಿಯಲ್ಲಿ, ಸೌತ್ ಬ್ಲಾಕ್ನಲ್ಲಿ ಪ್ರಧಾನಿ ನಿವಾಸ ಹಾಗೂ ಕಚೇರಿ ನಿರ್ಮಾಣವಾಗಲಿದೆ. ನಾರ್ಥ್ ಬ್ಲಾಕ್ನಲ್ಲಿ ರಾಷ್ಟ್ರಪತಿಗಳ ನಿವಾಸ ಇರಲಿದೆ. ಸದ್ಯಕ್ಕೆ ಸಾರಿಗೆ ಹಾಗೂ ಶ್ರಮಶಕ್ತಿ ಭವನ ಇರುವ ಜಾಗದಲ್ಲಿ ಸಂಸದರ ಕೊಠಡಿಗಳನ್ನು ನಿರ್ಮಿಸಲಾಗುವುದು ಎಂದು ತಿಳಿದುಬಂದಿದೆ. ಈ ಸ್ಥಳಗಳಿಂದ ಸಂಸತ್ ಭವನಕ್ಕೆ ತೆರಳಲು ಸುರಂಗ ಮಾರ್ಗಗಳ ನಿರ್ಮಾಣವಾಗುತ್ತಿದೆ ಎನ್ನಲಾಗಿದೆ.
ಗಣ್ಯಾತಿಗಣ್ಯರಿಗೆ ಭದ್ರತೆ ನೀಡುವ ಆದ್ಯತೆ
ಪ್ರಸ್ತಾವಿತ ಅಭಿವೃದ್ಧಿ ಯೋಜನೆ ಪ್ರಕಾರ, ಪ್ರವಾಸಿಗರಿಗೆ ಹಾಗೂ ಇಲ್ಲಿ ಭೇಟಿ ನೀಡುವವರಿಗೆ ಪ್ರತ್ಯೇಕ ಮಾರ್ಗ ಇರಲಿದ್ದು, ಗಣ್ಯರಿಗೆ ಭದ್ರತೆ ಒದಗಿಸಲು ಪ್ರತ್ಯೇಕ ಸುರಂಗ ನಿರ್ಮಾಣ ಮಾಡಲಾಗುತ್ತಿದೆ. ಇವು ಸಾರ್ವಜನಿಕ ಸಂಪರ್ಕದಿಂದ ಹೊರತಾಗಿರುತ್ತವೆ. ಗಣ್ಯರಿಗೆ ಬಿಗಿ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದೆ ಎಂದು ತಿಳಿದುಬಂದಿದೆ. ಈ ಸುರಂಗಗಳನ್ನು ಗಣ್ಯಾತಿಗಣ್ಯರು ಮಾತ್ರ ಬಳಸಲು ಅವಕಾಶ ಕಲ್ಪಿಸಲಾಗಿದೆ.
ಹೊಸ ಸಂಸತ್ ಕಟ್ಟಡ ಯೋಜನೆ: ಸುಪ್ರೀಂಕೋರ್ಟ್ ಷರತ್ತುಬದ್ಧ ಅನುಮತಿ
ಡಿಸೆಂಬರ್ನಲ್ಲಿ ಶಂಕು ಸ್ಥಾಪನೆ ನೆರವೇರಿಸಿದ್ದ ಪ್ರಧಾನಿ
ಕಳೆದ ಡಿಸೆಂಬರ್ 10ರಂದು ಪ್ರಧಾನಿ ಮೋದಿ ನೂತನ ಸಂಸತ್ ಭವನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಭವನದ ನಿರ್ಮಾಣದಲ್ಲಿ ಹಸಿರು ತಂತ್ರಜ್ಞಾನದ ಪರಿಣಾಮಕಾರಿ ಸಂಪನ್ಮೂಲವನ್ನು ಬಳಸಿಕೊಳ್ಳಲಾಗುತ್ತಿದ್ದು, ಪರಿಸರಸ್ನೇಹಿ ಪದ್ಧತಿಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಜೊತೆಗೆ ಉದ್ಯೋಗಾವಕಾಶಗಳ ಸೃಷ್ಟಿಗೆ ಹಾಗೂ ಆರ್ಥಿಕ ಪುನರುಜ್ಜೀವನಕ್ಕೆ ನೆರವು ನೀಡಲಾಗುತ್ತಿದೆ. ಇದರಲ್ಲಿ ಉನ್ನತ ಗುಣಮಟ್ಟದ ಧ್ವನಿಜ್ಞಾನ ಮತ್ತು ದೃಶ್ಯ ಹಾಗೂ ಶ್ರವಣ ಸೌಕರ್ಯಗಳು, ಸುಧಾರಿತ ಮತ್ತ ಆರಾಮ ಆಸನ ವ್ಯವಸ್ಥೆ, ಪರಿಣಾಮಕಾರಿ ಮತ್ತು ತುರ್ತು ತೆರವು ಅವಕಾಶಗಳನ್ನು ಕಲ್ಪಿಸಲಾಗಿದೆ ಎಂದು ವಿವರಿಸಿದ್ದರು.